Silicon City Bengaluru ಅಮೆರಿಕದ ಸಿಲಿಕಾನ್‌ ವ್ಯಾಲಿ ಜತೆ ಕರ್ನಾಟಕ ಸ್ಪರ್ಧೆ, ಸಿಎಂ!

By Suvarna NewsFirst Published May 11, 2022, 1:04 AM IST
Highlights
  • ರಾಜ್ಯದಲ್ಲಿ ಬಂಡವಾಳ ಹೂಡಲು ವಿವಿಧ ದೇಶಗಳಿಗೆ ಆಹ್ವಾನ
  • ಬಂದು ನೋಡಿ,ಆಮೇಲೆ ಹೂಡಿಕೆ  ಮಾಡಿ ಎಂದ ಸಿಎಂ
  • ದೆಹಲಿ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆಗಿನ ಸಭೆ

ನವದೆಹಲಿ(ಮೇ.11): ‘ಕರ್ನಾಟಕ ಜಾಗತಿಕ ಸ್ಪರ್ಧೆ ಒಡ್ಡುತ್ತಿದ್ದು, ನಮ್ಮ ಸ್ಪರ್ಧೆ ಅಮೆರಿಕದ ಸಿಲಿಕಾನ್‌ ವ್ಯಾಲಿ ಜೊತೆ’ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮಲ್ಲಿ ಬಂಡವಾಳ ಹೂಡಿ ಉದ್ಯಮದ ಅವಕಾಶವನ್ನು ಬಳಸಿಕೊಳ್ಳಿ ಎಂದು ವಿವಿಧ ದೇಶಗಳ ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ‘ಇನ್ವೆಸ್ಟ್‌ ಕರ್ನಾಟಕ​ 2022’ ಉದ್ಯಮಿಗಳ ಸಮಾವೇಶಕ್ಕೆ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ಮಂಗಳವಾರ ವಿವಿಧ ದೇಶಗಳ ರಾಯಭಾರಿಗಳು, ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕೈಗಾರಿಕಾಕರಣ, ಕೈಗಾರಿಕೆಗಳಿಗೆ ಇರುವ ಮೂಲ ಸೌಕರ್ಯಗಳು, ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ನಮ್ಮ ಸ್ಪರ್ಧೆ ಅಮೆರಿಕದ ಸಿಲಿಕಾನ್‌ ವ್ಯಾಲಿ ಜೊತೆ. ನಮ್ಮಲ್ಲಿ 400 ಆರ್‌ ಆ್ಯಂಡ್‌ ಡಿ(ಸಂಶೋಧನೆ ಮತ್ತು ಅಭಿವೃದ್ಧಿ) ಸಂಸ್ಥೆಗಳಿವೆ. ಅದರಲ್ಲೂ 180 ಖ್ಯಾತ ಕಂಪನಿಗಳ ಆರ್‌ ಆ್ಯಂಡ್‌ ಡಿ ಸಂಸ್ಥೆಗಳಿದ್ದು, ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ ಎಂದು ವಿವರಿಸಿದರು.

Silicon City: ಬೆಂಗಳೂರನ್ನು ನಂ.1 ಸಿಲಿಕಾನ್‌ ಸಿಟಿ ಮಾಡಲು ಮೂಲ ಸೌಕರ್ಯ: ಸಿಎಂ

ಆಪತ್ತುಗಳನ್ನೇ ಸವಾಲಿನ ಅವಕಾಶಗಳನ್ನಾಗಿಸಿಕೊಳ್ಳುವ ದೇಶ ನಮ್ಮದು. ಇದರ ನಾಯಕ ನಮ್ಮ ಪ್ರಧಾನಿ ಮೋದಿ. ಇದಕ್ಕೆ ಕೊರೋನಾ ಲಸಿಕೆ ಅಭಿಯಾನವೇ ಉದಾಹರಣೆ. ನಾವು ಲಸಿಕೆಯನ್ನು ಕಂಡು ಹಿಡಿಯುತ್ತೇವೆ ಎಂದು ಹೇಳಿದ್ದೆವು. ಅದನ್ನು ಮಾಡಿದೆವು ಸಹ. ಈಗ ನೀವು ನಮ್ಮ ರಾಜ್ಯಕ್ಕೆ ಬಂದು ನೋಡಿ. ಅಮೇಲೆ ಅವಕಾಶಗಳನ್ನು ಬಳಸಿಕೊಳ್ಳಿ. ನಮ್ಮಲ್ಲಿ ಲ್ಯಾಂಡ್‌ಬ್ಯಾಂಕ್‌ ಇದೆ. ಕರ್ನಾಟಕ ಕೈಗಾರಿಕೆ ಸ್ನೇಹಿ ರಾಜ್ಯ. ಅತಿಥಿ ದೇವೋಭವ ಕರ್ನಾಟಕದ ಸಂಸ್ಕೃತಿ. ನಮ್ಮಲ್ಲಿ ಹೇರಳವಾದ ನೈಸರ್ಗಿಕ ಸಂಪನ್ಮೂಲವಿದ್ದು ವೈಜ್ಞಾನಿಕವಾಗಿಯೂ ಮುಂದುವರೆದಿದೆ. ಹೊಸ ಆವಿಷ್ಕಾರಗಳಿಗೆ ರಾಜ್ಯ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ. ಏಷ್ಯಾದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಬಹಳ ಮುಂದುವರೆದಿದೆ. ಬೆಂಗಳೂರು ಅಮೆರಿಕದ ಜತೆ ಸ್ಪರ್ಧೆ ಮಾಡುತ್ತಿದೆ. ಬನ್ನಿ, ನಮ್ಮಲ್ಲಿ ಹೂಡಿಕೆ ಮಾಡಿ. ಉದ್ಯಮದ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತವಾದ ರಾಜ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಒಂದು ಅಭಿವೃದ್ಧಿ ಪರ ರಾಜ್ಯ. ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿದೆ. ಕರ್ನಾಟಕದಲ್ಲಿ 13 ವಿಮಾನ ನಿಲ್ದಾಣಗಳು ಸಿದ್ಧವಾಗಲಿವೆ. ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಚೆನ್ನಾಗಿದೆ. ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿ ಹೆಚ್ಚಿವೆ ಎಂದರು. ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಇದ್ದರು.

Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!

ನಮ್ಮದು ಕೈಗಾರಿಕಾಸ್ನೇಹಿ ರಾಜ್ಯ. ಅತಿಥಿ ದೇವೋಭವ ನಮ್ಮ ಸಂಸ್ಕೃತಿ, ನಮ್ಮಲ್ಲಿ ಲ್ಯಾಂಡ್‌ ಬ್ಯಾಂಕ್‌ ಇದೆ. ಹೇರಳ ನೈಸರ್ಗಿಕ ಸಂಪನ್ಮೂಲವಿದೆ. ವೈಜ್ಞಾನಿಕವಾಗಿಯೂ ಮುಂದುವರಿದಿದ್ದೇವೆ. ರಾಜ್ಯಕ್ಕೆ ಬಂದು ನೋಡಿ. ಆಮೇಲೆ ಉದ್ಯಮದ ಅವಕಾಶಗಳನ್ನು ಬಳಸಿಕೊಳ್ಳಿ.
- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಹೂಡಿಕೆಗೆ ಸೂಕ್ತ ತಾಣವಾಗಿ ಕರ್ನಾಟಕ ಹೊರಹೊಮ್ಮಿದೆ. ಇದೇ ಕಾರಣಕ್ಕೆ ಬೆಂಗಳೂರು ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈ ಮೂಲಕ ವಿಶ್ವದಲ್ಲೇ ಗುರುತಿಸಿಕೊಂಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
 

click me!