Bitcoin Scam| 5240 ಕೋಟಿ ರೂ. ಕ್ರಿಪ್ಟೋಕರೆನ್ಸಿ ಎಲ್ಲಿಹೋಯ್ತು?: ಬಿಜೆಪಿಗೆ ಸುರ್ಜೇವಾಲಾ 6 ಪ್ರಶ್ನೆ

By Kannadaprabha NewsFirst Published Nov 14, 2021, 6:34 AM IST
Highlights

* ಹಗರಣದಲ್ಲಿ ಸಿಎಂ ಬೊಮ್ಮಾಯಿ ಪಾತ್ರವೇನು?

* ಬಿಟ್‌ಕಾಯಿನ್‌: ಬಿಜೆಪಿಗೆ ಸುರ್ಜೇವಾಲಾ 6 ಪ್ರಶ್ನೆ

* 5240 ಕೋಟಿ ಕ್ರಿಪ್ಟೋಕರೆನ್ಸಿ ಎಲ್ಲಿಹೋಯ್ತು?

ನವದೆಹಲಿ(ನ.14): ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್‌ ಹಗರಣವನ್ನು (Bitcoin Scam) ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಹಗರಣವಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ (Supreme Court) ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ (SIT Investigation) ನಡೆಸಬೇಕು ಎಂದು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep Singh Surjewala) ಆಗ್ರಹಿಸಿದ್ದಾರೆ.

"

 ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಕರ್ನಾಟಕದಲ್ಲಿ (Karnataka) ಭಾರತದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ (Bitcoin Scam) ಬೆಳಕಿಗೆ ಬಂದಿದೆ. ಇದೊಂದು ಅಂತಾರಾಷ್ಟ್ರೀಯ ಹಗರಣ. ಈ ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ರಾಜ್ಯ ಬಿಜೆಪಿ ಸರ್ಕಾರವು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಗಿಳಿದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಈ ಹಗರಣ ಸಂಬಂಧ ಆಡಳಿತ ಪಕ್ಷ ಬಿಜೆಪಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ

1. ಕರ್ನಾಟಕದಲ್ಲಿ ನಡೆದ ಬಹುಕೋಟಿ ಬಿಟ್‌ ಕಾಯಿನ್‌ ಹಗರಣ ಮುಚ್ಚಿಹಾಕುವ ಯತ್ನದ ಹಿಂದಿರುವ ಸೂತ್ರಧಾರಿಗಳು ಯಾರು?

2. ಕಳುವಾಗಿದ್ದ ಬಿಟ್‌ ಕಾಯಿನ್‌ಗಳು ಆರೋಪಿ ಶ್ರೀಕೃಷ್ಣನ ಅಕೌಂಟ್‌ನಿಂದ ಯಾರಿಗೆ ವರ್ಗಾವಣೆಯಾಗಿವೆ? ಎಷ್ಟುಬಿಟ್‌ ಕಾಯಿನ್‌ಗಳು ವರ್ಗಾವಣೆ ಆಗಿವೆ ಮತ್ತು ಅವುಗಳ ಮೌಲ್ಯ ಎಷ್ಟು? ಆರೋಪಿಯಿಂದ ವಶ ಪಡಿಸಿಕೊಂಡಿರುವ 31 ಮತ್ತು ಪೊಲೀಸ್‌ ವ್ಯಾಲೆಟ್‌ಗೆ ವರ್ಗಾವಣೆ ಆಗಿರುವ 186 ಬಿಟ್‌ ಕಾಯಿನ್‌ಗಳು ಕಳೆದು ಹೋದವು ಅಥವಾ ನಕಲಿ(ಪಂಚನಾಮೆಯಲ್ಲಿ ಹೇಳಿಕೊಂಡಂತೆ) ಎಂದು ಪೊಲೀಸರು ಹೇಗೆ ನಿರ್ಧಾರಕ್ಕೆ ಬಂದರು?

3.ವೇಲ್‌ ಅಲರ್ಟ್‌ (ದೊಡ್ಡ ಮಟ್ಟದ ಕ್ರಿಪ್ಟೋಕರೆನ್ಸಿಯ ವರ್ಗಾವಣೆ ಕುರಿತು ಮಾಹಿತಿ ನೀಡುವ ಟ್ವೀಟರ್‌ ಖಾತೆ) ಮಾಹಿತಿ ಪ್ರಕಾರ ಬಿಟ್‌ ಫೀನಿಕ್ಸ್‌ ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ನಿಂದ ಕಳುವಾಗಿರುವ 14,682 ಬಿಟ್‌ ಕಾಯಿನ್‌ಗಳು ಡಿ.1 (2020) ಮತ್ತು ಏ.14 (2021)ರಂದು ವರ್ಗಾವಣೆ ಆಗಿವೆ. ಇದರ ಮೌಲ್ಯ .5,240 ಕೋಟಿ. ಬಿಟ್‌ ಕಾಯಿನ್‌ ವರ್ಗಾವಣೆ ಆಗುವ ಸಂದರ್ಭದಲ್ಲಿ ಆರೋಪಿ ಶ್ರೀಕೃಷ್ಣ ಪೊಲೀಸರ ವಶದಲ್ಲಿದ್ದ. ತನಿಖೆ ವೇಳೆ ಆ ಕಾಯಿನ್‌ಗಳು ಯಾರ ಖಾತೆಗೆ ವರ್ಗಾವಣೆ ಆಗಿವೆ?

4. ಈ ಹಗರಣ ಮುಚ್ಚಿಹಾಕುವ ಪ್ರಯತ್ನದಲ್ಲಿ ಆಗಿನ ಗೃಹ ಸಚಿವರು ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ಇತರರ ಪಾತ್ರ ಏನು?

5. ಇಷ್ಟುದೊಡ್ಡ ಅಂತಾರಾಷ್ಟ್ರೀಯ ಹಗರಣ ನಡೆದಿದ್ದರೂ ಇಂಟರ್‌ಪೋಲ್‌ಗೆ ಯಾಕೆ ಮಾಹಿತಿ ನೀಡಿಲ್ಲ? ಇಂಟರ್‌ಪೋಲ್‌ಗೆ ಪತ್ರ ಬರೆಯಲು ಬಿಜೆಪಿ ಸರ್ಕಾರ ಐದು ತಿಂಗಳು(ಏ.24, 2021) ತೆಗೆದುಕೊಂಡಿದ್ದು ಯಾಕೆ? ಅದೂ ಆರೋಪಿ ಶ್ರೀಕೃಷ್ಣ ಬಿಡುಗಡೆ (ಏ.17, 2021)ಯಾದ ನಂತರ ಪತ್ರ ಬರೆದಿದ್ದು ಯಾಕೆ?

6. ಎನ್‌ಐಎ (ರಾಷ್ಟ್ರೀಯ ತನಿಖಾ ದಳ), ಎಸ್‌ಎಫ್‌ಐಒ (ಗಂಭೀರ ವಂಚನೆ ತನಿಖಾ ಕಚೇರಿ), ಇ.ಡಿ.ಗೆ ಕರ್ನಾಟಕದ ಬಿಜೆಪಿ ಸರ್ಕಾರ ಯಾಕೆ ಮಾಹಿತಿ ನೀಡಿಲ್ಲ?

ಮೋದಿಗೂ ಮುಜುಗರ:

ಇದೇ ವೇಳೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಮೌನವನ್ನೂ ಪ್ರಶ್ನಿಸಿದ ಸುರ್ಜೇವಾಲಾ ಅವರು, ಇತ್ತೀಚೆಗೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ವೇಳೆ ಅವರಿಗೆ ಅಲ್ಲಿನ ತನಿಖಾ ಸಂಸ್ಥೆಯಾದ ಎಫ್‌ಬಿಐನಿಂದ ಹಗರಣದ ಕುರಿತು ಮಾಹಿತಿ ನೀಡಲಾಗಿತ್ತು. ಈ ವೇಳೆ ಮೋದಿ ಅವರಿಗೂ ಮುಜುಗರ ಆಗಿತ್ತು. ಇದೊಂದು ಬಹುರಾಷ್ಟ್ರೀಯ ಹಗರಣವಾಗಿದ್ದು, ಈ ವಿಚಾರದಲ್ಲಿ ಸತ್ಯ ಹೊರಬರಲೇಬೇಕು ಎಂದರು.

ಈ ಹಗರಣದಲ್ಲಿ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರೆ ಅವರನ್ನು ನೇಣಿಗೆ ಹಾಕಬಹುದು. ಯಾರಿದ್ದರೂ ಬಿಡಬಾರದು. ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ರಾಜಕೀಯ ಪ್ರತಿಷ್ಠೆ ಕುರಿತು ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಅವರು ಪ್ರಾಮಾಣಿಕರಾಗಿದ್ದರೆ ಖುದ್ದು ಎಸ್‌ಐಟಿ ತನಿಖೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರಬರೆಯಬೇಕು ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.

click me!