ಆರಂಭಿಕ ಟ್ರೆಂಡ್‌: ಬಂಗಾಳ, ಅಸ್ಸಾಂನಲ್ಲಿ ಬಹುಮತದ ಗಡಿ ದಾಟಿದ ಬಿಜೆಪಿ!

Published : May 04, 2026, 09:47 AM IST
BJP Flag pic

ಸಾರಾಂಶ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಆರಂಭಿಕ ಫಲಿತಾಂಶದಲ್ಲಿ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮ್ಯಾಜಿಕ್ ಸಂಖ್ಯೆ ತಲುಪಿ ಮಮತಾ ಬ್ಯಾನರ್ಜಿಯವರಿಗೆ ಆಘಾತ ನೀಡಿದೆ. ಅಸ್ಸಾಂನಲ್ಲಿಯೂ ಬಿಜೆಪಿ ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರದತ್ತ ಮುನ್ನಡೆಯುತ್ತಿದ್ದು, ಬಹುಮತದ ಗಡಿ ದಾಟಿದೆ.

ನವದೆಹಲಿ (ಮೇ 4): ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಆರಂಭಿಕ ಹಂತದಲ್ಲೇ ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಮುನ್ನಡೆ ಸಾಧಿಸಿದೆ. ಅತ್ಯಂತ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಕೋಟೆಗೆ ಲಗ್ಗೆ ಇಟ್ಟಿರುವ ಬಿಜೆಪಿ, ಮ್ಯಾಜಿಕ್ ನಂಬರ್ ತಲುಪಿದೆ. ಇತ್ತ ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಹಾಕುತ್ತಿದೆ.

ಬಂಗಾಳದಲ್ಲಿ ದೀದಿಗೆ ಶಾಕ್‌ ನೀಡಿದ ಬಿಜೆಪಿ

ಬಂಗಾಳದ 294 ಕ್ಷೇತ್ರಗಳ ಪೈಕಿ ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ಆದ 148 ಅನ್ನು ಮುಟ್ಟುವ ಮೂಲಕ ಟಿಎಂಸಿಗೆ ಭಾರಿ ಆಘಾತ ನೀಡಿದೆ. ಬಿಜೆಪಿ ಮೈತ್ರಿಕೂಟ 159 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು 2021ರ ಫಲಿತಾಂಶಕ್ಕೆ (72 ಸ್ಥಾನ) ಹೋಲಿಸಿದರೆ ಬರೋಬ್ಬರಿ 87 ಸ್ಥಾನಗಳ ಏರಿಕೆ ಎನಿಸಿದೆ. ಕಳೆದ ಬಾರಿ 188 ಸ್ಥಾನ ಗೆದ್ದಿದ್ದ ಟಿಎಂಸಿ ಸದ್ಯಕ್ಕೆ 119 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಅಂದರೆ ಸುಮಾರು 69 ಸ್ಥಾನಗಳ ಕುಸಿತ ಕಂಡಿದೆ. ಕಾಂಗ್ರೆಸ್ 4, ಎಡಪಕ್ಷಗಳು 3 ಮತ್ತು ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನೂ 8 ಕ್ಷೇತ್ರಗಳ ಆರಂಭಿಕ ಟ್ರೆಂಡ್‌ಗಳು ಬರಬೇಕಿದೆ.

ಅಸ್ಸಾಂ: ಮತ್ತೆ ಅರಳಿದ ಕಮಲ, ಬಿಜೆಪಿಗೆ ಸರಳ ಬಹುಮತ

ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟವು ಸತತ ಎರಡನೇ ಬಾರಿಗೆ ಬಹುಮತದ ಗಡಿಯನ್ನು ದಾಟುವ ಮೂಲಕ ದಾಖಲೆ ನಿರ್ಮಿಸುವತ್ತ ಸಾಗಿದೆ. ಒಟ್ಟು 126 ಸ್ಥಾನಗಳ ಪೈಕಿ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತಕ್ಕೆ ಬೇಕಾದ 64ರ ಗಡಿಯನ್ನು ದಾಟಿದೆ. ಇದು ಕಳೆದ ಬಾರಿಗಿಂತ 17 ಸ್ಥಾನಗಳ ಹೆಚ್ಚಳವಾಗಿದೆ. ಕಾಂಗ್ರೆಸ್ ಮೈತ್ರಿಕೂಟ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಳೆದ ಬಾರಿಗಿಂತ 4 ಸ್ಥಾನಗಳ ಹಿನ್ನಡೆ ಅನುಭವಿಸಿದೆ. AIUDF 2 ಹಾಗೂ ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಇನ್ನೂ 36 ಕ್ಷೇತ್ರಗಳ ಟ್ರೆಂಡ್ ನಿರೀಕ್ಷಿಸಲಾಗುತ್ತಿದೆ.

ಬಂಗಾಳದಲ್ಲಿ ಬಿಜೆಪಿ ಈ ಬಾರಿ ಬಲಿಷ್ಠವಾಗಿ ಹೊರಹೊಮ್ಮಿದ್ದು, ಅಧಿಕಾರ ಬದಲಾವಣೆಯ ಮುನ್ಸೂಚನೆ ನೀಡಿದೆ. ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತಕ್ಕೆ ಈ ಆರಂಭಿಕ ಟ್ರೆಂಡ್ ದೊಡ್ಡ ಸವಾಲೊಡ್ಡಿದೆ. ಅಸ್ಸಾಂನಲ್ಲಿ ಅಭಿವೃದ್ಧಿ ಮಂತ್ರ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರ ವರ್ಚಸ್ಸು ಬಿಜೆಪಿಗೆ ವರದಾನವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‌ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಬೇಕು; ಈಶ್ವರನಲ್ಲಿ ಹರಕೆ ಹೊತ್ತ ಒಳ್ಳೆ ಹುಡುಗ ಪ್ರಥಮ್
ಆರಂಭಿಕ ಟ್ರೆಂಡ್‌ನ ಮೀರಿಸಿ ಬಂಗಾಳದಲ್ಲಿ ಶತಕದ ಗಡಿ ಮುಟ್ಟಿದ ಬಿಜೆಪಿ, ಬೆನ್ನ ಹಿಂದೆಯೇ ಬಂದ ಟಿಎಂಸಿ