ರಾಜಕೀಯ ಹಿನ್ನೆಲೆಯವರಿಗೆ ಜಡ್ಜ್‌ ಹುದ್ದೆ: ರಿಜಿಜು ಸಮರ್ಥನೆ; ಮದ್ರಾಸ್‌ ಹೈಕೋರ್ಟ್‌ಗೆ ಗೌರಿ ನೇಮಕ ಹಿನ್ನೆಲೆ ಸುಪ್ರೀಂ ವಿಚಾರಣೆ

By Kannadaprabha NewsFirst Published Feb 7, 2023, 8:16 AM IST
Highlights

ರಾಜಕೀಯ ಹಿನ್ನೆಲೆಯವರಿಗೆ ಜಡ್ಜ್‌ ಹುದ್ದೆ ನೀಡುತ್ತಿರುವುದಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸಮರ್ಥನೆ ಮಾಡಿಕೊಂಡಿದ್ದಾರೆ. ಸ್ವರಾಜ್‌ ಕೌಶಲ್‌ ಮಾಡಿದ್ದ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡುವ ಮೂಲಕ ಕೆಂದ್ರ ಕಾನೂನು ಸಚಿವರು ಸಮರ್ಥಿಸಿಕೊಂಡಿದ್ದಾರೆ. 

ನವದೆಹಲಿ (ಫೆಬ್ರವರಿ 7, 2023): ರಾಜಕೀಯ ಹಿನ್ನೆಲೆಯ ವಕೀಲರನ್ನು ಉನ್ನತ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಅವರು ಮಾಜಿ ರಾಜ್ಯಪಾಲ ಸ್ವರಾಜ್‌ ಕೌಶಲ್‌ ಮಾಡಿದ ಟ್ವೀಟನ್ನು ರೀಟ್ವೀಟ್‌ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ನ (Supreme Court) ಕೊಲಿಜಿಯಂ (Collegium) ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ಗೆ (Madras High Court) ಬಿಜೆಪಿ (BJP) ನಂಟು ಹೊಂದಿದ್ದ ವಿಕ್ಟೋರಿಯಾ ಗೌರಿ (Victoria Gowri) ಹೆಸರನ್ನು ಶಿಫಾರಸು ಮಾಡಿತ್ತು. ಇದು ವಿವಾದಕ್ಕೀಡಾಗಿದೆ. ಆದರೆ ಇದನ್ನು ಸಮರ್ಥಿಸಿಕೊಂಡಿದ್ದ  ಸ್ವರಾಜ್‌ ಕೌಶಲ್‌ (Swaraj Kaushal), ‘ಕೇರಳದ ಸಚಿವನಾಗಿದ್ದ ನ್ಯಾ. ವಿ.ಆರ್‌. ಕೃಷ್ಣ ಅಯ್ಯರ್‌ ನ್ಯಾಯಮೂರ್ತಿಗಳಾದರು. ನ್ಯಾಯಮೂರ್ತಿ ಕೆ.ಎಸ್‌. ಹೆಗ್ಡೆ ಹಾಗೂ ಬುಹಾರುಲ್‌ ಇಸ್ಲಾಂ ಅವರು ಹೈಕೋರ್ಟ್‌ ಜಡ್ಜ್‌ಗಳಾಗಿ ನೇಮಕವಾದಾಗಲೇ ಕಾಂಗ್ರೆಸ್‌ ಸಂಸದರಾಗಿದ್ದರು’ ಎಂದು ಟ್ವೀಟ್‌ ಮಾಡಿದ್ದರು. ಇದನ್ನು ರೀಟ್ವೀಟ್‌ ಮಾಡುವ ಮೂಲಕ ಕಿರಣ್‌ ರಿಜಿಜು ಅವರು ರಾಜಕಾರಣಿಗಳನ್ನು ನ್ಯಾಯಾಧೀಶರನ್ನಾಗಿ ಮಾಡುವ ಶಿಫಾರಸುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ: ಕೊಲಿಜಿಯಂ: ಸರ್ಕಾರಕ್ಕೆ ಗಡುವು ನೀಡುವಂತೆ ಸುಪ್ರೀಂಗೆ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯ

ಮದ್ರಾಸ್‌ ಹೈಕೋರ್ಟ್‌ಗೆ ವಿಕ್ಟೋರಿಯಾ ಗೌರಿ: ಇಂದು ಸುಪ್ರೀಂ ಕೋರ್ಟ್‌ ವಿಚಾರಣೆ
ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲೆ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅವರ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಮಂಗಳವಾರ ವಿಚಾರಣೆ ನಿಗದಿಯಾಗಿದೆ. ನೇಮಕ ಪ್ರಶ್ನಿಸಿ ಹಿರಿಯ ವಕೀಲ ರಾಜು ರಾಮಚಂದ್ರನ್‌ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಮೊದಲು ಫೆಬ್ರವರಿ 10ಕ್ಕೆ ನಡೆಸಲು ಕೋರ್ಟ್‌ ನಿರ್ಧರಿಸಿತ್ತು. ಆದರೆ ಫೆಬ್ರವರಿ 7 ರಂದೇ ಕೈಗೆತ್ತಿಕೊಂಡು ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಪೀಠ ಹೇಳಿತು.
ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಸಂಬಂಧ ಹೊಂದಿದ್ದು, ಮುಸ್ಲಿಮರು ಹಾಗೂ ಕ್ರೈಸ್ತರ ವಿರುದ್ಧ ದ್ವೇಷದ ಹೇಳಿಕೆ ನೀಡಿದ ಆರೋಪ ಹೊತ್ತಿದ್ದಾರೆ. ಹೀಗಾಗಿ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇದನ್ನೂ ಓದಿ: ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

click me!