
ನವದೆಹಲಿ(ಜ.31): ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಆಶಯಗಳನ್ನು ಈಡೇರಿಸಿದ್ದು, ಕಾಯ್ದೆ ವಿರುದ್ಧದ ಹಿಂಸಾತ್ಮಕ ಹೋರಾಟ ಖೇದಕರ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೋವಿಂದ್, ಸಿಎಎ ಮಹಾತ್ಮಾ ಗಾಂಧಿಯವರ ಕನಸುಗಳನ್ನು ನನಸು ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನವ ಭಾರತದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಏಳು ದಶಕಗಳ ಹಿಂದೆ ನಮ್ಮಿಂದ ಬೇರ್ಪಟ್ಟ ಸಹೋದರರು ಈ ಅಭಿವೃದ್ಧಿಯ ಭಾಗೀದಾರರಾಗಲು ಸಿಎಎ ಅನುಕೂಲ ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಸಿಎಎ ತಡೆಗೆ ಸುಪ್ರೀಂ ನಕಾರ: ಉತ್ತರ ಬಯಸಿ ಕೇಂದ್ರಕ್ಕೆ ಆದೇಶ!
ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದ ನಂತರ ದೇಶದ ನಾಗರಿಕರು ತೋರಿದ ವರ್ತನೆ ಮತ್ತು ನಿರ್ವಹಿಸಿದ ಶಾಂತಿಯ ಧೋರಣೆ ನಿಜಕ್ಕೂ ಶ್ಲಾಘನೀಯ ಮತ್ತು ಗಮನಾರ್ಹ. ಅದು ಈ ದೇಶದ ನಾಗರಿಕರ ವರ್ತನೆ ಮತ್ತು ಬೌದ್ಧಿಕ ಪರಿಪಕ್ವತೆಯನ್ನು ತೋರಿಸುತ್ತದೆ ಎಂದು ಕೋವಿಂದ್ ಅಭಿಪ್ರಾಯಪಟ್ಟರು.
ಆದರೆ ಸಿಎಎ ವಿರೋಧಿ ಹಿಂಸಾತ್ಮಕ ಹೋರಾಟ ಖೇದಕರ ಎಂದ ಕೋವಿಂದ್, ಅಹಿಂಸೆಯ ಮಾರ್ಗವನ್ನು ನಾವು ಎಂದೂ ಮರೆಯಬಾರದು ಎಂದು ಮನವಿ ಮಾಡಿದರು.
ಈ ವೇಳೆ ಕೋವಿಂದ್ ಅವರ ಸಿಎಎ ಉಲ್ಲೇಖವನ್ನು ಬೆಂಬಲಿಸಿ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬಂಬಲ ಸೂಚಿಸಿದರೆ, ಪ್ರತಿಪಕ್ಷಗಳು 'ಶೇಮ್ ಶೇಮ್' ಎಂದು ಕೂಗಿ ವಿರೋಧ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ