
ನಯಾ ರಾಯ್ಪುರ (ಫೆಬ್ರವರಿ 27, 2023): ಕಾಂಗ್ರೆಸ್ನ 85ನೇ ಮಹಾಧಿವೇಶನದ ವೇಳೆ ರಾಹುಲ್ ಗಾಂಧಿ ‘ಸತ್ಯಾಗ್ರಹ’ದ ಬಗ್ಗೆ ವಿವರಿಸುವಾದ ತಪ್ಪಾಗಿ ಹೇಳಿದ ವಿಡಿಯೋವನ್ನು ವಿರೋಧ ಪಕ್ಷ ಬಿಜೆಪಿ ಟ್ವೀಟ್ ಮಾಡುವ ಮೂಲಕ ರಾಹುಲ್ರನ್ನು ಅಣಕಿಸಿದೆ. ಮಾಜಿ ಸಚಿವ ಹಾಗೂ ಬಿಜೆಪಿಯ ರಾಜ್ಯ ವಕ್ತಾರ ರಾಜೇಶ್ ಮುನ್ನತ್ ಈ ಟ್ವೀಟ್ ಮಾಡಿದ್ದು, ‘ರಾಹುಲ್ ಗಾಂಧಿಯ ಬಾಯಲ್ಲಿ ಸತ್ಯ ಎಂಬುದು ಸತ್ತಾ (ಅಧಿಕಾರ) ಆಗಿದೆ. ಉಚ್ಚಾರಣೆ ಮಾಡುವ ಮೊದಲು ಅದರ ಸರಿಯಾದ ಅರ್ಥವನ್ನು ಕಾಂಗ್ರೆಸ್ ನಾಯಕ ತಿಳಿದುಕೊಳ್ಳಬೇಕು’ ಎಂದು ಹೇಳಿದ್ದಾರೆ.
ಭಾಷಣದ ವೇಳೆ ರಾಹುಲ್, ‘ಮಹಾತ್ಮ ಗಾಂಧಿ ಅವರು ಸತ್ಯಾಗ್ರಹದ ಮಾರ್ಗವನ್ನು ಎಂದಿಗೂ ಬಿಡಬಾರದು ಎಂದು ಜನರಿಗೆ ಕರೆ ನೀಡಿದ್ದಾರೆ. ಇದರ ಅರ್ಥ ಎಂದಿಗೂ ಸತ್ತಾ (ಅಧಿಕಾರ) ವನ್ನು ಬಿಡಬಾರದು ಎಂಬುದಾಗಿದೆ’ ಎಂದು ಹೇಳಿದರು. ತಕ್ಷಣವೇ ಇದನ್ನು ಸರಿಪಡಿಸಿಕೊಂಡ ರಾಹುಲ್, ‘ಸತ್ಯದ ಮಾರ್ಗವನ್ನು ಬಿಡಬಾರದು ಎಂಬುದಾಗಿದೆ. ಆದರೆ ಬಿಜೆಪಿ ಸತ್ತಾದ ಮಾರ್ಗ ಹಿಡಿದುಕೊಂಡಿದೆ’ ಎಂದು ಹೇಳಿದರು.
ಇದನ್ನು ಓದಿ: ಕರ್ನಾಟಕ ಚುನಾವಣೆಗೆ ಒಗ್ಗಟ್ಟು ಕಾಪಾಡಿ; ಪಕ್ಷ ವಿಜಯಿ ಆಗುವಂತೆ ನೋಡಿಕೊಳ್ಳಿ: ಮುಖಂಡರಿಗೆ ಕಾಂಗ್ರೆಸ್ ಕರೆ
ದೇಶಕ್ಕೆ ಅದಾನಿ ಕಂಪನಿ ಮಾರಕ: ಕಾಂಗ್ರೆಸ್ ಮಹಾಧಿವೇಶನದಲ್ಲಿ ರಾಗಾ ಭಾಷಣ
‘ಉದ್ಯಮಿ ಗೌತಮ್ ಅದಾನಿಯ ಅವರ ಕಂಪನಿ ದೇಶದ ಇಡೀ ಮೂಲಸೌಕರ್ಯವನ್ನು ಕಸಿದುಕೊಂಡು ಮಾರಕವಾಗಿ ಪರಿಣಮಿಸುತ್ತಿದೆ. ಈಸ್ಟ್ ಇಂಡಿಯಾ ಕಂಪನಿ ಥರ ಅದು ವರ್ತಿಸುತ್ತಿದೆ’ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಈ ಕುರಿತಾಗಿ ಸಂಸತ್ತಿನಲ್ಲಿ ಪ್ರಶ್ನಿಸಿದಂತೆ ಸತ್ಯ ಹೊರಬರುವವರೆಗೂ ನಾವು ಪ್ರಶ್ನಿಸುತ್ತಲೇ ಇರುತ್ತೇವೆ’ ಎಂದಿದ್ದಾರೆ.
ಕಾಂಗ್ರೆಸ್ನ ಮಹಾಧಿವೇಶನದ ಕೊನೆ ದಿನ ಮಾತನಾಡಿದ ಅವರು, ‘ಅದಾನಿ ಮತ್ತು ಪ್ರಧಾನಿ ಮೋದಿ ಅವರಿಗೆ ಏನು ಸಂಬಂಧ ಎಂಬುದರ ಕುರಿತಾಗಿ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳನ್ನು ನಿರ್ನಾಮ ಮಾಡಲಾಯಿತು. ಆದರೆ ಸಂಪೂರ್ಣ ಸತ್ಯ ಹೊರಬರುವವರೆಗೂ ನಾವು ಪ್ರಶ್ನಿಸುತ್ತಲೇ ಇರುತ್ತೇವೆ.
ಇದನ್ನೂ ಓದಿ: ಕಾಂಗ್ರೆಸ್ ಸದಸ್ಯರಿಗೆ ಡ್ರಗ್ಸ್ ನಿರ್ಬಂಧ: ಸಿಡಬ್ಲ್ಯುಸಿಯಲ್ಲಿ ಶೇ. 50 ರಷ್ಟು ಮೀಸಲಿಗೆ ಅಸ್ತು
ದೇಶದ ಸಂಪೂರ್ಣ ಮೂಲಸೌಕರ್ಯಗಳನ್ನು ದೋಚುವ ಮೂಲಕ ಅದಾನಿ ದೇಶಕ್ಕೆ ಹಾನಿ ಮಾಡುತ್ತಿದ್ದಾರೆ. ಸಂಪತ್ತನ್ನು ಕ್ರೋಡೀಕರಿಸುವ ಮೂಲಕ ಅದಾನಿ ದೇಶವಿರೋಧಿ ಕೆಲಸ ಮಾಡುತ್ತಿದ್ದಾರೆ. ದೇಶ ಈಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದು, ಎಲ್ಲಾ ಸಂಪತ್ತು ಮತ್ತು ಬಂದರುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಒಂದು ಕಂಪನಿಯ ವಿರುದ್ಧ ಹೋರಾಡುತ್ತಿದ್ದೇವೆ. ಇತಿಹಾಸ ಮತ್ತೊಮ್ಮೆ ಪುನಾರಾವರ್ತನೆಯಾಗುತ್ತಿದೆ. ಯಾವುದು ದೇಶದ ವಿರುದ್ಧ ಇರುತ್ತದೆಯೋ ಕಾಂಗ್ರೆಸ್ ಒಗ್ಗಟ್ಟಾಗಿ ಅದರ ವಿರುದ್ಧ ನಿಲ್ಲುತ್ತದೆ’ ಎಂದು ಹೇಳಿದರು.
ನನಗೆ ಸ್ವಂತ ಮನೆ ಇಲ್ಲ: ರಾಹುಲ್
ನನ್ನ ಜೀವನದಲ್ಲಿ ನಾನೆಂದೂ ಸ್ವಂತ ಮನೆ ಹೊಂದಲಿಲ್ಲ. ಈ ಅನುಭವವೇ ನನಗೆ ಭಾರತ್ ಜೋಡೋ ಯಾತ್ರೆಯಲ್ಲಿ ಬದಲಾವಣೆಗೆ ಕಾರಣವಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: 2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?
ಇಲ್ಲಿ ಕಾಂಗ್ರೆಸ್ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ರಾಹುಲ್ 1977ರ ಘಟನೆಯೊಂದನ್ನು ನೆನಪಿಸಿಕೊಂಡರು. ‘1977ರಲ್ಲಿ ನಾವು ಮನೆಯನ್ನು ಖಾಲಿ ಮಾಡಬೇಕಾಗಿ ಬಂದಿತ್ತು. ಆಗ ಮನೆಯಲ್ಲಿ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿತ್ತು.
ಆಗ ನಾನು ನಮ್ಮ ತಾಯಿಯ ಬಳಿ ತೆರಳಿ ಏನಾಯ್ತು ಎಂದೆ. ಅದಕ್ಕವರು, ನಾವು ಮನೆ ಖಾಲಿ ಮಾಡುತ್ತಿದ್ದೇವೆ ಎಂದರು. ಅಲ್ಲಿಯವರೆಗೂ ಅದನ್ನು ನಮ್ಮ ಮನೆ ಎಂದೇ ನಾನು ತಿಳಿದುಕೊಂಡಿದ್ದೆ. ಹೀಗಾಗಿ ನಾವೇಕೆ ಮನೆ ಖಾಲಿ ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿದೆ. ಅದಕ್ಕವರು ಮೊದಲ ಬಾರಿಗೆ ಇದು ನಮ್ಮ ಮನೆಯಲ್ಲ. ಸರ್ಕಾರಿ ಬಂಗಲೆ. ಹೀಗಾಗಿ ಅದನ್ನು ನಾವೀಗ ಖಾಲಿ ಮಾಡಬೇಕಿದೆ ಎಂದರು. ಆಗ ನಾನು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ತಾಯಿಯ ಬಳಿ ಕೇಳಿದೆ. ಅದಕ್ಕವರು ಗೊತ್ತಿಲ್ಲ ಎಂದರು. ಆ ಮಾತು ಕೇಳಿ ನಾನು ಅವಾಕ್ಕಾದೆ. ಅದುವರೆಗೂ ಅದು ನಮ್ಮ ಮನೆ ಎಂದೇ ನಾನು ಭಾವಿಸಿದ್ದೆ’ ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಜತೆ ನನ್ನ ಇನ್ನಿಂಗ್ಸ್ ಅಂತ್ಯವಾಗ್ಬಹುದು: ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ..!
‘ನನಗೀಗ 52 ವರ್ಷ. ಈಗಲೂ ನನ್ನ ಬಳಿ ಮನೆ ಇಲ್ಲ. ಅಲಹಾಬಾದ್ನಲ್ಲಿ ನಮ್ಮದೊಂದು ಮನೆ ಇದೆಯಾದರೂ, ಅದು ನಮ್ಮ ಪೂರ್ವಜರಿಗೆ ಸೇರಿದ್ದು. ನಾನು ವಾಸಿಸುವ ದೆಹಲಿ ಮನೆ ಕೂಡಾ ಸರ್ಕಾರಕ್ಕೆ ಸೇರಿದ್ದು’ ಎಂದರು.
ಇದನ್ನೂ ಓದಿ: ಸಿಡಬ್ಲ್ಯುಸಿಗೆ ಸದಸ್ಯರ ನೇಮಕದ ಪರಮಾಧಿಕಾರ ಖರ್ಗೆ ಹೆಗಲಿಗೆ: ಸೋನಿಯಾ, ರಾಹುಲ್ಗೆ ಕಾಯಂ ಸದಸ್ಯತ್ವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ