ಗುಡ್ ನ್ಯೂಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯ ಕರ್ನಾಟಕ ಮಾರ್ಗ ಪ್ರಯಾಣಕ್ಕೆ ಮುಕ್ತ!

Published : Dec 10, 2024, 03:23 PM IST
ಗುಡ್ ನ್ಯೂಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯ ಕರ್ನಾಟಕ ಮಾರ್ಗ ಪ್ರಯಾಣಕ್ಕೆ ಮುಕ್ತ!

ಸಾರಾಂಶ

ರಸ್ತೆಯ ಎರಡೂ ಬದಿ ಸುಂದರ ದೃಶ್ಯ ಕಾವ್ಯ, ಅತ್ಯುತ್ತಮ ಅಡೆ ತಡೆಯಿಲ್ಲದ ರಸ್ತೆಯಲ್ಲಿ ಲಾಂಗ್ ಡ್ರೈವ್ ಹೋಗಲು ಬಯಸಿದ್ದೀರಾ? ಕರ್ನಾಟಕ ಜನತೆಗೆ NHAI ಗುಡ್ ನ್ಯೂಸ್ ನೀಡಿದೆ. ಕರ್ನಾಟಕದ 71 ಕಿ.ಮಿ ರಸ್ತೆ ಪ್ರಯಾಣಕ್ಕೆ ಮುಕ್ತವಾಗಿದೆ.

ಬೆಂಗಳೂರು(ಡಿ.10) ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಾಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ನೀಡಿದೆ. 260 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಪೈಕಿ ಕರ್ನಾಟಕದ 71 ಕಿಲೋಮೀಟರ್ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇಷ್ಟೇ ಅಲ್ಲ ಈ 71 ಕಿ.ಮೀ ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾಗಿದೆ. ಕಾಮಗಾರಿ ಸಂಪೂರ್ಣವಾಗದ ಕಾರಣ 71 ಕಿ.ಮೀ ರಸ್ತೆ ನಡುವೆ ಯಾವುದೇ ಟೋಲ್ ಕೂಡ ಇಲ್ಲ. ಹೀಗಾಗಿ ಇದೀಗ ಬೆಂಗಳೂರಿನಿಂದ ಬಹುತೇಕರು ಲಾಂಗ್‌ಡ್ರೈವ್ ಪ್ರಯಾಣಕ್ಕೆ ಈ ಮಾರ್ಗ ಬಳಸುತ್ತಿದ್ದಾರೆ. 

ಮಾರ್ಗದ ಮೂಲಕ ಚೆನ್ನೈ ಹಾಗೂ ಈ ರಸ್ತೆ ಹಾದು ಹೋಗುವ ಜಿಲ್ಲೆ ಹಾಗೂ ಪಟ್ಟಣಗಳಿಗೆ ತೆರಳುವವರು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. 71 ಕಿ.ಮೀ ಪ್ರಯಾಣಕ್ಕೆ ಕೇವಲ 30 ರಿಂದ 40 ನಿಮಿಷಗಳು ಸಾಕು ಎಂದು ಕೆಲ ಪ್ರಯಾಣಿಕರು ಹೇಳುತ್ತಿದ್ದಾರೆ. 71 ಕಿಲೋಮೀಟರ್ ಕರ್ನಾಟಕ ಮಾರ್ಗದ ಕೊನೆಯಲ್ಲಿ ಮಾಲೂರು, ಬಂಗಾರಪೇಟೆ, ಬೆಥಮಂಗಲ ಕಡೆಗೆ ಎಕ್ಸಿಟ್ ನೀಡಲಾಗಿದೆ. ಹೀಗಾಗಿ ಹಲವರು ಇದೀಗ ಈ ರಸ್ತೆಯನ್ನು ಬಳಕೆ ಮಾಡುತ್ತಿದ್ದರೆ. ಪ್ರಮುಖವಾಗಿ ಟೋಲ್ ಕೂಡ ಇಲ್ಲದ ಕಾರಣ ವೀಕೆಂಡ್‌ಗಳಲ್ಲಿ ಲಾಂಗ್ ಡ್ರೈವ್‌ಗಾಗಿ ಬೆಂಗಳೂರಿಗರು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ರಸ್ತೆ ಹಲವು ಹಳ್ಳಿಗಳು, ಗದ್ದೆ, ಸುಂದರ ತೋಟಗಳ ನಡುವಿನಿಂದ ಹಾದು ಹೋಗುತ್ತಿದೆ. 

6 ತಿಂಗಳಲ್ಲಿ 14 ಲೇನ್‌ ಬೆಂಗ್ಳೂರು-ಮುಂಬೈ ರಸ್ತೆ ಕೆಲಸ ಶುರು: ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ 260ಕಿಲೋಮೀಟರ್ ಉದ್ದದ ಯೋಜನೆಯಾಗಿದೆ.ಬರೋಬ್ಬರಿ 17,000 ಕೋಟಿ ರೂಪಾಯಿ ಯೋಜನೆ ಇದಾಗಿದೆ. ಇಷ್ಟೇ ಅಲ್ಲ ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ 7 ಗಂಟೆ ಪ್ರಯಾಣ ಮಾಡಬೇಕು. ಆದರೆ ಹೊಸ ಎಕ್ಸ್‌ಪ್ರೆಸ್‌ವೇನಲ್ಲಿ ಕೇವಲ 3 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಲು ಸಾಧ್ಯವಿದೆ. 

ನಾಲ್ಕು ಲೇನ್ ಹೆದ್ದಾರಿ ಕರ್ನಾಟಕ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಮೂರು ರಾಜ್ಯಗಳನ್ನು ಸಂಪರ್ಕಿಸುತ್ತಿದೆ. ಮೊದಲ ಹಂತದಲ್ಲಿ ಕರ್ನಾಟಕದ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. 2024ರ ಅಗಸ್ಟ್ ತಿಂಗಳಲ್ಲಿ ಈ ಕಾಮಾಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಜಮೀನು ವಶಪಡಿಸಿಕೊಳ್ಳುವಿಕೆ ಸೇರಿದಂತೆ ಕಾನೂನು ತೊಡಕಿನಿಂದ ವಿಳಂಭವಾಗಿದೆ. ಜನವರಿ 2025ರ ವೇಳೆಗೆ ಹೊಸ ಹೆದ್ದಾರಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. 

ಕರ್ನಾಟಕದ ಹೆದ್ದಾರಿಯನ್ನು ಮೂರು ಹಂತಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತದಲ್ಲಿ ಹೊಸಕೋಟೆಯಿಂದ ಮಾಲೂರು ವರೆಗಿನ 27.1 ಕಿಲೋಮೀಟರ್ ಎರಡನೇ ಹಂತದಲ್ಲಿ ಮಾಲೂರಿನಿಂದ ಬಂಗಾರಪೇಟಿ ವರೆಗಿನ 27.1 ಕಿಲೋಮೀಟರ್ ಹಾಗೂ ಮೂರನೇ ಹಂತದಲ್ಲಿ ಬಂಗಾರಪೇಟೆಯಿಂದ ಬೆಥಮಂಗಲ ವರೆಗಿನ 17.5 ಕಿಮಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
 
ಇತ್ತೀಚೆಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹೆದ್ದಾರಿ ಕುರಿತು ಅಪ್‌ಡೇಟ್ ನೀಡಿದ್ದಾರೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಚೆನ್ನೈ ಹೆದ್ದಾರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಘೋಷಿಸಿದ್ದಾರೆ. ಮೂರು ರಾಜ್ಯಗಳ ಆರ್ಥಿಕ ಕಾರಿಡಾರ್ ಆಗಿ  ಹೊಸ ರಸ್ತೆ ಹೊರಹೊಮ್ಮಲಿದೆ. ಇಷ್ಟೇ ಅಲ್ಲ ಪ್ರಯಾಣದ ಸಮಯ ಕಡಿತಗೊಳಿಸಲಿದೆ. ಸರಕು ಸಾಗಾಣೆ, ವ್ಯವಹಾರ, ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಎಕ್ಸ್‌ಪ್ರೆಸ್‌ವೇ ನೆರವು ನೀಡಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಹೆದ್ದಾರಿಗಳ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಎಕ್ಸ್‌ಪ್ರೆಸ್‌ವೇ ಅಂತಿಮ ಹಂತದಲ್ಲಿರುವ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಸ್ಲೇರಿ 'ಮಿನರಲ್ ವಾಟರ್' ಅಲ್ಲವೇ ಅಲ್ಲ! ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್-ಮಿನರಲ್ ವಾಟರ್ ನಡುವಿನ ವ್ಯತ್ಯಾಸವೇನು?
ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?