ಪೊಲೀಸ್ ಅಧಿಕಾರಿಯ 80 ಕೋಟಿ ಬೇನಾಮಿ ಆಸ್ತಿಗೆ ಮನೆಗೆಲಸದವಳೇ ಬಾಸ್: ರೀಲ್ಸ್ ನೋಡಿ ಬೆಚ್ಚಿಬಿದ್ದ ತನಿಖಾ ತಂಡ!

Published : Apr 10, 2026, 04:38 PM IST
Bihar Police

ಸಾರಾಂಶ

ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡಿರುವ ಕಿಶನ್‌ಗಂಜ್ ಎಸ್‌ಡಿಪಿಒ ಗೌತಮ್ ಕುಮಾರ್ ಅವರ ಮನೆಯ ಕೆಲಸದಾಕೆ ಪಾರೋ, ಅವರ ಬೇನಾಮಿ ಆಸ್ತಿಯನ್ನು ನಿರ್ವಹಿಸುತ್ತಿದ್ದಳು. ಸೋಷಿಯಲ್ ಮೀಡಿಯಾ ರೀಲ್ಸ್‌ನಿಂದ ಆಕೆಯ ಅದ್ದೂರಿ ಜೀವನ ಬಯಲಾಗಿದೆ.

ಬಿಹಾರ (ಏ.10): ಬಿಹಾರದ ಕಿಶನ್‌ಗಂಜ್‌ನ ಎಸ್‌ಡಿಪಿಒ (ಸಬ್ ಡಿವಿಜನಲ್ ಪೊಲೀಸ್ ಆಫೀಸರ್) ಗೌತಮ್ ಕುಮಾರ್ ಎಂಬ ಭ್ರಷ್ಟ ಅಧಿಕಾರಿಯ ಕಥೆ ಈಗ ಸಿನಿಮಾದ ಟ್ವಿಸ್ಟ್‌ಗಳನ್ನೂ ಮೀರಿಸುವಂತಿದೆ. ಕೋಟಿ ಕೋಟಿ ಭ್ರಷ್ಟಾಚಾರದ ಆರೋಪದ ಮೇಲೆ ಇವರು ಅಮಾನತುಗೊಂಡ ಬೆನ್ನಲ್ಲೇ, ಇವರ ಮನೆಯ ಕೆಲಸದಾಕೆ ಪಾರೋ ಎಂಬಾಕೆಯ ಸುತ್ತ ಈ ಪ್ರಕರಣದ ರಹಸ್ಯಗಳು ಗಿರಕಿ ಹೊಡೆಯುತ್ತಿವೆ.

ಪ್ರಕರಣದ ಆರಂಭದಲ್ಲಿ ತನಿಖಾ ತಂಡಕ್ಕೆ ಪಾರೋ ಎಂಬಾಕೆಯ ಮೇಲೆ ಕಿಂಚಿತ್ತೂ ಅನುಮಾನವಿರಲಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಈಕೆಯ ವೈರಲ್ ರೀಲ್ಸ್‌ಗಳು ತನಿಖೆಯ ದಿಕ್ಕನ್ನೇ ಬುಡಮೇಲು ಮಾಡಿದವು. ಕೆಲಸದವಳಾಗಿದ್ದ ಪಾರೋ ಅದ್ದೂರಿ ಜೀವನ ನಡೆಸುತ್ತಿರುವುದು ಪೊಲೀಸರಿಗೆ ಕಂಡುಬಂತು. ಆಕೆ ದುಬಾರಿ ಥಾರ್ ಎಸ್‌ಯುವಿ, ರಾಯಲ್ ಎನ್‌ಫೀಲ್ಡ್ ಬೈಕ್ ಚಲಾಯಿಸುವುದು ಮಾತ್ರವಲ್ಲದೆ, ಕಂತೆ ಕಂತೆ ನೋಟುಗಳಿಗೆ ಮುತ್ತು ಕೊಡುತ್ತಾ ಗಾಳಿಯಲ್ಲಿ ಹಣ ಹಾರಿಸುತ್ತಿರುವ ದೃಶ್ಯಗಳು ರೀಲ್ಸ್‌ನಲ್ಲಿ ಪತ್ತೆಯಾಗಿದ್ದವು. ಹೆಚ್ಚಿನ ತನಿಖೆ ನಡೆಸಿದಾಗ, ಈಕೆ ಕೇವಲ ಕೆಲಸದವಳಲ್ಲ, ಬದಲಾಗಿ ಗೌತಮ್ ಕುಮಾರ್ ಅವರ ಹಣಕಾಸಿನ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದ 'ಬಿನಾಮಿ' ಎಂಬ ಸತ್ಯ ಬಯಲಾಗಿದೆ.

ಕೋಟಿ ಕೋಟಿ ಆಸ್ತಿ ಎಲ್ಲಿ ಹೋಯ್ತು?

ಗೌತಮ್ ಕುಮಾರ್ ವಿರುದ್ಧ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಪಾರೋ ಮತ್ತು ಆಕೆಯ ಕುಟುಂಬ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯೊಂದಿಗೆ ನಾಪತ್ತೆಯಾಗಿದ್ದಾರೆ. ಪ್ರಕರಣ ಆರಂಭವಾಗಿ ಹಲವು ತಿಂಗಳ ನಂತರವೇ ಪಾರೋಳ ಅಸಲಿ ಮುಖ ಮತ್ತು ಆಕೆ ತಲೆಮರೆಸಿಕೊಂಡಿರುವ ವಿಷಯ ಪೊಲೀಸರಿಗೆ ತಿಳಿದುಬಂದಿದೆ. ಈಗ ಭಾರಿ ಸಂಪತ್ತಿನೊಂದಿಗೆ ಆಕೆ ಎಲ್ಲಿ ಮಾಯವಾದಳು ಎಂಬುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪೊಲೀಸ್ ಅಧಿಕಾರಿಯ 'ರಾಜಕೀಯ' ಕನಸು!

ತಿಂಗಳುಗಟ್ಟಲೆ ನಡೆದ ತನಿಖೆಯ ನಂತರ ಏಪ್ರಿಲ್‌ನಲ್ಲಿ ಗೌತಮ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿ ಈಗ ಅಮಾನತುಗೊಂಡಿದ್ದಾರೆ. ತನಿಖೆಯಲ್ಲಿ ಇವರ ಹೆಸರಿನಲ್ಲಿ ಪಾಟ್ನಾ, ಕಿಶನ್‌ಗಂಜ್ ಮತ್ತು ಪೂರ್ಣಿಯಾದಲ್ಲಿ ಅಂದಾಜು 80 ಕೋಟಿ ರೂಪಾಯಿಗೂ ಅಧಿಕ ಬೇನಾಮಿ ಆಸ್ತಿ ಇರುವುದು ಪತ್ತೆಯಾಗಿದೆ. ಈ ಬೃಹತ್ ಹಣವನ್ನು ಇವರು ಏಕೆ ಸಂಗ್ರಹಿಸಿದ್ದರು ಎಂಬ ಬಗ್ಗೆಯೂ ಸ್ಫೋಟಕ ಮಾಹಿತಿ ಸಿಕ್ಕಿದೆ. ಗೌತಮ್‌ ಕುಮಾರ್‌ ತಮ್ಮ ಗರ್ಲ್‌ಫ್ರೆಂಡ್‌ಅನ್ನು ಚುನಾವಣೆಗೆ ಸ್ಪರ್ಧಿಸಲು ಸಿದ್ದ ಮಾಡುತ್ತಿದ್ದರು. ಕಿಶನ್‌ಗಂಜ್ ವಿಧಾನಸಭಾ ಕ್ಷೇತ್ರವನ್ನು ಹಣದ ಬಲದಿಂದ ಖರೀದಿಸಿ ಆಕೆಯನ್ನು ಎಂಎಲ್‌ಎ ಮಾಡುವ ಗುರಿ ಇವರದ್ದಾಗಿತ್ತು. 2030ರಲ್ಲಿ ತಮ್ಮ ನಿವೃತ್ತಿಯ ನಂತರ ತಾವೂ ಕೂಡ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲು ಗೌತಮ್ ಕುಮಾರ್ ಯೋಜನೆ ಹಾಕಿಕೊಂಡಿದ್ದರು. ಒಟ್ಟಾರೆಯಾಗಿ, ಭ್ರಷ್ಟಾಚಾರದ ಹಣದಿಂದ ರಾಜಕೀಯ ಸಾಮ್ರಾಜ್ಯ ಕಟ್ಟಲು ಹೊರಟಿದ್ದ ಅಧಿಕಾರಿಗೆ ಈಗ ಕೆಲಸದವಳೇ ದೊಡ್ಡ ಪೆಟ್ಟು ಕೊಟ್ಟಿದ್ದಾಳೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಾಫಿಕ್ ಚಲನ್ ನೀಡಿದ ಸುಳಿವು: ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು
Women's Reservation Bill: ಮಹಿಳಾ ಮೀಸಲಾತಿ ಬಗ್ಗೆ ಮೋದಿ ಸರ್ಕಾರದ್ದು ಯು-ಟರ್ನ್, ಬೂಟಾಟಿಕೆ: ಜೈರಾಮ್ ರಮೇಶ್ ವಾಗ್ದಾಳಿ