ಬ್ಯಾಂಕ್‌ ಸಮಸ್ಯೆ: ತೇಜಸ್ವಿ ಭಾಷಣಕ್ಕೆ ನಿರ್ಮಲಾ ಮೆಚ್ಚುಗೆ!

By Suvarna NewsFirst Published Sep 17, 2020, 9:33 AM IST
Highlights

ಬ್ಯಾಂಕ್‌ ಸಮಸ್ಯೆ: ತೇಜಸ್ವಿ ಭಾಷಣಕ್ಕೆ ನಿರ್ಮಲಾ ಮೆಚ್ಚುಗೆ| ಗುರು ರಾಘವೇಂದ್ರ ಬ್ಯಾಂಕ್‌ ಹಗರಣ ಬಗ್ಗೆ ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ ಭಾಷಣ

ನವದೆಹಲಿ(ಸೆ.17): ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಕಾಯ್ದೆಯ ಅನುಕೂಲಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಅವರನ್ನು ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ ಪ್ರಶಂಸಿಸಿದ್ದಾರೆ.

ಲೋಕಸಭೆಯಲ್ಲಿ ಕಾಯ್ದೆಯ ಬಗ್ಗೆ ಬುಧವಾರ ಮಾತನಾಡಿದ ತೇಜಸ್ವಿ ಸೂರ್ಯ, ಸಹಕಾರ ಬ್ಯಾಂಕುಗಳಲ್ಲಿ 20 ಕೋಟಿ ಠೇವಣಿದಾರರನ್ನು ರಕ್ಷಿಸಲು ಸರ್ಕಾರ ಇಂದು ಬ್ಯಾಂಕಿಂಗ್‌ ನಿಯಂತ್ರಣ ತಿದ್ದುಪಡಿ ಕಾಯ್ದೆಯನ್ನು ಪಾಸು ಮಾಡಿದೆ. ವಾಣಿಜ್ಯಿಕ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಬ್ಯಾಂಕುಗಳು ಬಂಡವಾಳವನ್ನು ಸಂಗ್ರಹಿಸುವಲ್ಲಿ ಸಂಕಷ್ಟವನ್ನು ಎದುರಿಸುತ್ತಿವೆ. ಅದು ಗುರು ರಾಘವೇಂದ್ರ ಬ್ಯಾಂಕ್‌ ಆಗಿರಬಹುದು ಅಥವಾ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಆಗಿರಬಹುದು.

ಎಲ್ಲಾ ಸಹಕಾರಿ ಬ್ಯಾಂಕುಗಳು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿವೆ. ಸಹಕಾರ ಬ್ಯಾಂಕುಗಳ ಅತಿದೊಡ್ಡ ಸಮಸ್ಯೆಯೆಂದರೆ ಅವು ಆರ್‌ಬಿಐ ಮತ್ತು ಕೊ ಆಪರೇಟಿವ್‌ ಸೊಸೈಟಿಯ ನಿಯಂತ್ರಣದಲ್ಲಿ ಇದ್ದವು. ಕಾಯ್ದೆಯಿಂದ ಅವರು ನೇರವಾಗಿ ಆರ್‌ಬಿಐನ ನಿಯಂತ್ರಣಕ್ಕೆ ಬಂದಂತಾಗಿದೆ. ಒಂದು ವೇಳೆ ಸಹಕಾರ ಬ್ಯಾಂಕುಗಳ ನಿಯಂತ್ರಣಕ್ಕೆ ಆರ್‌ಬಿಐಗೆ ಅವಕಾಶ ಇದ್ದಿದ್ದರೆ ಗುರು ರಾಘವೇಂದ್ರ ಬ್ಯಾಂಕ್‌ಗೆ ಸಂಕಷ್ಟಎದುರಾಗುತ್ತಿರಲಿಲ್ಲ. ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ತೀರಿಸದೇ ಇದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇದೇ ವೇಳೆ : ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಕಾಯ್ದೆಯ ಬಗ್ಗೆ ತೇಜಸ್ವಿ ಸೂರ್ಯ ಅವರ ಭಾಷಣವನ್ನು ಶ್ಲಾಘಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬ್ಯಾಂಕಿಂಗ್‌ ಕ್ಷೇತ್ರದ ಸಮಸ್ಯೆಯ ಬಗ್ಗೆ ತೇಜಸ್ವಿ ಸೂರ್ಯ ಅವರು ಸಮರ್ಥವಾಗಿ ವಾದವನ್ನು ಮಂಡಿಸಿದ್ದಾರೆ. ಗುರು ರಾಘವೇಂದ್ರ ಬ್ಯಾಂಕಿನ ಸಂಕಷ್ಟದ ಬಗ್ಗೆ ಈ ಹಿಂದೆ ತೇಜಸ್ವಿ ಮನವಿ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.

click me!