
ನವದೆಹಲಿ(ಮೇ.21): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಬಳಿಕ ನೇರವಾಗಿ ದೆಹಲಿಗೆ ತೆರಳಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಹಾಗೂ ದೆಹಲಿ ಸರ್ಕಾರದ ತಿಕ್ಕಾಟದ ಕುರಿತು ಮಹತ್ವದ ಮಾತುಕತೆ ನಡೆಸಲಾಗಿದೆ. ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಮೈತ್ರಿಯಾಗಿ ಹೋರಾಡಿ ಬಿಜೆಪಿ ದೂರವಿಡಲು ಪ್ಲಾನ್ ರೆಡಿ ಮಾಡಿದ್ದಾರೆ.
ಎಲ್ಲಾ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯನ್ನು ದೂರವಿಡಬೇಕು. ಹಿಮಾಚಲ ಪ್ರದೇಶದ ಬಳಿಕ ಕರ್ನಾಟಕದಲ್ಲಿ ಬಿಜೆಪಿ ಸದ್ದಡಗಿದೆ.ಇನ್ನುಳಿದ ರಾಜ್ಯಗಳಲ್ಲಿ ನಮ್ಮ ಸರ್ಕಾರ ರಚನೆಯಾಗಬೇಕು. 2024ರ ವೇಳೆಗೆ ಕೇಂದ್ರಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಅಗತ್ಯ ಅನ್ನೋ ಮಾತುಗಳನ್ನು ಉಭಯ ನಾಯಕರು ಆಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಬಾಬಾ ಬಾಗೇಶ್ವರ್ ಹಿಂದೂ ರಾಷ್ಟ್ರ ಹೇಳಿಕೆಗೆ ಬಿಹಾರ ಸಿಎಂ ಗರಂ!
ಸೋಮವಾರ(ಮೇ.22) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾಗುತ್ತಿದ್ದೇನೆ. ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ಹಾಗೂ ಮೋದಿ ವಿರುದ್ಧ ಹೋರಾಡಿದರೆ ಗೆಲುವು ಸುಲಭ. ಈಗಾಗಲೇ ಹಲವು ಪಕ್ಷಗಳ ಅಧ್ಯಕ್ಷರನ್ನು ಭೇಟಿಯಾಗಿದ್ದೇನೆ. ಇನ್ನು ಪ್ರಮುಖ ಪಕ್ಷಗಳ ನಾಯಕರ ಭೇಟಿ ಮಾಡಿ ಮೈತ್ರಿ ಕುರಿತ ಮಾತುತೆ ಜವಾಬ್ದಾರಿಯನ್ನು ನಿತೀಶ್ ಕುಮಾರ್ ನಿರ್ವಹಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಅಧಿಕಾರ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಇದೀಗ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ತಿಕ್ಕಾಟ ಹೆಚ್ಚಿಸಿದೆ. ಈ ಸುಗ್ರೀವಾಜ್ಞೆ ಅನ್ವಯ, ದೆಹಲಿಯಲ್ಲಿನ ಐಎಎಸ್, ಐಪಿಎಸ್ನ ಹಿರಿಯ ಅಧಿಕಾರಿಗಳ ವರ್ಗ, ನಿಯೋಜನೆಯನ್ನು ನಿರ್ವಹಿಸಲು ‘ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ’ವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ದೆಹಲಿಯ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೆಹಲಿ ಸರ್ಕಾರದ ಗೃಹ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ. ಇವರು ಯಾವುದೇ ‘ಎ’ ಸ್ತರದ ಅಧಿಕಾರಿಯ ನಿಯೋಜನೆ ಮತ್ತು ವರ್ಗದ ಕುರಿತು ಮತ ಚಲಾವಣೆ ಮಾಡಲಿದ್ದಾರೆ. ಬಹುಮತದ ಅನ್ವಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಗ್ರೀವಾಜ್ಞೆ ಹೇಳಲಾಗಿದೆ.
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಆಪ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಇದೀಗ ಈ ಸುಗ್ರೀವಾಜ್ಞೆ ವಿರುದ್ಧ ಆಪ್ ಸರ್ಕಾರದ ನಡೆಸುತ್ತಿರುವ ಹೋರಾಟಕ್ಕೂ ನಿತೀಶ್ ಕುಮಾರ್ ಬೆಂಬಲ ಸೂಚಿಸಿದ್ದಾರೆ. ದೆಹಲಿ ಆಡಳಿತದ ಕುರಿತು ಕೇಂದ್ರ ಸರ್ಕಾರ ಶುಕ್ರವಾರ ಜಾರಿ ತಂದಿರುವ ಸುಗ್ರೀವಾಜ್ಞೆ ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ವಿರುದ್ಧವಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಚ್ ಮೊರೆ ಹೋಗುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ