Gujarat Election: ಪಬ್ಲಿಸಿಟಿ ಸ್ಟಂಟ್ ಪೋಸ್ಟ್‌ ಹಾಕಿದ ಐಎಎಸ್‌ ಅಧಿಕಾರಿಯನ್ನು ಹೊರಹಾಕಿದ ಚುನಾವಣಾ ಆಯೋಗ!

By Santosh NaikFirst Published Nov 18, 2022, 3:50 PM IST
Highlights

ಗುಜರಾತ್‌ ಚುನಾವಣೆಗೆ ಅಬ್ಸರ್ವರ್‌ ಆಗಿ ನೇಮಕವಾಗಿದ್ದನ್ನು ಐಎಎಸ್‌ ಅಧಿಕಾರಿ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಆಕರ್ಷಕ ಫೋಟೋ ಮೂಲಕ ಹಂಚಿಕೊಂಡಿದ್ದರು. ಇದು ಗಮನಕ್ಕೆ ಬಂದಿದ್ದರಿಂದ ಕೇಂದ್ರ ಚುನಾವಣಾ ಆಯೋಗ ಅಭಿಷೇಕ್‌ ಸಿಂಗ್‌ ಬದಲಿಗೆ ಕೃಷ್ಣನ್‌ ಬಾಜಪೇಯಿ ಅವರನ್ನು ಅಬ್ಸರ್ವರ್‌ ಆಗಿ ನೇಮಕ ಮಾಡಿದೆ.

ನವದೆಹಲಿ (ನ.18): ಗುಜರಾತ್‌ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಲಾಗದ್ದ ಐಎಎಸ್‌ ಅಧಿಕಾರಿಯೊಬ್ಬರು, ಇನ್ಸ್‌ಟಾಗ್ರಾಮ್‌ ಪೋಸ್ಟ್‌ವೊಂದರ ಕಾರಣಕ್ಕೆ ಈ ಅವಕಾಶವನ್ನು ಕಳೆದುಕೊಂಡಿದ್ದಾರೆ. ಐಎಎಸ್‌ ಅಧಿಕಾರಿಯಾಗಿರುವ ಅಭಿಷೇಕ್‌ ಸಿಂಗ್‌ರನ್ನು ಕೇಂದ್ರ ಚುನಾವಣಾ ಆಯೋಗ ಗುಜರಾತ್‌ ಚುನಾವಣೆಗ ವೀಕ್ಷಕ ಅಥವಾ ಅಬ್ಸರ್ವರ್‌ ಆಗಿ ನೇಮಕ ಮಾಡಿತ್ತು. ಆದರೆ, ಅಭಿಷೇಕ್‌ ಸಿಂಗ್‌ ಈ ವಿಚಾರವನ್ನು ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದು ಚುನಾವಣಾ ಆಯೋಗದ ಕೆಂಗಣ್ಣಿಗೆ ಕಾರಣವಾಗಿದೆ. 'ಅಭಿಷೇಕ್‌ ಸಿಂಗ್‌ ತಾವು ಗುಜರಾತ್‌ ಚುನಾಣೆಗೆ ಸಾಮಾನ್ಯ ಅಬ್ಸರ್ವರ್‌ ಆಗಿ ಪೋಸ್ಟಿಂಗ್‌ ಅಥವಾ ನೇಮಕವಾಗಿದ್ದನ್ನು ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದರು. ಅವರು ತಮ್ಮ ಅಧಿಕೃತ ಪದವಿಯನ್ನು ಪಬ್ಲಿಸಿಟಿ ಸ್ಟಂಟ್‌ಗಾಗಿ ಬಳಸಿಕೊಂಡಿದ್ದರು' ಎಂದು ಕೇಂದ್ರ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶ ಮೂಲದ ಕೆಡರ್‌ನ ಅಭಿಷೇಕ್‌ ಸಿಂಗ್‌ ಅವರನ್ನು ಗುಜರಾತ್‌ ಚುನಾವಣೆಯ ಅಹಮದಾಬಾದ್‌ನ ಎರಡು ಕ್ಷೇತ್ರಗಳಾದ ಬಾಪು ನಗರ ಹಾಗೂ ಅಸರ್ವಾದ ವೀಕ್ಷಕರನ್ನಾಗಿ ಕೇಂದ್ರ ಚುನಾವಣಾ ಆಯೋಗ  ನೇಮಿಸಿತ್ತು. ಮುಂದಿನ ತಿಂಗಳು ಡಿಸೆಂಬರ್‌ 1 ಹಾಗೂ 5ಕ್ಕೆ ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದೆ.

 


ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ತಮ್ಮನ್ನು ತಾವು ಅಭಿಷೇಷಕ್‌ ಎಸ್‌ ಐಎಎಸ್‌ ಎಂದು ಕರೆಸಿಕೊಳ್ಳುವ ವ್ಯಕ್ತಿ, ಇನ್ಸ್‌ಟಾಗ್ರಾಮ್‌ನಲ್ಲಿ ಎರಡು ಚಿತ್ರಗಳನ್ನು ಪೋಸ್ಟ್‌ ಮಾಡಿದ್ದರು. ಒಂದು ಚಿತ್ರದಲ್ಲಿ ಅಧಿಕೃತ ಕಾರ್‌ನ ಮುಂದೆ ಅವರು ನಿಂತಿದ್ದು, ಕಾರ್‌ನ ಎದುರುಗಡೆ ಅಬ್ಸರ್ವರ್‌ ಎಂದು ಇಂಗ್ಲೀಷ್‌ನಲ್ಲಿ ದೊಡ್ಡದಾಗಿ ಬರೆಯಲಾಗುದೆ. ಅದರೊಂದಿಗೆ ಕಾರಿನ  ಮೇಲ್ಬಾಗದಲ್ಲಿ ಕೆಂಪು ಬಣ್ಣದ ದೀಪ ಕೂಡ ಇದೆ. ಕ್ಯಾಪ್ಷನ್‌ನಲ್ಲಿ ಗುಜರಾತ್‌ ಚುನಾವಣೆಗೆ ಅಬ್ಸರ್ವರ್‌ ಆಗಿ ಸೇರಿದ್ದೇನೆ ಎಂದು ಬರೆದುಕೊಂಡಿದ್ದರು. ಇನ್ನೊಂದು ಚಿತ್ರದಲ್ಲಿ ಇತರ ಮೂರು ಸಿಬ್ಬಂದಿಯೊಂದಿಗೆ ಭದ್ರತಾ ಪಡೆಗಳೊಂದಿಗೆ ಅವರು ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅಭಿಷೇಕ್‌ ಸಿಂಗ್ (IAS Officer IAS Officer) ಅವರು ತಮ್ಮನ್ನು "ಸಾರ್ವಜನಿಕ ಸೇವಕ, ನಟ, ಉದ್ಯಮಿ ಮತ್ತು ಆಶಾವಾದಿ" ಎಂದು ಹೇಳುತ್ತಾರೆ. ಇನ್ಸ್‌ಟಾಗ್ರಾಮ್‌ ಮಾತ್ರವಲ್ಲದೆ ಇದೇ ಚಿತ್ರಗಳನ್ನು ಟ್ವಿಟರ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

Gujarat Election 2022: ನರೇಂದ್ರ ಮೋದಿ ಸ್ಟೇಡಿಯಂ ಹೆಸರು ಬದಲಾವಣೆ, ಉದ್ಯೋಗ ಭರವಸೆ ನೀಡಿದ ಕಾಂಗ್ರೆಸ್‌ ಪ್ರಣಾಳಿಕೆ!

ಮೂಲಗಳ ಪ್ರಕಾರ, ಚುನಾವಣಾ ಆಯೋಗಕ್ಕೆ (Election Commission) ಅಭಿಷೇಕ್‌ ಸಿಂಗ್‌ ಅವರ ವರ್ತನೆ ಇಷ್ಟವಾಗಿಲ್ಲ. ಚುನಾವಣಾ ಆಯೋಗ ತಾನು ನೇಮಕ ಮಾಡುವ ಎಲ್ಲಾ ವ್ಯಕ್ತಿಗಳು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಅಷ್ಟೇ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಬಯಸುತ್ತದೆ. ಚುನಾವಣೆಗೆ ವೀಕ್ಷರಾಗಿರುವ ಐಎಎಸ್‌ ಅಧಿಕಾರಿ ಇದನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿತ್ತು. 'ಸಾಮಾನ್ಯ ವೀಕ್ಷಕರಾಗಿ ಅವರನ್ನು ಕರ್ತವ್ಯದಿಂದ ತಕ್ಷಣವೇ ಬಿಡುಗಡೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಸಂಬಂಧಿತ ಕರ್ತವ್ಯದಿಂದ ಅವರನ್ನು ಹೊರಹಾಕಲಾಗಿದೆ' ಎಂದು ಸೂಚನೆ ನೀಡಿದೆ.

ಗುಜರಾತ್‌ ಬಿಜೆಪಿಯಲ್ಲಿ ಆಗಿರುವುದು ಕರ್ನಾಟಕದಲ್ಲೂ ಆಗಲಿ, ಲೆಹರ್‌ ಸಿಂಗ್‌ ಟ್ವೀಟ್‌!

ಅಧಿಕಾರಿಯು ತಕ್ಷಣವೇ ಕ್ಷೇತ್ರವನ್ನು ತೊರೆಯಬೇಕು ಎಂದು ಹೇಳಲಾಗಿದ್ದು, ಮೂಲ ಕೆಡರ್‌ಗೆ ಆದಷ್ಟು ಶೀಘ್ರವಾಗಿ ತೆರಳುವಂತೆ ಆದೇಶ ನೀಡಲಾಗಿದೆ. ಅವರ ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದ ಕಾರು ಸೇರಿದಂತೆ ಗುಜರಾತ್‌ನಲ್ಲಿ ಅವರಿಗೆ ಒದಗಿಸಲಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಸಹ ಕಸಿದುಕೊಳ್ಳಲಾಗಿದೆ. ಅಭಿಷೇಕ್‌ ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕೃಷ್ಣನ್‌ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ. ಗುಜರಾತ್‌ನಲ್ಲಿ (Gujarat Election) ಎರಡು ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಅದೇ ದಿನ ಹಿಮಾಚಲ ಪ್ರದೇಶದ (Himachal Pradesh) ಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಲಿದೆ.

click me!