Latest Videos

ಮತ್ತೆ ಅಳಿಯ ಆಕಾಶ್‌ ಆನಂದ್‌ ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ ಮಾಯಾವತಿ

By Mahmad RafikFirst Published Jun 23, 2024, 7:57 PM IST
Highlights

ಚುನಾವಣೆ ಪ್ರಚಾರಗಳಲ್ಲಿ ತುಂಬಾ ಸಕ್ರಿಯರಾಗಿದ್ದ ಆಕಾಶ್ ಆನಂದ್ , ಆಕ್ರಮಣಕಾರಿಯಾಗಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆಕಾಶ್ ಆನಂದ್ ಭಾಷಣ ಉತ್ತರ ಪ್ರದೇಶ ರಾಜಕೀಯ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. 

ನವದೆಹಲಿ: ಲೋಕಸಭಾ ಚುನಾವಣೆ ಸೋಲಿನ ಬಳಿಕ ಬಿಎಸ್‌ಪಿ ನಾಯಕಿ, ಮುಖ್ಯಸ್ಥೆ, ಮಾಜಿ ಸಿಎಂ ಮಾಯಾವತಿ (BSP Leader Mayawati) ಮತ್ತೊಮ್ಮೆ ಅಳಿಯ ಆಕಾಶ್ ಆನಂದ್‌ (Akash Anand) ತಮ್ಮ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ಆಕಾಶ್ ಆನಂದ್‌ ಅವರನ್ನು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಶನಿವಾರವಷ್ಟೇ ಅಕಾಶ್ ಆನಂದ್ ಅವರನ್ನು ಉತ್ತರಾಖಂಡ ಉಪ ಚುನಾವಣೆಯ (Uttarakhand by Election) ಸ್ಟಾರ್‌ ಪ್ರಚಾರಕರನ್ನಾಗಿ ನೇಮಿಸಲಾಗಿತ್ತು. ಇಂದು ಮಾಯಾವತಿ ತಮ್ಮ ಪಕ್ಷದ ಎಲ್ಲಾ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಆಕಾಶ್ ಆನಂದ್ ಆಗಮಿಸಿದ್ದರು. ಮಾಯಾವತಿಯವರ ಕಾಲಿಗೆ ನಮಸ್ಕರಿಸುವ ಮೂಲಕ ಆಕಾಶ್ ಆನಂದ್ ಆಶೀರ್ವಾದ ಪಡೆದುಕೊಂಡರು. ಸುದೀರ್ಘ ಸಭೆ ಬಳಿಕ ಆಕಾಶ್ ಅನಂದ್ ತಮ್ಮ ಉತ್ತರಾಧಿಕಾರಿ ಎಂದು ಮಾಯಾವತಿ ಘೋಷಣೆ ಮಾಡಿದರು. 

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಕಾಶ್ ಅನಂದ್ ಇನ್ನು ರಾಜಕಾರಣದಲ್ಲಿ ಪ್ರಬುದ್ಧತೆಯನ್ನು ಹೊಂದಿಲ್ಲ ಎಂಬ ಸ್ಪಷ್ಟನೆ ನೀಡಿ ಪಕ್ಷದ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಲೋಕಸಮರದ ಸಂದರ್ಭದಲ್ಲಿ ಮಾಯಾವತಿಯರ ಈ ನಿರ್ಧಾರ ಪಕ್ಷದಲ್ಲಿ ದೊಡ್ಡಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು.

ಆಕಾಶ್  ಆಗಮನದಿಂದ ಹೊಸ ಹುಮ್ಮಸ್ಸು

ಈ ಬಾರಿಯ ಚುನಾವಣೆ ಪ್ರಚಾರಗಳಲ್ಲಿ ಆಕಾಶ್ ಆನಂದ್ ತುಂಬಾ ಸಕ್ರಿಯರಾಗಿದ್ದು, ಆಕ್ರಮಣಕಾರಿಯಾಗಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆಕಾಶ್ ಆನಂದ್ ಭಾಷಣ ಉತ್ತರ ಪ್ರದೇಶ ರಾಜಕೀಯ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇಷ್ಟು ಮಾತ್ರವಲ್ಲದೇ ವಿರೋಧಿಗಳ ಆರೋಪಗಳಿಗೆ ಪ್ರಬುದ್ಧ ರಾಜಕಾರಣಿಗಳಂತೆಯೇ ತೀಕ್ಷ್ಣವಾಗಿ ತಿರುಗೇಟು ನೀಡುವುದು ಕಂಡು ಬಂದಿತ್ತು. ಆಕಾಶ್ ಆನಂದ್ ಆಗಮನದಿಂದ ಬಿಎಸ್‌ಪಿಯಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. 

ವಿವಾದಾತ್ಮಕ ಹೇಳಿಕೆ ನೀಡಿದ್ದ ಆಕಾಶ್ ಆನಂದ್ 

ಚುನಾವಣೆ ಸಮಾವೇಶಗಳ ಆಕ್ರಮಣಕಾರಿ ಭಾಷಣದಲ್ಲಿ ಆಕಾಶ್ ಆನಂದ್,  ಬಿಜೆಪಿ ಉಗ್ರರ ಪಕ್ಷ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಆಕಾಶ್ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿತ್ತು. ಈ ಹೇಳಿಕೆ ಹಿನ್ನೆಲೆ ಆಕಾಶ್ ಆನಂದ್‌ ಅವರನ್ನು ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಕೆಳಗಿಳಿಸಿ ಮಾಯಾವತಿ ಆದೇಶ ಹೊರಡಿಸಿದ್ದರು. ಈ ಆದೇಶದ ಬಳಿಕ ಮಾತನಾಡಿದ್ದ ಮಾಯಾವತಿ, ರಾಜಕೀಯದಲ್ಲಿ ಆಕಾಶ್‌ ಆನಂದ್‌ಗೆ ಇನ್ನು ಸ್ವಲ್ಪ ಪರಿಕ್ವತೆ ಬರಬೇಕಿದೆ ಎಂದು ಹೇಳಿದ್ದರು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಎಸ್‌ಪಿ ಶೇ.10ರಷ್ಟು ಮಾತ್ರಗಳನ್ನು ತೆಗೆದುಕೊಂಡಿತ್ತು. ಕಳೆದ ಚುನಾವಣೆಗಿಂತ ಶೇ.9ರಷ್ಟು ಕುಸಿತವಾಗಿದೆ. 

click me!