
ಮದುವೆ ಮಂಟಪದಲ್ಲೇ ವಧುವಿಗೆ ಯುವಕನೋರ್ವ ಗುಂಡಿಕ್ಕಿದ ಘಟನೆ ಬಿಹಾರದ ಬಕ್ಸರ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. 18 ವರ್ಷದ ಆರತಿ ಗುಂಡಿನ ದಾಳಿಗೆ ತುತ್ತಾದ ವಧು, ಕೂಡಲೇ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡು ಆಕೆಯ ಹೊಟ್ಟೆಗೆ ತಗುಲಿದ್ದು, ತಕ್ಷಣ ಆಕೆಯನ್ನು ಸ್ಥಳೀಯ ಸದರ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದರು. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ವಧು ಆರತಿ ತನ್ನ ಭಾವಿ ಪತಿ ಪಕ್ಕದಲೇ ಕುಳಿತು ವಿವಾಹದ ಸಂಪ್ರದಾಯಗಳಲ್ಲಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ವಿವಾಹದ ಕಾರ್ಯಕ್ರಮಗಳು ನಡೆಯುತ್ತಿದ್ದವು ಇದೇ ವೇಳೆ ವೇದಿಕೆಯಲ್ಲಿ ಜನರ ಮಧ್ಯೆ ಇದ್ದ ಯುವಕನೋರ್ವ ಆಕೆಗೆ ಗುಂಡಿಕ್ಕಿದ್ದು, ಗುಂಡು ಆಕೆಯ ಹೊಟ್ಟೆ ಸೀಳಿದೆ. ಹೀಗೆ ಆರತಿ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ ಯುವಕನನ್ನು ನೆರೆ ಮನೆಯ ದೀನಬಂಧು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳು ಗಂಡು ಮಕ್ಕಳೆಂದು ತಾರತಮ್ಯ ಮಾಡುತ್ತಿದ್ದ ತಂದೆಯನ್ನು ಕತ್ತು ಸೀಳಿ ಕೊಂದ ಸೋದರಿಯರು
ವೇದಿಕೆಯಲ್ಲಿ ಕುಳಿತಿದ್ದ ವಧು ವರರಿಗೆ ಆರತಿಯ ಸಹೋದರಿಯೊಬ್ಬರು ಮದುವೆಯ ವಿವಿಧ ಆಚರಣೆಗಳನ್ನು ಮಾಡುತ್ತಿದ್ದರು. ಆಕೆಯ ವರನ ಹಣೆಗೆ ಸಿಂಧೂರವಿಟ್ಟು ಇನ್ನೇನು ವಧುವಿನ ಬಳಿಯೂ ಅದೇ ರೀತಿಯ ಆಚರಣೆ ಮಾಡುವುದಕ್ಕೆ ಮುಂದಾದಾಗ ವೇದಿಕೆಯ ಮುಂದೆ ಅತಿಥಿಗಳ ಮಧ್ಯೆ ಇದ್ದ ಯುವಕ ಆರತಿ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಅಲ್ಲಿದ್ದ ಅನೇಕರು ಭಯದಿಂದ ಓಡಿ ಹೋಗಿದ್ದಾರೆ.
ಘಟನೆಯ ಹಿಂದೆ ಪ್ರೇಮ ಪ್ರಕರಣ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಘಟನೆಯ ಬಳಿಕ ಆರೋಪಿ ದೀನಬಂಧು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯು ಈ ಹಿಂದೆ ಅಕ್ರಮ ಮದ್ಯದ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಹೆಚ್ಚುವರಿ ಸ್ಟೇಷನ್ ಹೌಸ್ ಅಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ. ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಬಳಿಕ ವರನ ಕಡೆಯವರು ವಧುವಿಲ್ಲದೇ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಈ ಮದುವೆಗಾಗಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ವರನ ಕಡೆಯವರು ಬಂದಿದ್ದರು ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಹಾಸನ: ಮಕ್ಕಳಿಂದ ಸಿಗದ ಪ್ರೀತಿ: ವೃದ್ಧಾಶ್ರಮದಿಂದ ಬಂದು ಸಾವಿಗೆ ಶರಣಾದ ದಂಪತಿ
ಕೆಲ ಸೋಶಿಯಲ್ ಮೀಡಿಯಾ ವರದಿಗಳ ಪ್ರಕಾರ, ವಧು ಆರತಿ ದೀನಬಂಧುವಿನ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದಳು,. ಇದರಿಂದ ಸಿಟ್ಟಿಗೆದ್ದ ಆತ ಈ ಕೃತ್ಯವೆಸಗಿದ್ದಾನೆ. ಆಕೆ ನನ್ನ ಪ್ರೇಮವನ್ನು ತಿರಸ್ಕರಿಸಿದ್ದಳು, ಈಗ ಆಕೆ ನನ್ನ ದ್ವೇಷವನ್ನು ನೋಡಬೇಕು ಎಂದು ಹೇಳಿ ಆತ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ