ಶಬರಿಮಲೇಲಿ ಅವ್ಯವಸ್ಥೆ ಭಕ್ತರ ಭಾರೀ ಪರದಾಟ

Published : Nov 19, 2025, 04:48 AM IST
sabarimala crowd

ಸಾರಾಂಶ

ಶಬರಿಮಲೆ ಅಯ್ಯಪ್ಪನ ‘ಮಂಡಲ ಮಕರವಿಳಕ್ಕು’ ಯಾತ್ರೆ ಆರಂಭವಾದ 2ನೇ ದಿನವೇ ಭಾರಿ ಅವ್ಯವಸ್ಥೆ , 48 ಗಂಟೆಯಲ್ಲಿ ಕರ್ನಾಟಕದ ಭಕ್ತರು ಸೇರಿ 2 ಲಕ್ಷ ಭಕ್ತರು ಆಗಮಿಸಿದ ಕಾರಣ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಸರದಿಯಲ್ಲಿ ನಿಂತಿದ್ದ 58 ವರ್ಷದ ಮಹಿಳಾ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ.

ಪಟ್ಟಣಂತಿಟ್ಟ (ಕೇರಳ) : ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ ‘ಮಂಡಲ ಮಕರವಿಳಕ್ಕು’ ಯಾತ್ರೆ ಆರಂಭವಾದ 2ನೇ ದಿನವೇ ಭಾರಿ ಅವ್ಯವಸ್ಥೆ ಉಂಟಾಗಿದ್ದು, 48 ಗಂಟೆಯಲ್ಲಿ ಕರ್ನಾಟಕದ ಭಕ್ತರು ಸೇರಿ 2 ಲಕ್ಷ ಭಕ್ತರು ಆಗಮಿಸಿದ ಕಾರಣ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಸರದಿಯಲ್ಲಿ ನಿಂತಿದ್ದ 58 ವರ್ಷದ ಮಹಿಳಾ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ.

ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಗಮಿಸಿದ ಭಕ್ತರನ್ನು ನಿಯಂತ್ರಿಸಲು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೊರೆಯುವ ಚಳಿಯ ನಡುವೆಯೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲುಗಳನ್ನು ಹತ್ತುವ ಪ್ರದೇಶದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ.

ದರ್ಶನ ಪಡೆಯಲು 10 ತಾಸಿಗೂ ಹೆಚ್ಚಿನ ಅವಧಿ ಹಿಡಿಯುತ್ತಿದೆ. ಹೀಗಾಗಿ ಹಲವು ಭಕ್ತರು ದರ್ಶನ ಸಾಧ್ಯವಾಗದೆ ಪಂಪಾದಲ್ಲಿ ತುಪ್ಪದ ಸೇವೆ ಸಲ್ಲಿಸಿ ವಾಪಸಾಗುತ್ತಿರುವ ವರದಿಗಳೂ ಕೇಳಿಬಂದಿವೆ. ಸಾಮಾನ್ಯವಾಗಿ ನಿತ್ಯ 90 ಸಾವಿರ ಮಂದಿಗಷ್ಟೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಮಿತಿ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ದೇವಸ್ಥಾನದ ಆಡಳಿತವು ಅಗತ್ಯ ಸೌಲಭ್ಯ ಕಲ್ಪಿಸಲು ಪರದಾಡುತ್ತಿದೆ.

ಭಕ್ತರಿಂದ ಕಿಕ್ಕಿರಿದು ತುಂಬಿ ಪರದಾಡುತ್ತಿದ್ದಾರೆ

ಬೆಟ್ಟದ ತಪ್ಪಲಿನ ಪಂಬಾದಿಂದ ಸನ್ನಿಧಾನದ ವರೆಗಿನ ದಾರಿ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಇಲ್ಲಿ 3-4 ಗಂಟೆ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಈ ನಡುವೆ, ಹಲವು ಭಕ್ತರು ನೀರು ಸೇರಿ ಅಗತ್ಯ ಮೂಲಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಶೌಚಾಲಯಗಳು ಶುಚಿಯಾಗಿಲ್ಲ ಎಂಬ ಆಕ್ರೋಶವೂ ಹೆಚ್ಚಾಗಿದೆ.

ಭಕ್ತೆಯ ಸಾವು:

ಈ ನಡುವೆ ಸರದಿಯಲ್ಲಿ ನಿಂತಿದ್ದ ಕಲ್ಲಿಕೋಟೆ ಮೂಲದ ಸತಿ (58) ಎಂಬ ಭಕ್ತೆ ಏಕಾಏಕಿ ಕುಸಿದು ಮೃತಪಟ್ಟಿದ್ದಾರೆ. ಅವರ ಶವವನ್ನು ತವರಿಗೆ ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾವಿಗೆ ಕಾರಣ ಹೇಳಿಲ್ಲ.

ನಿಯಂತ್ರಣ ಅಸಾಧ್ಯ - ಟಿಡಿಬಿ ಅಧ್ಯಕ್ಷ:

ಶಬರಿಮಲೆ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಅಪಾಯಕಾರಿ ಮಟ್ಟ ದಾಟಿದೆ. ಹಲವರು ಸರದಿ ವ್ಯವಸ್ಥೆ ಉಲ್ಲಂಘಿಸಿ ದರ್ಶನಕ್ಕೆ ಮುಂದಾಗುತ್ತಿದ್ದಾರೆ. ಒಂದು ವೇಳೆ ನಿಮಿಷಕ್ಕೆ 80ರಿಂದ 90 ಭಕ್ತರು ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲು ಹತ್ತದೇ ಹೋದರೆ ಇಷ್ಟೊಂದು ಪ್ರಮಾಣದ ಭಕ್ತ ಸಮೂಹವನ್ನು ನಿಯಂತ್ರಿಸುವುದು ಅಸಾಧ್ಯವಾಗಲಿದೆ. ಭಕ್ತರನ್ನು ನಿಯಂತ್ರಿಸಲು ಕೇಂದ್ರದ ಪಡೆಗಳೂ ಸ್ಥಳಕ್ಕೆ ಆಗಮಿಸಲಿವೆ ಎಂದು ಟಿಡಿಬಿ ನೂತನ ಅಧ್ಯಕ್ಷ ಜಯಕುಮಾರ್‌ ತಿಳಿಸಿದ್ದಾರೆ.

ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ:

ಶಬರಿಮಲೆ ದೇಗುಲದ 18 ಮೆಟ್ಟಿಲು ಹತ್ತಲು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಹೊಸದಾಗಿ ನಿರ್ದೇಶನ ನೀಡಲಾಗಿದೆ. ಈಗಿರುವ ಸಿಬ್ಬಂದಿ ಜತೆಗೆ ಮತ್ತೆ 200ಕ್ಕೂ ಹೆಚ್ಚು ಮಂದಿಯನ್ನು ಸ್ಥಳದಲ್ಲಿ ಜನರ ಸಾಲು ನಿಯಂತ್ರಿಸಲು ನಿಯೋಜಿಸಲಾಗಿದೆ. ಸರದಿಯಲ್ಲಿ ನಿಂತ ವ್ರತಾಧಾರಿಗಳಿಗೆ ನೀರು ಪೂರೈಸಲೂ ಇವರು ನೆರವು ನೀಡಲಿದ್ದಾರೆ ಎಂದೂ ಜಯಕುಮಾರ್‌ ಮಾಹಿತಿ ನೀಡಿದ್ದಾರೆ.

ಬಿಜೆಪಿ ಕಿಡಿ:

ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರತಿಬಾರಿಯಂತೆಯೂ ಈ ಬಾರಿಯೂ ಅಯ್ಯಪ್ಪನ ಸನ್ನಿಧಿಯು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಭಕ್ತರನ್ನು ನಿರ್ವಹಿಸುವಲ್ಲಿ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.

2011ರಲ್ಲಿ 100 ಜನರ ಸಾವು:

ಶಬರಿಮಲೆಯಲ್ಲಿ 2011ರಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 100 ಭಕ್ತರು ಅಸುನೀಗಿದ್ದರು. ಕಳೆದ ವರ್ಷವೂ ಭಾರಿ ರಷ್ ಆಗಿದ್ದರಿಂದ ದರ್ಶನ ಸಮಯ ಹೆಚ್ಚಿಸಲಾಗಿತ್ತು.

ನೀಲಕ್ಕಲ್‌ನಲ್ಲೇ ಭಕ್ತರನ್ನು ತಡೆಹಿಡಿಯಲು ಅಗತ್ಯ ಕ್ರಮ

‘ಈವರೆಗೆ ನಾನು ಇಷ್ಟೊಂದು ದೊಡ್ಡ ಗುಂಪನ್ನು ದೇವಸ್ಥಾನ ಮೈದಾನದಲ್ಲಿ ನೋಡಿಯೇ ಇಲ್ಲ. ಪಂಬಾಗೆ ವ್ರತಾಧಾರಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಇದನ್ನು ನಿಯಂತ್ರಿಸಲು ಸಮೀಪದ ನೀಲಕ್ಕಲ್‌ನಲ್ಲೇ ಭಕ್ತರನ್ನು ಕೆಲಕಾಲ ತಡೆದು ನಿಲ್ಲಿಸುವಂತೆಯೂ ಸೂಚಿಸಲಾಗಿದೆ. ಈ ಮೂಲಕ ಈಗಾಗಲೇ ಪಂಬಾದಲ್ಲಿರುವ ಭಕ್ತರು ನಾಲ್ಕೈದು ಗಂಟೆ ಸರದಿಯಲ್ಲಿ ನಿಲ್ಲುವ ಬದಲು ಆದಷ್ಟು ಶೀಘ್ರ ದರ್ಶನ ಮುಗಿಸಿ ವಾಪಸ್‌ ಹೋಗಲು ಅನುವು ಮಾಡಿಕೊಡಲಾಗುತ್ತಿದೆ’ ಎಂದು ಟಿಡಿಬಿ ಅಧ್ಯಕ್ಷ ಜಯಕುಮಾರ್‌ ಹೇಳಿದರು.

ನೀಲಕ್ಕಲ್‌ನಲ್ಲಿ ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆಗಳೂ ಇವೆ. ಅಲ್ಲಿ ಇನ್ನೂ ಹೆಚ್ಚುವರಿ 7 ಬುಕ್ಕಿಂಗ್‌ ಕೌಂಟರ್‌ಗಳನ್ನು ನಾವು ತೆರೆಯಲಿದ್ದೇವೆ. ಇದಕ್ಕಾಗಿ ಭಕ್ತರು ಪಂಬಾಗೆ ಆಗಮಿಸಬೇಕಿಲ್ಲ ಎಂದು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ