
ನವದೆಹಲಿ/ಢಾಕಾ: ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಕೋರಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಯುದ್ಧ ವಿಮಾನ ಮತ್ತು ರೆಡಾರ್ ಕಣ್ಗಾವಲಿನಲ್ಲಿ ದೆಹಲಿಗೆ ಕರೆ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆಶ್ರಯ ನೀಡಲು ಭಾರತ ಅನುಮತಿ ನೀಡಿದ ಬೆನ್ನಲ್ಲೇ ಹಸೀನಾ ಸೇನಾ ವಿಮಾನದಲ್ಲಿ ಭಾರತದತ್ತ ಪ್ರಯಾಣ ಕೈಗೊಂಡಿದ್ದರು. ಈ ವೇಳೆ ಹಸೀನಾ ಅವರು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ರಕ್ಷಣೆ ಒದಗಿಸುವ ಸಲುವಾಗಿ ಪಶ್ಚಿಮ ಬಂಗಾಳದ ಹಾಸೀಮಾರಾ ವಾಯುನೆಲೆಯ ಎರಡು ರಫೇಲ್ ಯುದ್ಧವಿಮಾನಗಳು ಅದರ ಮೇಲೆ ನಿಗಾ ಇಟ್ಟು ಹಿಂಬಾಲಿಸಿದವು. ಈ ವೇಳೆ ಹಸೀನಾ ವಿಮಾನದ ಮೇಲೆ ರಡಾರ್ ಕಣ್ಗಾವಲನ್ನೂ ಇಡಲಾಗಿತ್ತು. ಜೊತೆಗೆ ವಾಯುಪಡೆ ಮುಖ್ಯಸ್ಥ ವಿ.ಆರ್ ಚೌಧರಿ ಮತ್ತು ಸೇನಾ ಪಡೆ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಇಡೀ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದಲ್ಲಿ ಮತೀಯವಾದಿಗಳ ಅಟ್ಟಹಾಸ: ಹಿಂದೂಗಳ ದೇಗುಲ ಮನೆ ಉದ್ದಿಮೆ ಧ್ವಂಸ
ಹಿಂಸೆಗೆ 110 ಸಾವು: ದೇಶವ್ಯಾಪಿ ಅವಾಮಿ ಲೀಗ್ ಪಕ್ಷದ ನಾಯಕರು, ಕಾರ್ಯಕರ್ತರ ಹತ್ಯೆ
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದ ಬೆನ್ನಲ್ಲೇ ಸೋಮವಾರ ದೇಶವ್ಯಾಪಿ ಭಾರೀ ಹಿಂಸಾಚಾರ ನಡೆದಿದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಸಂಸದರು, ನಾಯಕರು, ಕಾರ್ಯಕರ್ತರನ್ನು ಗುರಿಯಾಗಿಸಿ ಪ್ರತಿಪಕ್ಷಗಳ ಕಾರ್ಯಕರ್ತಕರ್ತರು, ಮತೀಯವಾದಿಗಳು ಭಾರೀ ಹಿಂಸಾಚಾರ ನಡೆಸಿದ್ದು, ಒಂದೇ ದಿನ 110ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಾಮಿ ಲೀಗ್ ಪಕ್ಷದ ಕಚೇರಿ, ನಾಯಕರು, ಕಾರ್ಯಕರ್ತರ ಮನೆಗಳಿಗೆ, ಅವರಿಗೆ ಸೇರಿದ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದೂ ಅಲ್ಲದೆ ಅವುಗಳನ್ನು ಲೂಟಿ ಮಾಡಲಾಗಿದೆ. ಜೊತೆಗೆ ಹಲವು ಕಾರ್ಯಕರ್ತರನ್ನು ಹತ್ಯೆ ಮಾಡಿ ಸೇತುವೆಗಳಿಗೆ, ಕಟ್ಟಡಗಳಿಗೆ ನೇತು ಹಾಕಿದ ಭೀಕರ ದೃಶ್ಯಗಳು ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸಾರಿಹೇಳಿವೆ.
ಅವಾಮಿ ಲೀಗ್ ಪಕ್ಷದ ನಾಯಕ ಶಾಹಿನ್ಗೆ ಸೇರಿದ ಜೆಸ್ಸೂರ್ನ ಹೋಟೆಲ್ ಒಂದಕ್ಕೆ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದು, ಕಟ್ಟಡವೊಂದರಲ್ಲೇ 24 ಜನರು ಸುಟ್ಟುಕರಕಾಗಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ. ದೇಶದಲ್ಲಿ ಇದೀಗ ಯಾವುದೇ ಸರ್ಕಾರ ಇಲ್ಲದೇ ಇರುವ ಕಾರಣ ಮತೀಯವಾದಿಗಳು, ದೇಶದ್ರೋಹಿ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಹಿಂಸಾಚಾರ, ಲೂಟಿ, ಅಪಹರಣ, ಅತ್ಯಾಚಾರದಂಥ ಹೇಯ ಕೃತ್ಯಗಳಲ್ಲಿ ತೊಡಗಿವೆ.
ಹಸೀನಾ ಮಾತ್ರವಲ್ಲ ಕಿಡಿಗೇಡಿಗಳು ಬಾಂಗ್ಲಾ ಯಶಸ್ವಿ ನಾಯಕ ಮುಶ್ರಫೆ ಮನೆಯನ್ನೂ ಬಿಡಲಿಲ್ಲ!
ಬಾಂಗ್ಲಾದೇಶ ಸ್ಥಾಪಕ ಮುಜೀಬುರ್ ಪುತ್ಥಳಿ ಮೇಲೆ ಮೂತ್ರ ವಿಸರ್ಜನೆ
ಢಾಕಾ: ಬಾಂಗ್ಲಾದೇಶದ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನಿ ಶೇಖ್ ಹಸೀನಾರ ತಂದೆ, ಮಾಜಿ ಪ್ರಧಾನಿ ಶೇಖ್ ಮುಜೀಬುರ್ ರೆಹಮಾನ್ ಅವರ ಪುತ್ಥಳಿಯ ಮೇಲೆ ಪ್ರತಿಭಟನಾಕಾರರು ಮೂತ್ರ ವಿಸರ್ಜನೆ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪ್ರತಿಭಟನಾಕಾರನೊಬ್ಬ ಮುಜೀಬುರ್ ಪುತ್ಥಳಿಯ ತಲೆಯ ಮೇಲೆ ಕುಳಿತು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನೋಡಬಹುದು. ಇನ್ನು ಹಲವು ಕಡೆ ಮುಜಿಬುರ್ ಅವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದಾರೆ.
ದೇಶ ತೊರೆಯುವ ಕೆಲ ಗಂಟೆಗೂ ಮೊದಲು ಶೇಕ್ ಹಸೀನಾ ನಿವಾಸದಲ್ಲಿ ಏನೆಲ್ಲಾ ನಡಿತು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ