
ನವದೆಹಲಿ (ಜೂ.6): ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ತನ್ನ ಆದಾಯವನ್ನು ರೂ 40 ಕೋಟಿಗಳಷ್ಟು ಕಡಿಮೆ ವರದಿ ಮಾಡಿರುವುದನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ಗೆ (ಸಿಬಿಡಿಟಿ) ಕಳುಹಿಸಿರುವ ಇಮೇಲ್ನಲ್ಲಿ ಒಪ್ಪಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದರೊಂದಿಗೆ ಬಿಬಿಸಿ ಇಂಡಿಯಾ ಕಚೇರಿ ಮೇಲೆ ಮಾಡಿದ್ದ ದಾಳಿಯನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಮುಖಭಂಗವಾದಂತಾಗಿದೆ. ಬಿಬಿಸಿ ಇಂಡಿಯಾದ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದಾಗ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದವು. ಈಗ ಬಿಬಿಸಿ ಇಂಡಿಯಾ ಸ್ವತಃ ತೆರಿಗೆ ವಂಚನೆ ಮಾಡಿರುವುದನ್ನು ಒಪ್ಪಿಕೊಂಡಿರುವ ಕಾರಣ, ಸರ್ಕಾರಕ್ಕೆ ಬಲ ಬಂದಂತಾಗಿದೆ. ಬಿಬಿಸಿ ಇಂಡಿಯಾ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದಾಗ ವಿರೋಧ ಪಕ್ಷದ ಹಲವು ನಾಯಕರುಗಳು ಇದನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಘೋರ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಅದರೊಂದಿಗೆ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಹಾಲಿ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದರು. ಈ ಗಲಭೆಯಲ್ಲಿ ಅವರ ಪಾತ್ರದ ಕುರಿತು ಬಿಬಿಸಿ ಎರಡು ಹಂತದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಬಿಸಿ ಇಂಡಿಯಾ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದೆ ಎಂದು ಆರೋಪಿಸಲಾಗಿತ್ತು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಪ್ರಕಟವಾಗಿದ್ದು, ಬಿಬಿಸಿ ಇಂಡಿಯಾ ಉದ್ದೇಶಪೂರ್ವಕವಾಗಿ ಐಟಿ ಇಲಾಖೆಯ ಕ್ರಮಗಳನ್ನು ಪ್ರತೀಕಾರದ ಭಾಗವಾಗಿ ಬಿಂಬಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದೆ.
ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಬಿಬಿಸಿ ಪರಿಷ್ಕೃತ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ ಅಥವಾ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಬಿಬಿಸಿ ಇಂಡಿಯಾ ಬಾಕಿಗಳನ್ನು ಚುಕ್ತಾ ಮಾಡಬೇಕು ಅದರೊಂದಿಗೆ ದಂಡವನ್ನು ಪಾವತಿಸಬೇಕಾಗುತ್ತದೆ, ಅದು ಹಲವಾರು ಕೋಟಿ ರೂಪಾಯಿ ಕೂಡ ಆಗಬಹುದು ಎನ್ನಲಾಗಿದೆ.
2023 ರ ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಇಂಡಿಯಾ ಕಚೇರಿಗಳನ್ನು ಶೋಧಿಸಿದ್ದರು. ಬಿಬಿಸಿ 2002 ರ ಗುಜರಾತ್ ಗಲಭೆಗಳು ಮತ್ತು ಭಾರತದ ಕುರಿತು ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ವಾರಗಳ ನಂತರ ಈ ಶೋಧ ಕಾರ್ಯ ನಡೆದಿತ್ತು. ಆದಾಯ ತೆರಿಗೆ ಅಧಿಕಾರಿಗಳು ಆಗ ತೋರಿಸಿರುವ ಲಾಭ ಮತ್ತು ಆದಾಯವು 'ದೇಶದಲ್ಲಿನ ಕಾರ್ಯಾಚರಣೆಗಳ ಪ್ರಮಾಣಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದ್ದರು.
'1984ರಲ್ಲೂ ಗಲಭೆಯಾಗಿತ್ತು ಈ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಬಂದಿಲ್ಲ..?' ಜೈಶಂಕರ್ ಪ್ರಶ್ನೆ
ಇದರ ಬೆನ್ನಲ್ಲಿಯೇ, ಕಾಂಗ್ರೆಸ್ ಪಕ್ಷ ಬಿಬಿಸಿ ಕಚೇರಿಗಳಲ್ಲಿ ನಡೆದ ಶೋಧಗಳನ್ನು ಟೀಕಿಸಿತ್ತು ಮತ್ತು ನರೇಂದ್ರ ಮೋದಿ ಸರ್ಕಾರದ 'ಅಧಿಕಾರ ಮತ್ತು ಸರ್ವಾಧಿಕಾರ'ದ ಸಂಕೇತ ಎಂದು ಬಣ್ಣಿಸಿತ್ತು. ಸಮಾಜವಾದಿ ಪಕ್ಷ ಸೇರಿದಂತೆ ದೇಶದ ಇತರ ವಿಪಕ್ಷಗಳು ಇದು 'ಸೈದ್ಧಾಂತಿಕ ತುರ್ತುಪರಿಸ್ಥಿತಿ' ಘೋಷಣೆ ಎಂದು ಬಣ್ಣಿಸಿದ್ದವು.
ವಿದೇಶಿ ವಿನಿಮಯ ಉಲ್ಲಂಘನೆ : ಇಡಿಯಿಂದ ಮತ್ತೆ ಬಿಬಿಸಿ ಅಧಿಕಾರಿಗಳ ವಿಚಾರಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ