
ಪಂಜಾಬ್/ದೆಹಲಿ: ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ತಡೆಯೊಡ್ಡಿದೆ. ಈ ಹಿಂದೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಯುಕೆ ಹಾಗೂ ಇಸ್ರೇಲ್ ಪ್ರವಾಸಕ್ಕೂ ಅನುಮತಿ ನಿರಾಕರಿಸಲಾಗಿತ್ತು. ಈಗ ಮತ್ತೊಮ್ಮೆ ಅವರ ವಿದೇಶ ಪ್ರವಾಸವನ್ನು ಕೇಂದ್ರ ತಡೆ ಹಿಡಿದಿದೆ. ಇದರಿಂದಾಗಿ ಮುಖ್ಯಮಂತ್ರಿ ಮಾನ್ ಅವರು ವಿದೇಶ ಭೇಟಿಗೆ ರಾಜಕೀಯ ಅನುಮತಿ ಪಡೆಯುವಲ್ಲಿ ವಿಫಲರಾಗುತ್ತಿರುವುದು ಇದು ಮೂರನೇ ಬಾರಿ. ಜನವರಿಯಲ್ಲಿ, ಯುಕೆ ಮತ್ತು ಇಸ್ರೇಲ್ ಭೇಟಿಗೂ ಅವರಿಗೆ ರಾಜಕೀಯ ಅನುಮತಿ ನಿರಾಕರಿಸಲಾಗಿತ್ತು. ಈಗ ಮತ್ತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜೆಕ್ ಗಣರಾಜ್ಯ ಮತ್ತು ನೆದರ್ಲ್ಯಾಂಡ್ಸ್ ಭೇಟಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಅವರ ನಿಗದಿತ ಭೇಟಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅನುಮತಿ ನಿರಾಕರಿಸುತ್ತಿರುವುದು ಇದು ಮೂರನೇ ಬಾರಿ:
ಯುನೈಟೆಡ್ ಕಿಂಗ್ಡಮ್ ಮತ್ತು ಇಸ್ರೇಲ್ಗೆ ಪ್ರಸ್ತಾವಿತ ಅಧಿಕೃತ ಭೇಟಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೇಂದ್ರ ವಿದೇಶಾಂಗ ಸಚಿವಾಲಯ (MEA) ರಾಜಕೀಯ ಅನುಮತಿ ನಿರಾಕರಿಸಿತ್ತು. ಅದಕ್ಕೂ ಮೊದಲು, ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ಫ್ರಾನ್ಸ್ಗೆ ಭೇಟಿ ನೀಡುವ ಅವರ ವಿನಂತಿಯನ್ನು ನಿರಾಕರಿಸಲಾಗಿತ್ತು. ಯಾವುದೇ ಸರಿಯಾದ ಕಾರಣ ನೀಡದೇ ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ರಾಜಕೀಯ ಅನುಮತಿಯನ್ನು ಪದೇ ಪದೇ ನಿರಾಕರಿಸುತ್ತಿರುವುದು ಕೇಂದ್ರ ಮತ್ತು ರಾಜ್ಯ ಸಂಬಂಧಗಳ ನಡುವಿನ ಬಿರುಕನ್ನು ಮತ್ತೊಮ್ಮೆ ಗಮನಕ್ಕೆ ತಂದಿದೆ.
ಇದನ್ನೂ ಓದಿ: ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ: ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ
ಪಂಜಾಬ್ ಸಿಎಂ ಮಾನ್ ಅವರಿಗೆ ವಿದೇಶ ಪ್ರವಾಸಕ್ಕೆ ಮತ್ತೆ ಮತ್ತೆ ಅನುಮತಿ ನಿರಾಕರಿಸಿರುವುದಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರವು ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಎಎಪಿ ಆರೋಪಿಸಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹಲವು ಬಾರಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರವು ಹೀಗೆ ಪಂಜಾಬ್ ಸಿಎಂ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸುತ್ತಿರುವುದರಿಂದ ಹೂಡಿಕೆ, ಶಿಕ್ಷಣ ಮತ್ತು ವಲಸೆ ಬಂದವರ ಸಂಪರ್ಕದಂತಹ ವಿಷಯಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪಂಜಾಬ್ಗೆ ಅಡ್ಡಿಯಾಗಿದೆ ಎಂದು ಎಎಪಿ ಪಕ್ಷದ ನಾಯಕರು ದೂರಿದ್ದಾರೆ.
ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ರಿಯಲ್ ಆಯ್ತು: ರೀಲ್ಸ್ಗಾಗಿ ಹಾಕಿದ ನೇಣು ನಿಜವಾಗಿಯೂ ಕತ್ತು ಬಿಗಿದು ಸಾವು : 4 ವರ್ಷದ ಮಗು ತಬ್ಬಲಿ
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆಗೆ ಮುಂಚಿತವಾಗಿ ಪಂಜಾಬ್ ಮುಖ್ಯಮಂತ್ರಿಯವರು ರಾಜ್ಯಕ್ಕೆ ಹೂಡಿಕೆ ಪಡೆಯಲು ಎರಡು ಯುರೋಪಿಯನ್ ರಾಷ್ಟ್ರಗಳಿಗೆ ನಿಯೋಗದ ನೇತೃತ್ವ ವಹಿಸಬೇಕಿತ್ತು. ಆದರೆ ಈಗ ಕೇಂದ್ರ ವಿದೇಶ ಪ್ರವೇಶಕ್ಕೆ ತಡೆಯೊಡ್ಡಿರುವುದರಿಂದ ಪಂಜಾಬ್ ಸಿಎಂಗೆ ಈ ನಿಯೋಗ ನೇತೃತ್ವ ವಹಿಸಲು ಸಾಧ್ಯವಾಗುತ್ತಿಲ್ಲ. ಸ್ಥಾಪಿತ ಶಿಷ್ಟಾಚಾರದ ಅಡಿಯಲ್ಲಿ, ಮುಖ್ಯಮಂತ್ರಿಗಳು ಯಾವುದೇ ಅಧಿಕೃತ ವಿದೇಶ ಪ್ರಯಾಣಕ್ಕೆ ವಿದೇಶಾಂಗ ಸಚಿವಾಲಯದಿಂದ ರಾಜಕೀಯ ಅನುಮತಿ ಪಡೆಯಬೇಕಾಗುತ್ತದೆ. ವಿದೇಶಾಂಗ ಸಚಿವಾಲಯವು ಅನುಮತಿ ನೀಡಲು ಅಥವಾ ತಡೆಹಿಡಿಯಲು ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೂ, ಈ ವಿಷಯವು ರಾಜಕೀಯವಾಗಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ