
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ಎಲ್ಪಿಜಿ ಕೊರತೆ ಎದುರಾಗಿರುವ ಕಾರಣ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮನೆಗಳಿಗೆ 14.2 ಕೆಜಿ ಸಿಲಿಂಡರ್ಗಳಲ್ಲಿ ಕೇವಲ 10 ಕೆಜಿ ಎಲ್ಪಿಜಿ ಪೂರೈಸುವ ಬಗ್ಗೆ ಯೋಚಿಸುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ಅಲ್ಲಗಳೆದಿದ್ದು, ಯಾವುದೇ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಿದೆ.
ಸಾಮಾನ್ಯವಾಗಿ 14.2 ಕೆಜಿ ತೂಕದ ಸಿಲಿಂಡರ್ 35-40 ದಿನಗಳಿಗೆ ಸಾಕಾಗುತ್ತದೆ. ಅಂದರೆ 10 ಕೆಜಿ ಎಲ್ಪಿಜಿಯನ್ನು ಒಂದು ತಿಂಗಳವರೆಗೆ ಬಳಸಿಕೊಳ್ಳಬಹುದು. ಇದರಿಂದ ಗ್ಯಾಸ್ನಲ್ಲಿ ಕೊಂಚ ಉಳಿತಾಯವಾಗಿ, ಹೆಚ್ಚು ಮನೆಗಳಿಗೆ ಪೂರೈಸಬಹುದು ಎಂದು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಈ ಬೆನ್ನಲ್ಲೇ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ಇದೆಲ್ಲಾ ಕೇವಲ ಊಹಾಪೋಹ. ಇಂಥ ವದಂತಿಗಳಿಗೆ ಯಾವುದೇ ಹೇಳಿಕೆ ಅಥವಾ ವಿವರಣೆ ಕೊಡಲು ಸಾಧ್ಯವಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದು ಮನವಿ ಮಾಡಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟು, ಬೆಲೆ ಏರಿಕೆ ಸೇರಿ ನಾನಾ ಅಡೆತಡೆಗಳ ನಡುವೆಯೂ ದೇಶದಲ್ಲಿ ಮೂರನೇ ಎರಡಷ್ಟು ತೈಲ ನಂಗ್ರಹಗಳು ತುಂಬಿವೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಮೇಲ್ಮನೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಅವರು, ‘ 9.5 ದಿನಗಳ ಪೂರೈಕೆಗೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾದ ತೈಲ ಸಂಗ್ರಹಗಳು ಮೂರನೇ ಎರಡರಷ್ಟು ತುಂಬಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ 53.3 ಲಕ್ಷ ಟನ್ ಸಾಮರ್ಥ್ಯದೊಂದಿಗೆ ಮೂರು ಪೆಟ್ರೋಲಿಯಂ ಸಂಗ್ರಹಗಳನ್ನು ಸ್ಥಾಪಿಸಿತ್ತು. ಇವುಗಳಲ್ಲಿ ಸುಮಾರು 33.7 ಲಕ್ಷ ಟನ್ ಕಚ್ಚಾ ದಾಸ್ತಾನು ಇದೆ. ಒಟ್ಟಾರೆ ಸಂಗ್ರಹ ಸಾಮರ್ಥ್ಯದ ಶೇ.64ರಷ್ಟಿದೆ’ ಎಂದಿದ್ದಾರೆ.
ಶೇ.88ರಷ್ಟು ಕಚ್ಚಾ ತೈಲಗಳ ಆಮದು ಅವಲಂಬಿಸಿರುವ ಭಾರತ ಕಚ್ಚಾ ತೈಲವನ್ನು ಸಂಗ್ರಹಿಸಲು ಕರ್ನಾಟಕದ ಮಂಗಳೂರು, ಪಾದೂರು ಜತೆಗೆ ಆಂಧ್ರಪ್ರದೇಶದ ವಿಶಾಪಟ್ಟಣದಲ್ಲಿ ತೈಲ ಸಂಗ್ರಹ ಕೇಂದ್ರಗಳನ್ನು ನಿರ್ಮಿಸಿತ್ತು.
ಎಲ್ಪಿಜಿ ಬಿಕ್ಕಟ್ಟಿನ ಕಾರಣ ಪಿಎನ್ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬಳಕೆ ಉತ್ತೇಜಿಸುತ್ತಿರುವ ಕೇಂದ್ರ ಸರ್ಕಾರ, ಕಳೆದ 3 ವಾರಗಳಲ್ಲಿ ಸುಮಾರು 3.5 ಲಕ್ಷ ಹೊಸ ವಾಣಿಜ್ಯ ಮತ್ತು ದೇಶೀಯ ಪಿಎನ್ಜಿ ಸಂಪರ್ಕಗಳನ್ನು ನೀಡಿದೆ. ಇದೇ ವೇಳೆ, ಹೊಸದಾಗಿ 1.9 ಲಕ್ಷ ಜನರು ಈ ಅವಧಿಯಲ್ಲಿ ಪಿಎನ್ಜಿಗೆ ಶಿಫ್ಟ್ ಆಗಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ಸುಜಾತಾ ಶರ್ಮಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ‘ಎಲ್ಪಿಜಿ ಲಭ್ಯತೆ ಇನ್ನೂ ಕಳವಳಕಾರಿಯಾಗಿದೆ. ಆದರೆ ಸಿಲಿಂಡರ್ ಕ್ಷಾಮ ಉಂಟಾಗಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಪೂರೈಕೆ ಅಧಿಕಗೊಳಿಸಲಾಗಿದೆ. ಪಿಎನ್ಜಿ ಸಂಪರ್ಕಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ