
ನವದೆಹಲಿ (ಏ.4): ವಿವಾಹಿತ ಮಹಿಳೆಯ ಜೊತೆ ತಮ್ಮ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಕಾರಣಕ್ಕಾಗಿ ಅಣ್ಣನನ್ನು ಕಾರ್ನಲ್ಲಿ ಸಜೀವವಾಗಿ ಸುಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಚಿತ್ತೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಸಾವು ಕಂಡ ವ್ಯಕ್ತಿಯನ್ನು ನಾಗರಾಜು ಎಂದು ಗುರುತಿಸಲಾಗಿದೆ. ಆತನ ತಮ್ಮ ಪುರುಷೋತ್ತಮ ಹಾಗೂ ವಿವಾಹಿತ ಮಹಿಳೆ ರಿಪುಂಜಯ, ಆಂಧ್ರಪ್ರದೇಶ ಕೋಣಸೀಮ ಜಿಲ್ಲೆಯ ರಾಮಚಂದ್ರಾಪುರಂ ಮಂಡಲದ ನಿವಾಸಿಗಳಾಗಿದ್ದರು. ರಿಪುಂಜಯಳ ಕುಟುಂಬ ಸದಸ್ಯರು ಪುರುಷೋತ್ತಮ್ ಜೊತೆಗಿನ ಸಂಬಂಧವನ್ನು ಮೊದಲಿನಿಂದಲೂ ವಿರೋಧಿಸಿದ್ದರು ಮತ್ತು ಈ ಕುರಿತಾಗಿ ಎಚ್ಚರಿಕೆ ನೀಡಲು ಹಾಗೂ ವಿಷಯ ಬಗೆಹರಿಸಲು ಪುರುಷೋತ್ತಮನ್ನ ಅಣ್ಣ ನಾಗರಾಜುಗೆ ಕರೆ ಮಾಡಿದ್ದರು. ವಿಷಯ ಬಗೆಹರಿಸಲು ಕಾರ್ನಲ್ಲಿ ಅಜ್ಞಾತ ಸ್ಥಳಕ್ಕೆ ಮಹಿಳೆಯ ಕುಟುಂಬ ಸದಸ್ಯರು, ನಾಗರಾಜುನನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಕಾರ್ನಲ್ಲಿ ಆತನನ್ನು ಥಳಿಸಿ, ಹಗ್ಗದಿಂದ ಆತನ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಬಳಿಕ ಕಾರ್ನ ಮೇಲೆ ಪೆಟ್ರೋಲ್ ಸುರಿದ ರಿಪುಂಜಯ ಕುಟುಂಬದವರು ಬೆಂಕಿ ಹಚ್ಚಿದ್ದಾರೆ.
ವರದಿಗಳ ಪ್ರಕಾರ, ಅವರು ಕಾರನ್ನು ಕಮರಿಗೆ ತಳ್ಳಲು ಪ್ರಯತ್ನ ಮಾಡಿದ್ದರು. ಆದರೆ, ಬೆಟ್ಟದ ಕೆಳಗೆ ಕಾರ್ಅನ್ನು ನೂಕಲು ದೊಡ್ಡ ಕಲ್ಲು ಅಡ್ಡಿಯಾಗಿತ್ತು. ಅದಲ್ಲದೆ, ಕಾರ್ಗೆ ಬೆಂಕಿ ಸುರಿದ ಕಾರಣದಿಂದಾಗಿ ಅವರಿಗೆ ಹತ್ತಿರ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಮದುವೆ ಉಡುಗೊರೆಯಾಗಿ ನೀಡಿದ್ದ ಮ್ಯೂಸಿಕ್ ಸಿಸ್ಟಮ್ನಲ್ಲಿ ಬಾಂಬ್..! ಸ್ಫೋಟಕ್ಕೆ ನವ ವಿವಾಹಿತ ಸೇರಿ ಇಬ್ಬರು ಬಲಿ
ಕಾರ್ನ ಒಳಗೆ ವ್ಯಕ್ತಿಯೊಬ್ಬ ಇದ್ದಾನೆ ಎನ್ನುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿ ಪ್ರಾಣ ಉಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಿಂದ ನಾಗರಾಜು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಘಟನೆಯ ದುಷ್ಕರ್ಮಿಗಳಲ್ಲಿ ಒಬ್ಬನನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೃತ ಸೋಮಪಲ್ಲಿ ನಾಗರಾಜು ಅವರಿಗೆ 35 ವರ್ಷವಾಗಿದ್ದು, ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಕೊಲೆ ಮಾಡಿದ ಪತ್ನಿ!
ಈ ನಡುವೆ ನಾಗರಾಜು ಅವರ ಪತ್ನಿ ಸುಲೋಚನಾ, ತನ್ನ ಪತಿಯ ಸಾವಿಗೆ ರಿಪುಂಜಯ ಕಾರಣ ಎಂದು ಹೇಳಿದ್ದಾರೆ. ತನ್ನ ಕುಟುಂಬದೊಂದಿಗೆ ಮಾತನಾಡಲು ನನ್ನ ಪತಿಯನ್ನು ಕರೆದಿದ್ದೇ ರಿಪುಂಜಯ. ಅವರನ್ನು ಕರೆದು ಕಾರ್ನಲ್ಲಿ ಕಟ್ಟುಹಾಕಿ ಸಜೀವವಾಗಿ ಸುಟ್ಟು ಕೊಂದಿದ್ದಾರೆ. ನನ್ನ ಮೈದುನ ಪುರುಷೋತ್ತಮ್ ಹಾಗೂ ರಿಪುಂಜಯಳ ನಡುವಿನ ಅನೈತಿಕ ಸಂಬಂಧ ಎರಡೂ ಕುಟುಂಬದಲ್ಲಿ ಕೋಹಾಲ ಸೃಷ್ಟಿಸಿತ್ತು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ