ಚಾಲಕ ರಹಿತ ಮೆಟ್ರೋ ಸೇವೆಯಿಂದ ಕ್ರಾಂತಿಕಾರಕ ಬದಲಾವಣೆ ತರಲಿದೆ ಚೆನ್ನೈ ಮೆಟ್ರೋ!

By Kannadaprabha NewsFirst Published Mar 18, 2023, 12:06 PM IST
Highlights

ಬೆಂಗಳೂರು ಮೂಲದ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ ಚೆನ್ನೈ ಮೆಟ್ರೋಗೆ ಸ್ವಯಂಚಾಲಿತ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಒದಗಿಸಲು 200 ಮಿಲಿಯನ್ ಡಾಲರ್ ಮೊತ್ತದ ಹರಾಜನ್ನು ತನ್ನದಾಗಿಸಿದೆ.

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು, ಮಾರ್ಚ್ 16: ಬೆಂಗಳೂರು ಮೂಲದ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ ಚೆನ್ನೈ ಮೆಟ್ರೋಗೆ ಸ್ವಯಂಚಾಲಿತ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಒದಗಿಸಲು 200 ಮಿಲಿಯನ್ ಡಾಲರ್ ಮೊತ್ತದ ಹರಾಜನ್ನು ತನ್ನದಾಗಿಸಿದೆ. ಈ ಮೂಲಕ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹಿಟಾಚಿ ರೈಲ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನ ಮೆಟ್ರೋ ಸೇವೆಗಳು ಚಾಲಕ ರಹಿತವಾಗಿ ನಡೆಯುವಂತೆ ಮಾಡಲಿದೆ. ಇದರಿಂದ ಮೆಟ್ರೋ ವ್ಯವಸ್ಥೆ ಸುರಕ್ಷಿತವೂ, ನಿರ್ವಹಣಾ ವೆಚ್ಚದಲ್ಲಿ ಕಡಿತವೂ ಆಗಲಿದೆ.

ಭಾರತದ ನಾಲ್ಕನೇ ಅತಿ ದೀರ್ಘವಾದ ಮೆಟ್ರೋ ವ್ಯವಸ್ಥೆಯಾದ ಚೆನ್ನೈ ಮೆಟ್ರೋದಲ್ಲಿ (Chennai Metro) ಅತ್ಯಾಧುನಿಕ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ವ್ಯವಸ್ಥೆಯನ್ನು ಎರಡನೇ ಹಂತದ ಮೆಟ್ರೋ ರೈಲುಗಳಲ್ಲಿ ಅಳವಡಿಸಲಾಗುತ್ತದೆ. ಈ ವ್ಯವಸ್ಥೆ ಸ್ವಯಂಚಾಲಿತವಾಗಿ ರೈಲಿನ ಎಳೆತ ಮತ್ತು ಬ್ರೇಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸಿ, ಸತತವಾಗಿ ಗರಿಷ್ಠ ವೇಗವನ್ನು ಲೆಕ್ಕಾಚಾರ ಮಾಡುತ್ತದೆ. ಇದರಲ್ಲಿ ಅಳವಡಿಸಲಾಗುವ ವೀಡಿಯೋ ನಿರ್ವಹಣಾ ವ್ಯವಸ್ಥೆ ನಿಯಂತ್ರಣ ಕೇಂದ್ರಕ್ಕೆ ಎಲ್ಲ ರೈಲುಗಳ ಪ್ರತಿಕ್ಷಣದ ವೀಡಿಯೋವನ್ನು ಒದಗಿಸುತ್ತಾ, ಆ ಮೂಲಕ ಪ್ರಯಾಣಿಕರ ಡಿಸ್‌ಪ್ಲೇ ಬೋರ್ಡ್‌ಗಳನ್ನು (Display Board), ಪ್ಲಾಟ್‌ಫಾರಂ ಸ್ಕ್ರೀನ್ ಬಾಗಿಲುಗಳನ್ನು, ಹಾಗೂ ನಿಲ್ದಾಣದ ಘೋಷಣೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಇದರೊಡನೆ, ಬೇರೆ ಬೇರೆ ಉಪ ವ್ಯವಸ್ಥೆಗಳಾದ ಇಲೆಕ್ಟ್ರಿಕಲ್, ರೇಡಿಯೋ (Radio) ಮತ್ತು ಟನೆಲ್ ವಾತಾಯನ ಮಾಹಿತಿಗಳೂ ಪ್ರತಿ ಕ್ಷಣ ನಿರ್ವಹಣೆಗೊಳಪಡುತ್ತವೆ.

ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಈ ಆಧುನಿಕ ತಂತ್ರಜ್ಞಾನ ರೈಲುಗಳನ್ನು 90 ಸೆಕೆಂಡುಗಳ ಅಂತರದಲ್ಲಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಹೆಚ್ಚಿನ ಸಾಮರ್ಥ್ಯ, ನಂಬಿಕಾರ್ಹತೆಯನ್ನು ಮೆಟ್ರೋದ ಎರಡನೇ ಹಂತಕ್ಕೆ ಒದಗಿಸುತ್ತದೆ. ಚೆನ್ನೈ ಮೆಟ್ರೋದ ಎರಡನೇ ಹಂತ 118 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದ್ದು, ಅದರಲ್ಲಿ 42 ಕಿಲೋಮೀಟರ್‌ಗಳಷ್ಟು ನೆಲದಾಳದಲ್ಲಿ ಸಂಚರಿಸುವ ಮಾರ್ಗವನ್ನು ಹೊಂದಿದೆ. ಇದರಲ್ಲಿ ಎರಡು ಡಿಪೋಗಳು, 113 ನಿಲ್ದಾಣಗಳು, 138 ರೈಲುಗಳು, ಹಾಗೂ ಮೂರು ರೈಲು ನಿರ್ವಹಣಾ ವ್ಯವಸ್ಥೆಗಳು ಸೇರಿವೆ. ಮೆಟ್ರೋ ಎರಡನೇ ಹಂತ 2027ರ ಕೊನೆಯ ವೇಳೆಗೆ ಪೂರ್ಣಗೊಳ್ಳಲಿದೆ.

ಸಿಎಂಆರ್‌ಎಲ್ ನಿರ್ದೇಶಕ (ಸಿಸ್ಟಮ್ಸ್ ಆ್ಯಂಡ್ ಆಪರೇಶನ್ಸ್) ರಾಜೇಶ್ ಚತುರ್ವೇದಿ ಮತ್ತು ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಸಂಸ್ಥೆಯ ದೇಶೀಯ ಮುಖ್ಯಸ್ಥರು, ಪೂರ್ಣಾವಧಿ ನಿರ್ದೇಶಕರಾದ ಮನೋಜ್ ಕೃಷ್ಣಪ್ಪ ಕುಮಾರ್ ಅವರು 1,620 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಶನ್ ಏಜೆನ್ಸಿ (ಜೆಐಸಿಎ) ಹಣ ಹೂಡಿಕೆ ಮಾಡಲಿದೆ. ಈ ಹೂಡಿಕೆಯನ್ನು ವಿನ್ಯಾಸ, ಉತ್ಪಾದನೆ, ಪೂರೈಕೆ, ಅಳವಡಿಕೆ, ಪರೀಕ್ಷೆ ಮತ್ತು ರೈಲಿನ ನಿಯಂತ್ರಣ ಮತ್ತು ವೀಡಿಯೋ ನಿರ್ವಹಣಾ ವ್ಯವಸ್ಥೆಗಳ ಚಾಲನೆಗೆ ಬಳಸಲಾಗುತ್ತದೆ.

ಹಿಟಾಚಿ ರೈಲ್ ಸಂಸ್ಥೆಯ ಹೊಸ ತಲೆಮಾರಿನ ಚಲನಶೀಲ ಪರಿಹಾರಗಳು

ಭಾರತೀಯ ಮೆಟ್ರೋ ಜಾಲಕ್ಕೆ ಬೃಹತ್ ಜಿಗಿತ ಒದಗಿಸುವ ನಿಟ್ಟಿನಲ್ಲಿ ಹಿಟಾಚಿ ರೈಲ್ ಸಂಸ್ಥೆ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಸೇವೆ ಮತ್ತು ನಿರ್ವಹಣೆ, ಡಿಜಿಟಲ್ ತಂತ್ರಜ್ಞಾನ, ಹಾಗೂ ಟರ್ನ್ ಕೀ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಒದಗಿಸುತ್ತಿದೆ. ಜಾಗತಿಕವಾಗಿ ತನ್ನ ಛಾಪು ಮೂಡಿಸಿರುವ ಹಿಟಾಚಿ ರೈಲ್ ಸಂಸ್ಥೆ ಆರು ಖಂಡಗಳ 38 ರಾಷ್ಟ್ರಗಳಲ್ಲಿ ತನ್ನ ಉಪಸ್ಥಿತಿ ಹೊಂದಿದ್ದು, 14,000 ನೌಕರರನ್ನು ಹೊಂದಿದೆ. ಸಂಸ್ಥೆಯ ಗುರಿ ಎಂದರೆ ಅತ್ಯುತ್ತಮ ರೈಲು ಪ್ರಯಾಣ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸಮಾಜಕ್ಕೆ ಕಾಣಿಕೆ ನೀಡುವುದು.

ಕಾಕ್‌ಪಿಟ್‌ನಲ್ಲಿ ಸಮೋಸ, ಪಾನೀಯ ಸೇವನೆ: ಇಬ್ಬರು ಪೈಲಟ್‌ಗಳ ಮನೆಗೆ ಕಳುಹಿಸಿದ ಸ್ಪೈಸ್ ಜೆಟ್

ಜಗತ್ತಿನಲ್ಲಿ ಪ್ರಖ್ಯಾತವಾಗಿರುವ ತನ್ನ ಬುಲೆಟ್ ರೈಲುಗಳು (Bullet Rail), ಸಿಗ್ನಲ್ ವ್ಯವಸ್ಥೆಗಳು, ಟರ್ನ್ ಕೀ ಯೋಜನೆಗಳು, ಅತ್ಯಾಧುನಿಕ ಸಂಚಾರ ನಿಯಂತ್ರಣ ಮತ್ತು ಡಿಜಿಟಲ್ ಪರಿಹಾರಗಳ ಮೂಲಕ ಹಿಟಾಚಿ ರೈಲ್ ಸಂಸ್ಥೆ ಜಾಗತಿಕವಾಗಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಹಿಟಾಚಿ ಸಂಸ್ಥೆ ತನ್ನ ಪ್ರಮುಖ ತಂತ್ರಜ್ಞಾನಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳ ಮೂಲಕ ಉದ್ಯಮಕ್ಕೆ ನವೀನ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಒದಗಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ಹಾಗೂ ರೈಲ್ವೆ ವ್ಯವಸ್ಥೆಗಳ ಅಭಿವೃದ್ಧಿಗೆ ನೆರವಾಗುತ್ತದೆ.

ಪ್ರಯಾಣಿಕರಿಗೆ ಸುಗಮ ಪ್ರಯಾಣದ ವ್ಯವಸ್ಥೆ

"ಚೆನ್ನೈ ಮೆಟ್ರೋ ರೈಲು ಯೋಜನೆಗೆ ಜಾಗತಿಕ ಗುಣಮಟ್ಟದ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ. ಹಿಟಾಚಿ ರೈಲ್ ಸಂಸ್ಥೆ ಸಾಗಣಿಕೆ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಿದ್ದು, ಸಾರ್ವಜನಿಕ ಪ್ರಯಾಣದ ಪ್ರತಿಯೊಂದು ಹಂತವನ್ನೂ ಡಿಜಿಟಲೀಕರಣಗೊಳಿಸುವ, ಉತ್ತಮಪಡಿಸುವ ದೃಷ್ಟಿಕೋನವನ್ನು ಹೊಂದಿದೆ. ಈ ಅತ್ಯಾಧುನಿಕ ಮೆಟ್ರೋ ರೈಲು ತಂತ್ರಜ್ಞಾನವನ್ನು ಚೆನ್ನೈ ಮೆಟ್ರೋದ ಎರಡನೇ ಹಂತದಲ್ಲಿ ಅಳವಡಿಸುವ ಮೂಲಕ, ಮೆಟ್ರೋದ ಸಾಮರ್ಥ್ಯ ಮತ್ತು ಬೆಂಬಲ ವ್ಯವಸ್ಥೆಗೆ ಉತ್ತೇಜನ ದೊರೆತು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲಕರ ಪ್ರಯಾಣ ಸೌಕರ್ಯ ಲಭಿಸುತ್ತದೆ"

ನೊರಿಹಾರು ಆಮಿಯಾ, ಉಪ ಸಿಇಓ, ಹಿಟಾಚಿ ರೈಲ್ ಗ್ಲೋಬಲ್

ನಾಗರಿಕರ ಜೀವನ ಮಟ್ಟದಲ್ಲಿ ಏರಿಕೆ

"ಭಾರತ ಸರ್ಕಾರ ಭಾರತ ಮುಂದಿನ ಸಹಸ್ರಮಾನವನ್ನು ಅತ್ಯಂತ ಯಶಸ್ವಿಯಾಗಿ ಪ್ರವೇಶಿಸಲಿದೆ ಎಂದು ಘೋಷಿಸಿತ್ತು. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ಸ್ಥಾನಮಾನದಿಂದ, ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವತ್ತ ದಾಪುಗಾಲಿಟ್ಟಿದೆ. ಪ್ರಸ್ತುತ ನಮ್ಮ ಗುರಿಯೆಂದರೆ, ತಾಂತ್ರಿಕ ಅಭಿವೃದ್ಧಿಯ ಮೂಲಕ ಇನ್ನಷ್ಟು ನಾವೀನ್ಯತೆಗಳನ್ನು ಸಾಧಿಸುವುದು, ಪರಿಸರವನ್ನು ರಕ್ಷಿಸುವುದು ಮತ್ತು ಸಾರ್ವಜನಿಕರ ಜೀವನಮಟ್ಟವನ್ನು ಅಭಿವೃದ್ಧಿ ಪಡಿಸುವುದು. ಮುಂದಿನ ತಲೆಮಾರಿನ ಚಲನಶೀಲ ಪರಿಹಾರೋಪಾಯಗಳ ಮೂಲಕ ಸಂಸ್ಥೆ ನಮ್ಮ ಕಲ್ಪನೆಗಳನ್ನೂ ಮೀರಿ, ಈ ಗುರಿಯನ್ನು ಸಾಕಾರಗೊಳಿಸಲಿದೆ"

ಮನೋಜ್ ಕುಮಾರ್ ಕೆ,
ಪೂರ್ಣಾವಧಿ ನಿರ್ದೇಶಕರು ಮತ್ತು ಮುಖ್ಯಸ್ಥರು, ಹಿಟಾಚಿ ರೈಲ್ ಎಸ್‌ಟಿಎಸ್ - ಇಂಡಿಯಾ

 

click me!