ಉದ್ಯೋಗಕ್ಕೆ ಭೂಮಿ ಲಂಚ ಪ್ರಕರಣ: Tejashwi Yadav ಜಾಮೀನು ವಜಾಗೆ ಸಿಬಿಐ ಮನವಿ

By BK AshwinFirst Published Sep 18, 2022, 5:23 PM IST
Highlights

ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಪತ್ರಿಕಾಗೋಷ್ಠಿಯ ವೇಳೆ ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಅವರ ಜಾಮೀನು ವಜಾ ಮಾಡಬೇಕೆಂದು ಸಿಬಿಐ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ. 

ಉದ್ಯೋಗ (Job) ನೀಡಲು ಜಮೀನುಗಳನ್ನು (Land) ಲಂಚದ (Bribe) ರೂಪವಾಗಿ ಪಡೆದಿರುವ ಪ್ರಕರಣದ ತನಿಖೆ ವೇಳೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (Central Bureau of Investigation) ಸಿಬಿಐ ಆರೋಪಿಸಿದೆ. ಹೀಗಾಗಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ದೆಹಲಿ ವಿಶೇಷ ನ್ಯಾಯಾಲಯದ (Delhi Special Court) ಮೆಟ್ಟಿಲೇರಿದೆ. ತೇಜಸ್ವಿ ಯಾದವ್‌ ಅವರು ಪ್ರತಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ, ತಮ್ಮ ವಿರುದ್ಧ ಕೇಸು ಹಾಕಿದ್ದಕ್ಕೆ ಕೆಲ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆಂದು ಸಿಬಿಐ ಆರೋಪಿಸಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ತೇಜಸ್ವಿ ಯಾದವ್‌ಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. ಯುಪಿಎ-1 ಆಡಳಿತದ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲೂ ಪ್ರಸಾದ್‌ ಯಾದವ್‌ ಅವರು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಲು, ಉದ್ಯೋಗಾಕಾಂಕ್ಷಿಗಳಿಂದ ಜಮೀನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಐಆರ್‌ಸಿಟಿಸಿ ಹಗರಣ ಪ್ರಕರಣಕ್ಕೆ (IRCTC Scam Case) ಸಂಬಂಧಿಸಿದಂತೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಕೆಲವು ಸಿಬಿಐ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ತನಿಖಾ ಸಂಸ್ಥೆ ಪ್ರತಿಪಾದಿಸಿದೆ. ಪ್ರಕರಣದ ಮೇಲೆ ಪ್ರಭಾವ ಬೀರಲು ತೇಜಸ್ವಿ ಮಾಡಿದ ಈ ಯತ್ನವೇ ಉದಾಹರಣೆ ಎಂದೂ ಸಿಬಿಐ ಹೇಳಿದೆ. ಈ ಹಿನ್ನೆಲೆ ಸಿಬಿಐ ಮನವಿಗೆ ಪ್ರತಿಕ್ರಿಯೆ ನೀಡುವಂತೆ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 

ಇದನ್ನು ಓದಿ: ಬಹುಮತ ಸಾಬೀತಿಗೆ ಮುನ್ನ ಆರ್‌ಜೆಡಿ ಸದಸ್ಯರ ಮೇಲೆ ಸಿಬಿಐ ದಾಳಿ: ರೇಡ್‌ಗೆ ಹೆದರಲ್ಲ ಎಂದ ರಾಬ್ಡಿದೇವಿ

ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಹೇಳಿಕೆಯನ್ನು ಸಿಬಿಐ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ. ಅಲ್ಲಿ ಅವರು ಕೇಂದ್ರೀಯ ತನಿಖಾ ಏಜೆನ್ಸಿಯ ಮೇಲೆ ವಾಗ್ದಾಳಿ ಮಾಡಿದ್ದಾರೆ. ಅವರಿಗೆ ಕುಟುಂಬವಿಲ್ಲವೇ, ಅವರು ಎಂದಾದರೂ ನಿವೃತ್ತರಾಗುವುದಿಲ್ಲವೇ, ಈ ಪಕ್ಷವು ಮಾತ್ರ ಅಧಿಕಾರದಲ್ಲಿ ಉಳಿಯುತ್ತದೆಯೇ" ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ತೇಜಸ್ವಿ ಯಾದವ್‌ ಅವರಿಗೆ ಜಾಮೀನು ಸಿಗಬಾರದೆಂದು ಸಿಬಿಐ ವಾದ ಮಾಡುತ್ತಿದೆ. 

ತೇಜಸ್ವಿ ಯಾದವ್‌ ಮತ್ತು ಅವರ ತಾಯಿ ರಾಬ್ಡಿ ದೇವಿ ಅವರಿಗೆ 2018 ರಲ್ಲಿ ಈ ಪ್ರಕರಣದಲ್ಲಿ ಜಾಮೀನು ನೀಡಲಾಗಿತ್ತು. 2006ರಲ್ಲಿ ನಡೆದಿರುವ ಈ ಹಗರಣವು ರಾಂಚಿ ಮತ್ತು ಒಡಿಶಾದ ಪುರಿಯಲ್ಲಿರುವ ಎರಡು IRCTC ಹೋಟೆಲ್‌ಗಳ ನಿರ್ವಹಣಾ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 12 ಮಂದಿ ಮತ್ತು 2 ಸಂಸ್ಥೆಗಳ ಮೇಲೆ ಆರೋಪ ಹೊರಿಸಿತ್ತು. ಈ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಖಾಸಗಿ ಸಂಸ್ಥೆಗಳು ಬಿಹಾರದ ರಾಜಧಾನಿ ಪಾಟ್ನಾದ ಪ್ರಮುಖ ಸ್ಥಳದಲ್ಲಿ 3 ಎಕರೆ ವಾಣಿಜ್ಯ ಜಮೀನು ರೂಪದಲ್ಲಿ ಲಂಚವನ್ನು ನೀಡಿವೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇಡಿ, ಸಿಬಿಐನವರು ನನ್ನ ಮನೆಯಲ್ಲೇ ಕಚೇರಿ ತೆರೆಯಬಹುದು: ತೇಜಸ್ವಿ ಯಾದವ್

ಜಾರಿ ನಿರ್ದೇಶನಾಲಯ ಕೂಡ ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಅಕ್ರಮ ಹಣ ವರ್ಗಾವಣೆ ಆರೋಪ ಮಾಡಿತ್ತು.

click me!