
ಚಂಡೀಗಢ(ಡಿ.28): ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ. ಪಾಲಿಕೆಯ 35 ವಾರ್ಡ್ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 35ರ ಪೈಕಿ 14 ಕ್ಷೇತ್ರಗಳಲ್ಲಿ ಆಪ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ 8 ಸ್ಥಾನ ನಷ್ಟಅನುಭವಿಸುವ ಮೂಲಕ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗದ ಕಾರಣ ಚಂಡೀಗಢ ಪಾಲಿಕೆ ಅತಂತ್ರವಾಗಿದೆ.
ಮುಂದಿನ ವರ್ಷದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆಗೇರಲಿದೆ ಎಂಬ ಚುನಾವಣೆ ಪೂರ್ವ ಸಮೀಕ್ಷೆಗಳ ಭವಿಷ್ಯದ ಬೆನ್ನಲ್ಲೇ, ಪಂಜಾಬ್ ಮತ್ತು ಹರ್ಯಾಣದ ಜಂಟಿ ರಾಜಧಾನಿ ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಆಪ್ ಜಯಗಳಿಸಿರುವುದು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಈ ಬಾರಿ 4 ಸ್ಥಾನ ಲಾಭವಾಗಿದ್ದು, ಒಟ್ಟಾರೆ 8 ಸ್ಥಾನ ಸಿಕ್ಕಿದೆ. ಶಿರೋಮಣಿ ಅಕಾಲಿ ದಳ ಕೇವಲ 1 ಸ್ಥಾನ ಪಡೆಯುವಲ್ಲಿ ಶಕ್ತವಾಗಿದೆ.
ಈ ಹಿಂದೆ ಮೇಯರ್ ಆಗಿದ್ದ ಬಿಜೆಪಿಯ ರವಿಕಾಂತ್ ಶರ್ಮಾ ಅವರು ಆಪ್ನ ದಮನ್ಪ್ರೀತ್ ಸಿಂಗ್ ವಿರುದ್ಧ 828 ಮತಗಳ ಅಂತರದ ಸೋಲು ಅನುಭವಿಸಿದ್ದಾರೆ. ಅದೇ ರೀತಿ ಬಿಜೆಪಿಯ ಮಾಜಿ ಮೇಯರ್ ದವೇಶ್ ಮೌಡ್ಗಿಲ್, ಬಿಜೆಪಿ ಯುವ ಮೋರ್ಚಾ ನಾಯಕ ವಿಜಯ್ ಕೌಶಲ್ ರಾಣ ಸೇರಿದಂತೆ ಇತರ ಬಿಜೆಪಿಯ ಘಟಾನುಘಟಿ ನಾಯಕರು ಆಪ್ ಅಭ್ಯರ್ಥಿಗಳ ಎದುರು ಧೂಳಿಪಟವಾಗಿದ್ದಾರೆ. ಪಾಲಿಕೆಯಲ್ಲಿನ ತಮ್ಮ ಪಕ್ಷದ ಈ ಗೆಲುವನ್ನು ದಿಲ್ಲಿಯ ಆಪ್ ಶಾಸಕ ರಾಘವ್ ಚಡ್ಡಾ ಅವರು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯ ಟ್ರೇಲರ್ ಎಂದು ಬಣ್ಣಿಸಿದ್ದಾರೆ.
ಯಾರಿಗೆಷ್ಟು ಸ್ಥಾನ?
ಪಕ್ಷ ಸ್ಥಾನ ಹಿಂದಿನ ಫಲಿತಾಂಶ
ಒಟ್ಟು ಸ್ಥಾನ 35
ಆಪ್ 14 00
ಬಿಜೆಪಿ 12 20
ಕಾಂಗ್ರೆಸ್ 8 04
ಎಸ್ಎಡಿ 01 01
ಈ ಗೆಲುವು ಪಂಜಾಬ್ನಲ್ಲಿ ಬದಲಾವಣೆ ಸಂಕೇತ: ಕೇಜ್ರಿ
ಚಂಡೀಗಢ ಪಾಲಿಕೆ ಚುನಾವಣೆಯಲ್ಲಿನ ಆಮ್ ಆದ್ಮಿ ಪಕ್ಷದ ಈ ಅಭೂತಪೂರ್ವ ಗೆಲುವು ಪಂಜಾಬ್ನಲ್ಲಿ ಬದಲಾವಣೆಯ ಪರ್ವದ ಸಂಕೇತ. ಚಂಡೀಗಢದ ಜನತೆ ಭ್ರಷ್ಟಾಚಾರದ ರಾಜಕೀಯವನ್ನು ತಿರಸ್ಕರಿಸಿ, ಪ್ರಾಮಾಣಿಕ ರಾಜಕೀಯ ಮಾಡುವ ಆಪ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿ ಪಂಜಾಬ್ ಬದಲಾವಣೆಗೆ ಸಿದ್ಧವಾಗಿದೆ.
- ಅರವಿಂದ್ ಕೇಜ್ರಿವಾಲ್, ಆಪ್ ರಾಷ್ಟ್ರೀಯ ಸಂಚಾಲಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ