
ನವದೆಹಲಿ (ಫೆ.21): ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇತ್ತೀಚೆಗೆ ಗುಜರಾತ್ ಗಲಭೆಯ ವಿಚಾರವಾಗಿ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತಾಗಿ ಎಎನ್ಐ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂದು ಬೇರೆ ಬೇರೆ ಮಾಧ್ಯಮಗಳನ್ನು ಬಳಸಿಕೊಂಡು ರಾಜಕಾರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 20 ವರ್ಷಗಳ ಹಿಂದೆ ನಡೆದುಹೋಗಿರುವ ಅದರ ಬಗ್ಗೆ ಈಗಾಗಲೇ ನಿರ್ಧಾರವಾಗಿರುವ ವಿಚಾರದಲ್ಲಿ ಸತ್ಯದ ಹುಡುಕಾಟ ಎನ್ನುವ ಹೆಸರಲ್ಲಿ ಯಾರದೋ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತೀದ್ದೀರಿ ಎಂದು ಅವರು ಹೇಳಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ದಿಢೀರ್ ಆಗಿ ಬಂದಿದ್ದು ಹೇಗೆ ಎನ್ನುವ ಬಗ್ಗೆ ನೀವು ಯೋಚನೆ ಮಾಡುತ್ತಿರಬಹುದು ಎಂದು ಹೇಳಿದ ಜೈಶಂಕರ್, ಭಾರತದಲ್ಲಿ ಅಥವಾ ದೆಹಲಿಯಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಆಗುತ್ತಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ, ನ್ಯೂಯಾರ್ಕ್ ಹಾಗೂ ಲಂಡನ್ನಲ್ಲಿ ಭಾರತದ ಚುನಾವಣೆಯ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದೆ. ಅನೇಕ ಬಾರಿ ಭಾರತದಲ್ಲಿ ನಡೆಯುವ ರಾಜಕಾರಣದ ಮೂಲ ಈ ನೆಲ ಆಗಿರೋದೇ ಇಲ್ಲ. ವಿದೇಶದ ಸಿದ್ಧಾಂತದ ರಾಜಕಾರಣವಾಗಿರುತ್ತದೆ. ಆ ರಾಜಕೀಯ ಹೋರಾಟದ ಆಲೋಚನೆಗಳು ಹಾಗೂ ಕಾರ್ಯಸೂಚಿಗಳು ಹೊರಗಿನಿಂದ ಬರುತ್ತದೆ ಎಂದು ಹೇಳಿದ್ದಾರೆ.
1984ರ ಗಲಭೆಯ ಬಗ್ಗೆ ಯಾಕೆ ಸಾಕ್ಷ್ಯಚಿತ್ರ ಬಂದಿಲ್ಲ: ಭಾರತದಲ್ಲಿ ಆಗಿರುವ ಗಲಭೆಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡ್ತೀರಿ ಎನ್ನುತ್ತೀರಿ. 1984ರಲ್ಲಿ ದೆಹಲಿಯಲ್ಲೂ ದೊಡ್ಡ ಗಲಭೆಯಾಗಿತ್ತು. ಆದರೆ, ಈ ವಿಷಯದ ಬಗ್ಗೆ ಎಂದೂ ಯಾವ ಸಾಕ್ಷ್ಯಚಿತ್ರಗಳೂ ಬಂದಿಲ್ಲ ಯಾಕೆ. ಇದು ಕೇವಲ ರಾಜಕಾರಣವಷ್ಟೇ. ರಾಜಕೀಯ ಕ್ಷೇತ್ರಕ್ಕೆ ಬರುವ ಶಕ್ತಿ ಇಲ್ಲದವರ ಪರವಾಗಿ ಮಾಡುತ್ತಿರುವ ರಾಜಕೀಯವಷ್ಟೆ. ತಮ್ಮನ್ನು ತಾವು ಈ ಸಂಸ್ಥೆಗಳು ಎನ್ಜಿಓ, ಮಾಧ್ಯಮ ಸಂಸ್ಥೆಗಳು ಎಂದು ಇತ್ಯಾದಿಯಾಗಿ ಹೇಳಿಕೊಳ್ಳುತ್ತದೆ. ಆದರೆ, ಇವರುಗಳು ನಿಜವಾಗಿ ಮಾಡುತ್ತಿರುವುದು ರಾಜಕಾರಣ ಎಂದು ಹೇಳಿದ್ದಾರೆ.
'ಎಲ್ಎಸಿಗೆ ಸೇನೆಯನ್ನು ಕಳಿಸಿದ್ದು ಮೋದಿ, ರಾಹುಲ್ ಗಾಂಧಿ ಅಲ್ವಲ್ಲ..' ಕಾಂಗ್ರೆಸ್ ನಾಯಕನಿಗೆ ಜೈಶಂಕರ್ ತಿರುಗೇಟು!
BBC ಇತ್ತೀಚೆಗೆ "ಇಂಡಿಯಾ: ದಿ ಮೋದಿ ಕ್ವಶ್ಚನ್" ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಸಾಕ್ಷ್ಯಚಿತ್ರವು 2002 ರಲ್ಲಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಗಲಭೆಗಳನ್ನು ಆಧರಿಸಿದ ಚಿತ್ರವಾಗಿತ್ತು. ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಸಾಕಷ್ಟು ಕೋಲಾಹಲ ಎದ್ದಿದ್ದರಿಂದ, ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿಷೇಧ ವಿಧಿಸಿತ್ತು. ಅದರ ಲಿಂಕ್ಗಳನ್ನು ಯೂಟ್ಯೂಬ್ ಮತ್ತು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರೂ. ನಂತರ ಸರ್ಕಾರವು ಈ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ತೆಗೆದುಹಾಕಲು ಟ್ವಿಟರ್ ಮತ್ತು ಯೂಟ್ಯೂಬ್ಗೆ ಕೇಳಿತ್ತು.
ಮೋದಿ ಆಡಳಿತವನ್ನು ಟೀಕಿಸಿದ ಅಮೆರಿಕದ ಉದ್ಯಮಿಗೆ ಮಾತಿನಲ್ಲೇ ಜಾಡಿಸಿದ ಜೈಶಂಕರ್!
ದೆಹಲಿಯ ಡಿಯು, ಜೆಎನ್ಯು, ಜಾಮಿಯಾ ಸೇರಿದಂತೆ ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಈ ಸಾಕ್ಷ್ಯಚಿತ್ರ (ಬಿಬಿಸಿ ಡಾಕ್ಯುಮೆಂಟರಿ) ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗದ್ದಲಗಳು ನಡೆದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ