ನಾನು RSS ಕಚೇರಿಗೆ ಬರ್ಬೇಕಾದ್ರೆ ನನ್ನ ತಲೆ ಕಡೀಬೇಕಷ್ಟೇ: ರಾಹುಲ್‌ ಗಾಂಧಿ

By BK AshwinFirst Published Jan 17, 2023, 5:58 PM IST
Highlights

ನಾನು ಖಂಡಿತವಾಗಿಯೂ ಅವರನ್ನು ಭೇಟಿಯಾಗಬಲ್ಲೆ ಮತ್ತು ಅವರನ್ನು ಅಪ್ಪಿಕೊಳ್ಳಬಲ್ಲೆ. ಆದರೆ ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವರುಣ್‌ ಗಾಂಧಿ ಬಗ್ಗೆ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಬಿಜೆಪಿ ಸಂಸದ ವರುಣ್‌ ಗಾಂಧಿ ಕಾಂಗ್ರೆಸ್‌ ಸೇರಿದಂತೆ ಇತರೆ ಕೆಲ ಪಕ್ಷಗಳನ್ನು ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ, ಸ್ವತ: ಬಿಜೆಪಿಯೇ ಅವರನ್ನು ಉಚ್ಛಾಟಿಸಲಿ ಎಂದು ವರುಣ್‌ ಗಾಂಧಿ ಕಾಯುತ್ತಿದ್ದಾರೆ.. ಈ ಕಾರಣಕ್ಕಾಗಿಯೇ ಅವರು ಬಿಜೆಪಿ ವಿರುದ್ದವೇ ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂಬ ಊಹಾಪೋಹವೂ ಹರಿದಾಡುತ್ತಿದೆ. ಈ ಹಿನ್ನೆಲೆ ವರುಣ್‌ ಗಾಂಧಿ ಕಾಂಗ್ರೆಸ್‌ ಸೇರ್ಪಡೆ ಕುರಿತು ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಇತ್ತೀಚೆಗೆ ಅವರು ವರುಣ್‌ ಗಾಂಧಿ ಬಗ್ಗೆ ಮಾತನಾಡಿದ್ದಾರೆ.

'ಭಾರತ್ ಜೋಡೋ ಯಾತ್ರೆ' (Bharat Jodo Yatra) ಮುನ್ನಡೆಸುತ್ತಿರುವ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi) ಅವರು ವರುಣ್‌ ಗಾಂಧಿ (Varun Gandhi) ಬಗ್ಗೆ ಹೇಳಿರುವುದು ಹೀಗೆ.. ಬಿಜೆಪಿ (BJP) ನಾಯಕರಾಗಿರುವ ತಮ್ಮ ಸೋದರ ಸಂಬಂಧಿ ವರುಣ್ ಗಾಂಧಿಯನ್ನು ಪ್ರೀತಿಯಿಂದ ಭೇಟಿಯಾಗಬಹುದು ಮತ್ತು ಅಪ್ಪಿಕೊಳ್ಳಬಹುದು (Hug). ಆದರೆ ಅವರು ಒಪ್ಪಿಕೊಂಡಿರುವ ಸಿದ್ಧಾಂತವನ್ನು (Ideology) ಎಂದಿಗೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಸ್ಪರ್ಧಿ ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ (Rashtriya Swayamsevak Sangh) ಹೋಗುವುದಕ್ಕಿಂತಲೂ ನನ್ನ ಶಿರಚ್ಛೇದ ಮಾಡಬೇಕೆಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನು ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿಯನ್ನು ತಬ್ಬಿಕೊಂಡ ಅಭಿಮಾನಿ: ತಳ್ಳಿದ ಕಾಂಗ್ರೆಸ್‌ ಕಾರ್ಯಕರ್ತರು

"ವರುಣ್ ಗಾಂಧಿ ಬಿಜೆಪಿಯಲ್ಲಿದ್ದಾರೆ. ಅವರು ಇಲ್ಲಿಗೆ (ಕಾಂಗ್ರೆಸ್‌ ಪಕ್ಷಕ್ಕೆ) ಕಾಲಿಟ್ಟರೆ ಅವರಿಗೆ ಸಮಸ್ಯೆಯಾಗಬಹುದು, ನನ್ನ ಸಿದ್ಧಾಂತವು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನನ್ನ ಕುಟುಂಬಕ್ಕೊಂದು ಸಿದ್ಧಾಂತವಿದೆ. ಆದರೆ, ವರುಣ್‌ ಇನ್ನೊಂದು ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದಾರೆ’’ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಲ್ಲದೆ, ‘’ನಾನು ಎಂದಿಗೂ ಆರ್‌ಎಸ್‌ಎಸ್ ಕಚೇರಿಗೆ ಹೋಗಲಾರೆ. ಅದಕ್ಕೂ ಮೊದಲು ನೀವು ನನ್ನ ತಲೆ ಕಡಿಯಬೇಕು. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತ, ಆಲೋಚನಾ ವ್ಯವಸ್ಥೆ ಇದೆ.  ವರುಣ್ ಒಮ್ಮೆ ಆ (ಆರ್‌ಎಸ್‌ಎಸ್‌) ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದಾನೆ. ಬಹುಶಃ ಈಗಲೂ ಮಾಡುತ್ತಾನೆ. ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’’ ಎಂದೂ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದರು. 

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌ ನಿಧನ!

 "ನಾನು ಖಂಡಿತವಾಗಿಯೂ ಅವರನ್ನು ಭೇಟಿಯಾಗಬಲ್ಲೆ ಮತ್ತು ಅವರನ್ನು ಅಪ್ಪಿಕೊಳ್ಳಬಲ್ಲೆ. ಆದರೆ ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಭಾರತ್ ಜೋಡೋ ಯಾತ್ರೆ ಪಂಜಾಬ್‌ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಯಾತ್ರೆ ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಅತಿ ಕೇಂದ್ರೀಕರಣವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪಕ್ಷ ಹೇಳಿಕೊಂಡಿದೆ.

ಇನ್ನು, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ದೊಡ್ಡ ಹೊಡೆತ ಅನುಭವಿಸುತ್ತದೆ ಎಂದೂ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರೆ. ‘’ಆರ್ಥಿಕ ಸಂಕಷ್ಟ, ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಬಿಜೆಪಿಗೆ ಭಾರಿ ಹೊಡೆತ ಬೀಳಲಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ವಿರುದ್ಧ ಭಾರಿ ಆಕ್ರೋಶವಿದೆ" ಎಂದು ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ವೇಳೆ ಮಂಗಳವಾರ ಆರೋಪಿಸಿದ್ದಾರೆ. 

ಇದನ್ನೂ ಓದಿ: ಬಿಜೆಪಿಗೆ ವರುಣ್‌ ಗಾಂಧಿ ಗುಡ್‌ಬೈ..? ಕಾಂಗ್ರೆಸ್‌, ಆಪ್‌, ಟಿಎಂಸಿಯತ್ತ ಚಿತ್ತ..!

ಆರ್‌ಎಸ್‌ಎಸ್ ಉತ್ತಮ ಕೆಲಸ ಮಾಡುತ್ತಿದೆ ಎಂದು ವರುಣ್ ಗಾಂಧಿ ಹಲವು ವರ್ಷಗಳ ಹಿಂದೆ ಹೇಳಲು ಪ್ರಯತ್ನಿಸಿದ್ದರು. ಆ ವೇಳೆ, ನಮ್ಮ ಕುಟುಂಬದ ಬಗ್ಗೆ ಓದಿದ್ದರೆ ಮತ್ತು ನೋಡಿದ್ದರೆ, ನೀವು ಆ ಸಿದ್ಧಾಂತ ಸ್ವೀಕರಿಸುವುದಿಲ್ಲ ಎಂದು ನಾನು ಅವನಿಗೆ ಹೇಳಿದ್ದೆ ಎಂದೂ ರಾಹುಲ್‌ ಗಾಂಧಿ ಬಹಿರಂಗಪಡಿಸಿದ್ದಾರೆ. 2009 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪಿಲಿಭಿತ್‌ನಲ್ಲಿ ಸಾರ್ವಜನಿಕ ಸಭೆಗಳಲ್ಲಿ, ಭಾಷಣಗಳಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಪ್ರಚೋದನಕಾರಿ ಕಾಮೆಂಟ್‌ಗಳಿಗಾಗಿ ಸುದ್ದಿ ಮಾಡಿದ್ದ ವರುಣ್ ಗಾಂಧಿ, ಇತ್ತೀಚಿನ ಕೆಲವು ಸಮಯದಿಂದ ತಮ್ಮದೇ ಪಕ್ಷವಾದ ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. 
 

ಇದನ್ನೂ ಓದಿ: ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ

click me!