
ಡೆಹ್ರಾಡೂನ್/ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಬಿಜೆಪಿ ಭೂ ಕಬಳಿಕೆಯ ಗಂಭೀರ ಆರೋಪ ಮಾಡಿದೆ. ಉತ್ತರಾಖಂಡದಲ್ಲಿ 90 ವರ್ಷದ ವೃದ್ಧೆಯೊಬ್ಬರಿಗೆ ಸೇರಿದ 4 ಎಕರೆ ಬೆಲೆಬಾಳುವ ಜಮೀನನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ವಾದ್ರಾ ಕುಟುಂಬ ಯತ್ನಿಸುತ್ತಿದೆ ಎಂದು ಬಿಜೆಪಿ ದೂರಿದೆ.
ಬುಧವಾರ ಉತ್ತರಾಖಂಡ ಮತ್ತು ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ರಾಜಕೀಯ ಮಾಡುವುದು ಗಾಂಧಿ-ವಾದ್ರಾ ಕುಟುಂಬದ ನಿಜವಾದ ಉದ್ದೇಶವಲ್ಲ; ಜನರ ಭೂಮಿಯನ್ನು ಕಬಳಿಸುವುದೇ ಅವರ ಅಸಲಿ ವ್ಯವಹಾರವಾಗಿದೆ" ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ನೀಡಿರುವ ಮಾಹಿತಿ ಪ್ರಕಾರ, ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಎಂಬ ಪ್ರದೇಶದಲ್ಲಿರುವ 4 ಎಕರೆ ಜಮೀನಿನ ಮೇಲೆ ವಾದ್ರಾ ಕುಟುಂಬ ಕಣ್ಣಿಟ್ಟಿದೆ. ಈ ಜಮೀನಿನ ಮೂಲ ಗುತ್ತಿಗೆ ದಿವಂಗತ ಕುಲ್ಲುಮ್ ಖಾನ್ ಎಂಬುವವರ ಹೆಸರಿನಲ್ಲಿದೆ. ಪ್ರಸ್ತುತ ಈ ಆಸ್ತಿಯನ್ನು ಅವರ 90 ವರ್ಷದ ಸಹೋದರಿ ನಸೀನ್ ಖಾನ್ ಎಂಬ ವೃದ್ಧೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ರಾಬರ್ಟ್ ವಾದ್ರಾ ಅವರ ಸಹೋದರಿ ಸಾಯಿರಾ ವಾದ್ರಾ ಅವರು ಈ ಜಮೀನನ್ನು ಕಾನೂನುಬಾಹಿರವಾಗಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಾಯಿರಾ ವಾದ್ರಾ ಅವರು ಕಾನೂನು ಮಾರ್ಗಗಳ ಮೂಲಕ ಭೂಮಿಯನ್ನು ಪಡೆಯಲು ವಿಫಲವಾದ ಕಾರಣ, ಈಗ ರಾಜಕೀಯ ಪ್ರಭಾವ ಬಳಸಿ ದರ್ಪ ಮತ್ತು ಬೆದರಿಕೆಯ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಭಂಡಾರಿ ಆರೋಪಿಸಿದ್ದಾರೆ.
ಜುಲೈ 2ರಂದು ತಡರಾತ್ರಿ ಕಿಚ್ಚಾ ಕ್ಷೇತ್ರದ ಕಾಂಗ್ರೆಸ್ ಶಾಸಕ ತಿಲಕ್ ರಾಜ್ ಬೆಹಾರ್ ಅವರು ಸುಮಾರು 100 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ನಸೀನ್ ಖಾನ್ ಅವರ ಜಾಗಕ್ಕೆ ನುಗ್ಗಿದ್ದಾರೆ. ವೃದ್ಧೆ ನಸೀನ್ ಖಾನ್ ಅವರಿಗೆ ತಕ್ಷಣವೇ ಜಮೀನನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
"ಕಾಂಗ್ರೆಸ್ ಪಕ್ಷವು ಯಾವಾಗಲೂ ಮುಸ್ಲಿಮರು ಮತ್ತು ಬಡವರ ಪರವಾಗಿ ನಿಲ್ಲುತ್ತೇವೆ ಎಂದು ಬೂಟಾಟಿಕೆ ಪ್ರದರ್ಶಿಸುತ್ತದೆ. ಆದರೆ ಇಲ್ಲಿ 90 ವರ್ಷದ ಮುಸ್ಲಿಂ ವೃದ್ಧೆಯ ಆಸ್ತಿಯನ್ನೇ ಕಿತ್ತುಕೊಳ್ಳಲು ಸಂಚು ರೂಪಿಸಿದೆ. ಇದು ಖುದ್ದು ನಸೀನ್ ಖಾನ್ ಅವರೇ ನೀಡಿರುವ ಹೇಳಿಕೆಯಾಗಿದ್ದು, ಇದರ ಹಿಂದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇರ ಕೈವಾಡವಿದೆ" ಎಂದು ಪ್ರದೀಪ್ ಭಂಡಾರಿ ಪ್ರತಿಪಾದಿಸಿದ್ದಾರೆ.
ಈ ಇಡೀ ಭೂ ಕಬಳಿಕೆ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪಾತ್ರ ದೊಡ್ಡದಾಗಿದೆ ಎಂದು ಬಿಜೆಪಿ ಹೇಳಿದೆ. ಪ್ರಿಯಾಂಕಾ ಗಾಂಧಿ ಅವರೇ ಖುದ್ದಾಗಿ ಸ್ಥಳೀಯ ಕಾಂಗ್ರೆಸ್ ಶಾಸಕ ತಿಲಕ್ ರಾಜ್ ಅವರಿಗೆ ದೂರವಾಣಿ ಕರೆ ಮಾಡಿ, ಆ ವೃದ್ಧೆಯನ್ನು ಹೆದರಿಸಿ ಜಮೀನನ್ನು ವಾದ್ರಾ ಕುಟುಂಬದ ಹೆಸರಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ ಎಂದು ಸಂತ್ರಸ್ತೆ ನಸೀನ್ ಖಾನ್ ಆರೋಪಿಸಿರುವುದಾಗಿ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.
ಕಾನೂನು ಮಾರ್ಗದಲ್ಲಿ ಜಮೀನು ಸಿಗದಿದ್ದಾಗ ಗೂಂಡಾಗಿರಿ ಮತ್ತು ಬೆದರಿಕೆಯ ಮೂಲಕ ಬಡವರ ಆಸ್ತಿ ಲೂಟಿ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದೇಶದ ಜನತೆ ಕಾಂಗ್ರೆಸ್ನ ಈ ಅಸಲಿ ಸಂಸ್ಕೃತಿ ಮತ್ತು ನೀಚ ಬುದ್ಧಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಎಚ್ಚರಿಸಿದೆ. ಪ್ರಸ್ತುತ ಈ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ