ಚೀನಾದ ಮಹಿಳೆಯೊಬ್ಬರು ತಮ್ಮ ನಾಯಿಗಳಿಗಾಗಿ ಜಪಾನ್, ಕೊರಿಯಾಕ್ಕೆ ಬಟ್ಟೆ ಖರೀದಿಸಲು ಹೋಗುತ್ತಾರೆ. ನಾಯಿಗಳ ಉಡುಪು ಇಡಲು 24 ಲಕ್ಷ ರೂ. ಬೆಲೆಯ ಕಪಾಟನ್ನು ಹೊಂದಿದ್ದಾರೆ.
ಬೀಜಿಂಗ್: ಸಾಕುಪ್ರಾಣಿಗಳನ್ನು ಅತಿ ಮುದ್ದಿನಿಂದ ಸಾಕುವವರ ನಡುವೆ ಎದ್ದುಕಾಣುವ ಚೀನಾದ ಮಹಿಳೆಯೊಬ್ಬರು, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ ಮತ್ಸರ ಬರುವಂತೆ ತನ್ನ 3 ನಾಯಿಗಳ ಲಾಲನೆ-ಪಾಲನೆ ಮಾಡುತ್ತಿದ್ದಾರೆ.
ಶಾಂಘೈನಲ್ಲಿ ವಾಸವಿರುವ ವೆಂಡಿ ಎಂಬ ಮಹಿಳೆ, ಮೋಚಿ, ಮಿಲ್ಕಿ, ಪಿಗ್ಗಿ ಹೆಸರಿನ 6, 5, 3 ವರ್ಷದ ನಾಯಿಗಳನ್ನು ಸಾಕಿದ್ದಾರೆ. ಆಕೆ ಅವುಗಳಿಗಾಗಿ ಬಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ದಕ್ಷಿಣ ಕೊರಿಯಾ ಮತ್ತು ಜಪಾನ್ ತನಕ ಪ್ರಯಾಣ ಬೆಳೆಸುತ್ತಾರೆ. ಸಾಲದ್ದಕ್ಕೆ ವಿಶೇಷ ವಸ್ತುಗಳನ್ನು ಆನ್ಲೈನಲ್ಲಿಯೂ ತರಿಸಿಕೊಳ್ಳುತ್ತಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ತನ್ನ ನಾಯಿಗಳಿಗಾಗಿ ಈಕೆ ‘ಯೀಕೆಮೊಚಿ’ ಹೆಸರಿನ ಇನ್ಸ್ಟಾಗ್ರಾಂ ಖಾತೆಯೊಂದನ್ನು ತೆರೆದಿದ್ದು, ಅದರಲ್ಲಿ ಅವುಗಳು ವಿಭಿನ್ನ ಉಡುಪುಗಳನ್ನು ಧರಿಸಿ ವಿವಿಧ ಭಂಗಿಯಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ವೆಂಡಿ ಆ ನಾಯಿಗಳ ವಸ್ತುಗಳಿರುವ, 24 ದಶಲಕ್ಷ ರು. ವೆಚ್ಚದ ಭವ್ಯ ಕಪಾಟನ್ನು ತೋರಿಸಿದ್ದರು. ಅದರಲ್ಲಿ ಡಿಸ್ನಿ, ಎಂಬ್ರಾಯ್ಡರಿ ಸೇರಿದಂತೆ ವಿವಿಧ ಮಾದರಿ ಮತ್ತು ವಿನ್ಯಾಸಗಳ 2,500ಕ್ಕೂ ಅಧಿಕ ಬಟ್ಟೆಗಳು, ಆಭರಣಗಳಿದ್ದವು. ಜೊತೆಗೆ, 46ರಿಂದ 58 ಸಾವಿರ ರು. ಬೆಲೆಯ ಜ್ಯಾಕೆಟ್, ಸನ್ಗ್ಲಾಸ್, ಬೆಲ್ಟ್ ಕೂಡ ಕಂಡುಬಂದಿದ್ದವು. ಇದು, ‘ಶ್ವಾನಗಳಿಗೂ ಇಷ್ಟು ಐಷಾರಾಮಿ ಜೀವನ ಸಿಗಬಹುದೇ’ ಎಂದು ವೀಕ್ಷಕರು ಹುಬ್ಬೇರಿಸುವಂತೆ ಮಾಡಿದೆ.
ಬಾಹ್ಯಾಕಾಶ ಪ್ರಯೋಗಕ್ಕೆ ಬಳಸುವ ಹಲ್ಲಿ 60 ಲಕ್ಷಕ್ಕೆ ಮಾರಾಟ ಮಾಡಲು ಯತ್ನ
ಬಾಹ್ಯಾಕಾಶದ ಸಂಶೋಧನಾ ಪ್ರಯೋಗಗಳಿಗೆ ಬಳಸಲಾಗುವ ಟೊಕಾಯ್ ಗೇಕೊ ಎನ್ನುವ ಅಪರೂಪದ ಹಲ್ಲಿಯನ್ನು 60 ಲಕ್ಷ ರು.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅಸ್ಸಾಂನ ದಿಬ್ರುಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 11 ಹಲ್ಲಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ತಲಾ 60 ಲಕ್ಷ ರು.ಗೆ ಈ ಹಲ್ಲಿಗಳನ್ನು ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಅಧಿಕಾರಿಗಳು ಬಂಧಿಸಿದ್ದಾರೆ. ಅಪರೂಪದ ಜಾತಿಗೆ ಸೇರಿರುವ ಈ ಟೊಕಾಯ್ ಗೇಕೊ ಹಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗಳಿಗೆ ಬಳಕೆಯಾಗುತ್ತದೆ. ಸಾಕು ಪ್ರಾಣಿಯನ್ನಾಗಿ ಇದನ್ನು ಬಳಸುವುದರ ಜೊತೆಗೆ ಚೀನಾದಲ್ಲಿ ಆಸ್ತಮಾ, ಕ್ಯಾನ್ಸರ್ ಚಿಕಿತ್ಸೆಗಳಿಗೂ ಬಳಸಲಾಗುತ್ತದೆ.
ಇದನ್ನೂ ಓದಿ: ಮೋಸ ಮಾಡಿದ ಅಧಿಕಾರಿಗಳು, ಒಂದು ಮರದಿಂದ ರೈತನಿಗೆ ಬಂತು 1 ಕೋಟಿ!
ನಿರ್ಬಂಧ ವಿರೋಧಿಸಿ ಕೇರಳದ ಭಗವತಿ ದೇಗುಲದ ಗರ್ಭಗುಡಿ ಹೊರವಲಯ ಪ್ರವೇಶಿಸಿದ ಗುಂಪು
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ರಾಯರಮಂಗಲದಲ್ಲಿರುವ ಭಗವತಿ ದೇವಸ್ಥಾನದ ನಿಯಮಗಳನ್ನು ಉಲ್ಲಂಘಿಸಿ ಭಕ್ತರ ಗುಂಪೊಂದು ಗರ್ಭಗುಡಿಯ ಹೊರವಲಯವನ್ನು ಪ್ರವೇಶಿಸಿದ ಘಟನೆ ನಡೆದಿದೆ.
ಗರ್ಭಗುಡಿಯ ಹೊರಗಿನ ಪ್ರದೇಶ ಪ್ರವೇಶಿಸಲು ಕೆಲವು ವರ್ಗದ ಜನರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪಿಸಿ ಕ್ರಿಯಾ ಸಮಿತಿಯ ಅಡಿಯಲ್ಲಿ ಕೆಲವರು ಪ್ರತಿಭಟನೆ ನಡೆಸಿದ್ದರು. ದೇವಸ್ವಂ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ತಮ್ಮ ಬೇಡಿಕೆಯನ್ನು ತಿಳಿಸಿದ್ದರು. ಅದರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.‘ಕಳೆದ ತಿಂಗಳು ದೇವಾಲಯದ ತಂತ್ರಿಯೊಂದಿಗೆ ಚರ್ಚಿಸಿದ್ದೆವು. ಅವರು, ಭಕ್ತರು ತಮ್ಮ ಅನುಮತಿಯಿಲ್ಲದೆ ದೇಗುಲದ ಪ್ರಾಂಗಣವನ್ನು ಪ್ರವೇಶಿಸಬಹುದು, ಆದರೆ ಗರ್ಭಗುಡಿ ಹೊರವಲಯರ ಪ್ರವೇಶಿಸುವಂತಿಲ್ಲ ಎಂದಿದ್ದರು. ದೇವಾಲಯ ಪ್ರವೇಶವು ಅನೇಕ ವರ್ಗಗಳ ಜನರಿಗೆ ನಿರ್ದಿಷ್ಟ ಸಮಯದ ಮಿತಿಗೆ ಸೀಮಿತವಾಗಿದೆ. ಇದನ್ನು ವಿರೋಧಿಸಿ ಗರ್ಭಗುಡಿ ಪ್ರವೇಶಿಸಿದ್ದೇವೆ. ಇದು ಮುಂದುವರೆಯುತ್ತದೆ’ ಎಂದು ಸಂಸ್ಕಾರ ಸಾಹಿತ್ಯ ಸಂಘಟನೆಯ ನಾಯಕ ರಾಘವನ್ ಕುಳಂಗರ ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ರಾಜ್ಯಪಾಲರಿಂದ 'ಜೈ ಶ್ರೀರಾಮ್' ಘೋಷಣೆ, ಭುಗಿಲೆದ್ದ ವಿವಾದ!