
ರತ್ಲಮ್ (ಮಾರ್ಚ್ 7, 2023): ಬ್ರಹ್ಮಚಾರಿ ಹನುಮಂತನಿಗೂ ಬಿಕಿನಿದಾರಿ ಮಹಿಳೆಯರಿಗೂ ಎಲ್ಲಿಯ ನಂಟು! ಇಂಥದ್ದೊಂದು ಪ್ರಶ್ನೆ ಮಧ್ಯಪ್ರದೇಶದಲ್ಲಿ ಕೇಳಿಬಂದಿದೆ. ಇಲ್ಲಿನ ರತ್ಲಾಂನಲ್ಲಿ ಮಹಿಳಾ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸಹಜವಾಗಿಯೇ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ತೊಡುವ ವಸ್ತ್ರ ತೊಟ್ಟು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮ ಸ್ಥಳದಲ್ಲಿ ಹನುಮಂತನ ಫೋಟೋ ಇಟ್ಟಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಒಂದೆಡೆ ಹನುಮಾನ್ ಚಾಲೀಸಾ ಹೇಳುವಂತೆ ಆಂದೋಲನ ನಡೆಸುವ ಬಿಜೆಪಿ ಪಕ್ಷ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಟೀಕಿಸಿದೆ.
ಹೌದು, ಮಧ್ಯಪ್ರದೇಶದ (Madhya Pradesh) ರತ್ಲಾಮ್ನಲ್ಲಿ (Ratlam) ನಡೆದ ದೇಹದಾರ್ಢ್ಯ ಚಾಂಪಿಯನ್ಶಿಪ್ನಲ್ಲಿ (Body Building Championship) ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ವಿಗ್ರಹದ (Lord Hanuman Idol) ಮುಂದೆ ಬಿಕಿನಿಯಲ್ಲಿ (Bikini) ದೇಹದಾರ್ಢ್ಯ ಪ್ರದರ್ಶನ ನೀಡಿದ ನಂತರ ಡ್ರೆಸ್ ಕೋಡ್ ಬಗ್ಗೆ ವಿವಾದ ಭುಗಿಲೆದ್ದಿದೆ. ಈ ಕಾರ್ಯಕ್ರಮವು ಹಿಂದೂಗಳ (Hindus) ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಅವರ ದೇವರಿಗೆ ಅವಮಾನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಆಯೋಜಕರಿಂದ ಕ್ಷಮೆಯಾಚಿಸುವಂತೆ ಕೋರಿದೆ.
ಇದನ್ನು ಓದಿ: From the India Gate: ಕಾಂಗ್ರೆಸ್ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್ ಕಳಿಸಿದ ಸರ್ಕಾರ..!
ಈ ಮಧ್ಯೆ, ಹಿಂದೂ ದೇವರನ್ನು ಅವಮಾನಿಸುತ್ತಿದೆ ಎಂದು ಸಮಾಜವಾದಿ ಪಕ್ಷ ಸಹ ಮಧ್ಯ ಪ್ರದೇಶದ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್ನ ಮೇಯರ್ ಬಿಜೆಪಿಯ ಪ್ರಹ್ಲಾದ್ ಪಟೇಲ್ ಆಯೋಜಿಸಿದ್ದರು. ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಸಹ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಸ್ಪರ್ಧೆ ವಿವಾದದ ಕೇಂದ್ರ ಬಿಂದುವಾಗಿದೆ. 3 ದಿನಗಳ ಕಾಲ ನಡೆದ ಈ ಕಾರ್ಯಕ್ರಮಕ್ಕೆ `ಮುಖ್ಯಮಂತ್ರಿ ದೇಹದಾರ್ಢ್ಯ ಸ್ಪರ್ಧೆ’ ಎಂದು ಹೆಸರಿಡಲಾಗಿತ್ತು.
ಈ ಘಟನೆಯು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದ್ದು, ನಂತರ ಅವರು ಸ್ಥಳದ "ಶುದ್ಧೀಕರಣ" ಮಾಡಲು 'ಗಂಗಾಜಲ' ಎರಚಿದ್ದಾರೆ ಮತ್ತು 'ಹನುಮಾನ್ ಚಾಲೀಸಾ' ಪಠಿಸಿದರು. ಹಾಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಇದು ಹನುಮಂತ ದೇವರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಎಚ್ಎಎಲ್ ವಿಮಾನದ ಮೇಲಿಂದ ನಾಪತ್ತೆ ಆಗಿದ್ದ ಹನುಮನ ಚಿತ್ರ ಕೊನೆಯ ದಿನ ಪ್ರತ್ಯಕ್ಷ
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಹನುಮಾನ್ ಚಾಲೀಸಾ ಪಠಿಸಿದರು. ಕೆಲ ಸ್ಥಳೀಯ ಬಿಜೆಪಿ ಮುಖಂಡರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಂತ್ರ ಪಠಿಸಿದರು. ಆದರೂ, ಮಹಿಳಾ ಸ್ಪರ್ಧಿಗಳು ತಮ್ಮ ಡ್ರೆಸ್ ಕೋಡ್ನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಿದರು ಎಂದು ಸಂಘಟನಾ ಸಮಿತಿಯು ಸಮರ್ಥಿಸಿಕೊಂಡಿದೆ.
ಬಿಜೆಪಿ ತನ್ನನ್ನು ರಾಮಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ, ಮತ್ತೊಂದೆಡೆ ಅದರ ನಾಯಕರು ಹನುಮಂತನನ್ನು ಅವಮಾನಿಸುತ್ತಿದ್ದಾರೆ, ಹಿಂದೂ ದೇವತೆಯನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಮಧ್ಯ ಪ್ರದೇಶದ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆ.ಕೆ.ಮಿಶ್ರಾ ಅವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ತಿರುಗೆಟು ನೀಡಿದ ಬಿಜೆಪಿ ವಕ್ತಾರ ಹಿತೇಜ್ ಬಾಜ್ಪೇಯಿ, ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜುಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಾಂಗ್ರೆಸ್ಸಿಗರು ನೋಡುವುದಿಲ್ಲ. ಏಕೆಂದರೆ ಅವರೊಳಗಿನ ದೆವ್ವವು ಇದನ್ನು ನೋಡಿ ಎಚ್ಚರಗೊಳ್ಳುತ್ತದೆ. ಅವರು ಆಟದ ಮೈದಾನದಲ್ಲಿ ಮಹಿಳೆಯರನ್ನು ಕೊಳಕು ಕಣ್ಣುಗಳಿಂದ ನೋಡುತ್ತಾರೆ, ಅವರಿಗೆ ನಾಚಿಕೆಯಾಗುವುದಿಲ್ಲವೇ’’ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ