
ನವದೆಹಲಿ(ಮಾ.10) ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿದೆ. ಟಿಕೆಟ್ಗಾಗಿ ಕಸರತ್ತು ನಡೆಯುತ್ತಿದೆ. ಟಿಕೆಟ್ ಕೈತಪ್ಪು ಭೀತಿಯಲ್ಲಿರುವ ನಾಯಕರು ಪಕ್ಷಾಂತರಕ್ಕೆ ಸಜ್ಜಾಗುತ್ತಿದ್ದಾರೆ. ಬಿಜೆಪಿ ತನ್ನ ಮೊದಲ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಹರ್ಯಾಣ ಹಿಸ್ಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಪಕ್ಷ ತೊರೆದಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿದ ಬ್ರಿಜೇಂದ್ರ ಸಿಂಗ್ ಇದೀಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹಿಸ್ಸಾರ್ ಕ್ಷೇತ್ರದ ಹಾಲಿ ಸಂಸದರಾಗಿರುವ ಬ್ರಿಜೇಂದ್ರ ಸಿಂಗ್ ರಾಜೀನಾಮೆ ಸಂಚಲನ ಸೃಷ್ಟಿಸಿದೆ.
ಕೆಲ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹಿಸ್ಸಾರ್ ಕ್ಷೇತ್ರದ ಸಂಸದನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷಕ್ಕೆ ಹಾಗೂ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಕೃತಜ್ಞತೆಗಳು ಎಂದು ಬ್ರಿಜೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಯಲ್ಲಿ ನನಗೆ ತೃಪ್ತಿ ಇರಲಿಲ್ಲ, ಕೆಲ ವಿಚಾರಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ನೋವು ತಂದಿದೆ ಎಂದು ಬ್ರಿಜೇಂದ್ರ ಸಿಂಗ್ ಹೇಳಿದ್ದಾರೆ.
ಚುನಾವಣೆಗೆ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಟಿಎಂಸಿ, ಸಿಎಂ ಮಮತಾ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡ!
ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವ ಬ್ರಿಜೇಂದ್ರ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳಿದ್ದಾರೆ. ರೈತ ಪ್ರತಿಭಟನೆ, ಕುಸ್ತಿಪಟುಗಳ ಪ್ರತಿಭಟನೆ ವೇಳೆ ಬಿಜೆಪಿ ನಡೆದುಕೊಂಡ ರೀತಿ ಅಸಮಾಧಾನ ತಂದಿದೆ. ಹೀಗಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಬೂಷಣ್ ಸಿಂಗ್ ವಿರುದ್ದ ಲೈಂಗಿಕೆ ಕಿರುಕುಳ ಆರೋಪ ಮಾಡಿದ ಕುಸ್ತಿಪಟುಗಳು ಭಾರಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಬ್ರಿಜೇಂದ್ರ ಸಿಂಗ್ ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದರು. ಬಿಜೆಪಿ ವಿರುದ್ದ ತೊಡೆತಟ್ಟಿದ್ದ ಬ್ರಿಜೇಂದ್ರ ಸಿಂಗ್ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬಂದಿತ್ತು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಷ್ಟೇ: ಸಂಸದ ರಾಘವೇಂದ್ರ
ಐಎಎಸ್ ಅಧಿಕಾರಿಯಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬ್ರಿಜೇಂದ್ರ ಸಿಂಗ್ ನಿವೃತ್ತಿ ಪಡೆದು ರಾಜಕೀಯ ಪ್ರವೇಶ ಮಾಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ಹಿಸ್ಸಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದ ಬ್ರಿಜೇಂದ್ರ ಸಿಂಗ್, ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಬಿಜೆಪಿಯ ಹಿರಿಯ ನಾಯಕ ಚೌಧರಿ ಬೀರೇಂದ್ರ ಸಿಂಗ್ ಪುತ್ರ, ಬ್ರಿಜೇಂದ್ರ ಸಿಂಗ್ ಇದೀಗ ಕಾಂಗ್ರೆಸ್ ಸೇರಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಬ್ರಿಜೇಂದ್ರ ಸಿಂಗ್ ತಾಯಿ ಪ್ರೇಮಲತಾ ಹರ್ಯಾಣದಲ್ಲಿ ಬಿಜೆಪಿ ಶಾಸಕರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ