
ರಾಯ್ಪುರ (ಜೂ.17): ಛತ್ತಿಸ್ಗಢದಲ್ಲಿ ಭೂಪೇಶ್ ಭಾಗೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತನ್ನದೇ ಶಾಸಕಿ ನೀಡಿರುವ ಹೇಳಿಕೆ ಇರಿಸುಮುರಿಸು ಉಂಟುಮಾಡಿದೆ. ಕಾಂಗ್ರೆಸ್ ಪಕ್ಷದ ಶಾಸಕಿಯಾಗಿರುವ ಅನಿತಾ ಶರ್ಮ, ಹಿಂದು ರಾಷ್ಟ್ರ ಕಟ್ಟಲು ಎಲ್ಲರೂ ಒಗ್ಗಟ್ಟಾಗಬೇಕು, ಹಿಂದು ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲಾ ಹಿಂದುಗಳು ಮುಂದೆ ಬರಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಶುಕ್ರವಾರ ರಾಯ್ಪುರದ ಧರ್ಶಿವಾ ಪ್ರದೇಶದಲ್ಲಿ ನಡೆದ ‘ಧರ್ಮ ಸಭೆ’ಯಲ್ಲಿ ಪಾಲ್ಗೊಂಡಿದ್ದ ಧರ್ಶಿವಾ ಕ್ಷೇತ್ರದ ಶಾಸಕಿ ಅನಿತಾ ಶರ್ಮಾ ಅವರು ಹಿಂದೂ ರಾಷ್ಟ್ರವನ್ನು ಕಟ್ಟಲು ಒಗ್ಗಟ್ಟಾಗಬೇಕು ಮತ್ತು ಈ ಕಾರಣಕ್ಕಾಗಿ ಎಲ್ಲಾ ಹಿಂದೂಗಳು ಒಗ್ಗೂಡಬೇಕು ಎಂದು ಮನವಿ ಮಾಡಿದರು. ಈ ಹೇಳಿಕೆಯ ವಿಡಿಯೋ ತುಣುಕು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ."ನಾವೆಲ್ಲರೂ, ನಾವು ಎಲ್ಲೇ ಇದ್ದರೂ ... ನಾವು ಹಿಂದೂ ರಾಷ್ಟ್ರವನ್ನು ಮಾಡಲು ಪ್ರತಿಜ್ಞೆ ಮಾಡಬೇಕು.. ನಾವು ಹಿಂದೂಗಳಿಗಾಗಿ ಮಾತನಾಡಬೇಕು ಮತ್ತು ಎಲ್ಲಾ ಹಿಂದೂಗಳು ಒಗ್ಗೂಡಿದರೆ ಮಾತ್ರ ಸಾಧ್ಯ" ಎಂದು ಶಾಸಕರು ಸಮಾರಂಭದಲ್ಲಿ ಸ್ಥಳೀಯ ಛತ್ತೀಸ್ಗಢಿ ಉಪಭಾಷೆಯಲ್ಲಿ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷವು ಅವರ ಕಾಮೆಂಟ್ ಅನ್ನು "ವೈಯಕ್ತಿಕ ಅಭಿಪ್ರಾಯ" ಎಂದು ಹೇಳಿದ್ದು, ಇದು ಪಕ್ಷದ ಮಾತಲ್ಲ ಎಂದಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಛತ್ತೀಸ್ಗಢ ಕಾಂಗ್ರೆಸ್ ಸಂವಹನ ಮುಖ್ಯಸ್ಥ ಮತ್ತು ವಕ್ತಾರ ಸುಶೀಲ್ ಆನಂದ್ ಶುಕ್ಲಾ ಅವರು ಇದನ್ನು "ವೈಯಕ್ತಿಕ ಹೇಳಿಕೆ" ಎಂದು ಹೇಳಿದ್ದಾರೆ. ಇದು ಪಕ್ಷದ ಅಭಿಪ್ರಾಯವಾಗಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷವು ಸಂವಿಧಾನದ ಜೊತೆ ನಿಂತಿದೆ. ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾ ರಾಜೇಂದ್ರ ಪ್ರಸಾದ್ ಅವರಂತಹ ನಾಯಕರು ರಚಿಸಿದ ಮಹಾನ್ ಸಂವಿಧಾನದಲ್ಲಿ ಉಲ್ಲೇಖಿಸಲಾದ ಜಾತ್ಯತೀತತೆಯ ಬಗ್ಗೆ ಕಾಂಗ್ರೆಸ್ ದೃಢವಾಗಿದೆ' ಎಂದು ಶುಕ್ಲಾ ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸಿದ್ಧಾಂತವನ್ನು ಹೊಂದಬಹುದು ಮತ್ತು ಕಾಂಗ್ರೆಸ್ ಪಕ್ಷವು ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುತ್ತದೆ ಎಂದಿದ್ದಾರೆ.
ಹಾಗಿದ್ದರೂ, ಶನಿವಾರ ಅನಿತಾ ಶರ್ಮಾ ಅವರು ತಮ್ಮ ಹೇಳಿಕೆಯನ್ನು "ತಪ್ಪಾಗಿ ಅರ್ಥೈಸಲಾಗಿದೆ" ಮತ್ತು ಅವರು ಈ ದೇಶದಲ್ಲಿ ವಾಸಿಸುವ ಎಲ್ಲಾ ಜನರ ಏಕತೆಯ ಬಗ್ಗೆ ಮಾತನಾಡಿದ್ದೆ ಎಂದಿದ್ದಾರೆ. “ನಾನು ಗಾಂಧಿವಾದಿ ಮತ್ತು ಗಾಂಧೀಜಿ ಅವರು ದ್ವೇಷವನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ ... ಎಲ್ಲಾ ಧರ್ಮದ ಜನರು ಸಹೋದರರು ... ನಾನು ಭಾರತದಲ್ಲಿ ವಾಸಿಸುವ ಎಲ್ಲಾ ಜನರ ಏಕತೆಯ ಬಗ್ಗೆ ಮಾತನಾಡುತ್ತಿದ್ದೆ ... ನನಗೆ ಹಿಂದೂ ರಾಷ್ಟ್ರದ ಪರಿಕಲ್ಪನೆಯು ಎಲ್ಲಾ ಧರ್ಮಗಳ ಏಕತೆಯಾಗಿದೆ. ತನ್ನ ಹೇಳಿಕೆಯ ಮೇಲೆ ರಾಜಕೀಯ ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.
ಹಿಂದೂ ಎನ್ನಲು ಯೋಗ್ಯತೆ ಬೇಕು, ಕಮಂಗಿಗಳಿಗೆ ಏನ್ರಿ ಆರ್ಥಆಗಬೇಕು? ಸಿದ್ದು ವಿರುದ್ಧ ಹೆಗಡೆ ವಾಗ್ದಾಳಿ!
ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ವಕ್ತಾರ ಕೇದಾರ್ ಗುಪ್ತಾ, ಹಿಂದೂ ರಾಷ್ಟ್ರ ಮತ್ತು ರಾಮರಾಜ್ಯದ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ ಎಂದಿದ್ದಾರೆ. "ಏಕರೂಪ ನಾಗರಿಕ ಸಂಹಿತೆ ಬರಲಿದೆ...ಅವರು ಅದನ್ನು ಬೆಂಬಲಿಸುವರೇ?.. ಕಾಂಗ್ರೆಸ್ ಹೇಳುವುದು ಹಾಗೂ ಮಾಡುವುದರ ನಡುವೆ ವ್ಯತ್ಯಾಸವಿದೆ" ಎಂದು ಗುಪ್ತಾ ಹೇಳಿದ್ದಾರೆ.
ಬುರ್ಖಾ ಹಾಕಿ ಸುತ್ತಾಡಿದ ಪೂಜಾರಿ ಪೊಲೀಸ್ ವಶಕ್ಕೆ, ಚಿಕನ್ ಫಾಕ್ಸ್ ಕಾರಣ ನೀಡಿದ ಅರ್ಚಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ