
ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆರೆಯ ಚೀನಾವೂ ಭಾರತದ ವಿರುದ್ಧ ಆ ಎರಡು ದೇಶಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಗೊತ್ತಿದೆ. ಇದೇ ಕಾರಣಕ್ಕೆ ಭಾರತದ ಕೇವಲ ಒಂದು ರಾಜ್ಯದಷ್ಟು ದೊಡ್ಡ ಇರುವ ಬಾಂಗ್ಲಾದೇಶ ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಜೊತೆಗೆ ಅಲ್ಲಿನ ಮತೀಯವಾದಿಗಳು ಅಲ್ಲಿರುವ ಹಿಂದೂ ಸಮಾಜದ ಮನೆಗಳನ್ನು ಧ್ವಂಸ ಮಾಡಿ ಅನೇಕ ಯುವಕರನ್ನು ಹತ್ಯೆ ಮಾಡಿದ್ದು, ಅವರಿಗೆ ಬಾಂಗ್ಲಾದೇಶ ಪರೋಕ್ಷ ಬೆಂಬಲ ನೀಡುತ್ತಿದೆ. ಈ ನಡುವೆ ಪಾಕಿಸ್ತಾನದ ನೆಲದಿಂದ ಭಾರತವನ್ನು ಬೆಂಬಲಿಸಿ ಬಹಿರಂಗ ಪತ್ರವೊಂದು ಬಂದಿದೆ.
ಹೌದು ಪಾಕಿಸ್ತಾನದಲ್ಲಿರುವ ಬಲೂಚಿಸ್ತಾನದ ಪ್ರಮುಖ ನಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಮೀರ್ ಯಾರ್ ಬಲೂಚ್ ಅವರು ಭಾರತ ಹಾಗೂ ಭಾರತದ ವಿದೇಶಾಂಗ ಸಚಿವ ಡಾ ಜೈಶಂಕರ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ. ಈ ಪತ್ರದ ಮೂಲಕ ಅವರು ಚೀನಾ ಹಾಗೂ ಪಾಕಿಸ್ತಾನ ಮೈತ್ರಿ ಇನ್ನಷ್ಟು ವಿಸ್ತಾರವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿಯೂ ನಿಯೋಜಿಸಬಹುದು ಎಂದು ಅವರು ಹೇಳಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬರೆದ ಮುಕ್ತ ಪತ್ರದಲ್ಲಿಅವರು, ಬಲೂಚಿಸ್ತಾನ್ ಪಾಕಿಸ್ತಾನದ ನಿಯಂತ್ರಣದಲ್ಲಿ ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸಿದೆ ಇದರಲ್ಲಿ ರಾಜ್ಯ ಪ್ರಾಯೋಜಿತ ಹಿಂಸೆ, ಮಾನವ ಹಕ್ಕುಗಳ ಉಲ್ಲಂಘನೆಯೂ ಸೇರಿದೆ ಎಂದು ಅವರು ವಿವರಿಸಿದ್ದಾರೆ.
ಬಲೂಚಿಸ್ತಾನದ ರಾಷ್ಟ್ರೀಯತಾವಾದಿ ನಾಯಕರು 2025ರ ಮೇ ತಿಂಗಳಲ್ಲೇ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಿದ್ದಾಗಿ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದರು. ಈಗ ಬಲೂಚಿಸ್ತಾನದ ನಾಯಕನೆನಿಸಿರುವ ಮೀರ್ ಬಲೂಚ್ ಅವರು, ಬಲೂಚಿಸ್ತಾನ್ ಗಣರಾಜ್ಯವು 2026 ರ ಮೊದಲ ವಾರದಲ್ಲಿ 'ಬಲೂಚಿಸ್ತಾನ್ ಜಾಗತಿಕ ರಾಜತಾಂತ್ರಿಕ ವಾರ 2026ನ್ನು ಆಚರಿಸಲಿದೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಬಲೂಚಿಸ್ತಾನ್ ಪ್ರಪಂಚದಾದ್ಯಂತದ ದೇಶಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಮುಕ್ತ ಪತ್ರದಲ್ಲಿ ಭಾರತಕ್ಕೆ ಹೊಸವರ್ಷದ ಶುಭಾಶಯ ತಿಳಿಸಿರುವ ಮೀರ್ ಬಲೂಚ್, ಬಲೂಚಿಸ್ತಾನ್ ಗಣರಾಜ್ಯದ ಆರು ಕೋಟಿ ದೇಶಭಕ್ತ ನಾಗರಿಕರ ಪರವಾಗಿ, ಭಾರತದ ನೂರ ನಲವತ್ತು ಕೋಟಿ ಜನರಿಗೆ, ಸಂಸತ್ತಿನ ಎರಡೂ ಸದನಗಳಿಗೆ, ಮಾಧ್ಯಮಗಳಿಗೆ, ನಾಗರಿಕ ಸಮಾಜಕ್ಕೆ ಮತ್ತು ಎಲ್ಲಾ ಗೌರವಾನ್ವಿತ ವ್ಯಕ್ತಿಗಳಿಗೆ 2026 ರ ಹೊಸ ವರ್ಷಕ್ಕೆ ನಮ್ಮ ಆಳವಾದ ಮತ್ತು ಅತ್ಯಂತ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಶುಭ ಸಂದರ್ಭವು ಶತಮಾನಗಳಿಂದ ಭಾರತ ಮತ್ತು ಬಲೂಚಿಸ್ತಾನ್ ಅನ್ನು ಜೊತೆಗೆ ಬಂಧಿಸಿರುವ ಆಳವಾದ ಐತಿಹಾಸಿಕ, ಸಾಂಸ್ಕೃತಿಕ, ವಾಣಿಜ್ಯ, ಆರ್ಥಿಕ, ರಾಜತಾಂತ್ರಿಕ, ರಕ್ಷಣಾ ಮತ್ತು ಬಹುಮುಖಿ ಸಂಬಂಧಗಳನ್ನು ಪ್ರತಿಬಿಂಬಿಸಲು ಮತ್ತು ಆಚರಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಬರೆದಿದ್ದಾರೆ. ಈ ಶಾಶ್ವತ ಸಂಬಂಧಗಳು ನಮ್ಮ ಹಂಚಿಕೊಂಡ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪರ್ಕಗಳ ಕಾಲಾತೀತ ಸಂಕೇತವಾಗಿ ನಿಂತಿರುವ ಹಿಂಗ್ಲಾಜ್ ಮಾತಾ ದೇವಾಲಯ (ನಾನಿ ಮಂದಿರ) ದಂತಹ ಪವಿತ್ರ ತಾಣಗಳಿಂದ ನಿರೂಪಿಸಲ್ಪಟ್ಟಿವೆ ಎಂದು ಮಿರ್ ಬಲೋಚ್ ಬರೆದಿದ್ದಾರೆ.
ಶಾಂತಿ, ಸಮೃದ್ಧಿ, ಅಭಿವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಭವಿಷ್ಯದ ಇಂಧನ ಸವಾಲುಗಳು ಮತ್ತು ಗುಪ್ತ ಬೆದರಿಕೆಗಳನ್ನು ತಗ್ಗಿಸುವಂತಹ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಹಿತಾಸಕ್ತಿಗಳನ್ನು ಬೆಳೆಸುವಲ್ಲಿ ಭಾರತ ಮತ್ತು ಅದರ ಸರ್ಕಾರಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತನಾಗಿ ತಾನು ಅಚಲ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.
ಬಲೂಚಿಸ್ತಾನದ ಜನರು ಕಳೆದ ಎಪ್ಪತ್ತೊಂಬತ್ತು ವರ್ಷಗಳಿಂದ ಪಾಕಿಸ್ತಾನದ ಆಕ್ರಮಣ, ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳ ದೌರ್ಜನ್ಯಗಳನ್ನು ಸಹಿಸಿಕೊಂಡಿದ್ದಾರೆ. ಈ ಕೊಳೆಯುತ್ತಿರುವ ಪಿಡುಗನ್ನು ಅದರ ಬೇರುಗಳಿಂದಲೇ ನಿರ್ಮೂಲನೆ ಮಾಡುವ ಸಮಯ ಈಗ ಬಂದಿದೆ, ಇದು ನಮ್ಮ ರಾಷ್ಟ್ರಕ್ಕೆ ಶಾಶ್ವತ ಶಾಂತಿ ಮತ್ತು ಸಾರ್ವಭೌಮತ್ವವನ್ನು ಖಾತ್ರಿಪಡಿಸುತ್ತದೆ ಎಂದು ಅವರು ಬರೆದಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಕಾರ್ಯತಂತ್ರದ ಮೈತ್ರಿಯನ್ನು ಬಲೂಚಿಸ್ತಾನದ ಜನರು ಅತ್ಯಂತ ಅಪಾಯಕಾರಿ ಎಂದು ನೋಡುತ್ತಾರೆ. ಬೀಜಿಂಗ್, ಇಸ್ಲಾಮಾಬಾದ್ ಸಹಯೋಗದೊಂದಿಗೆ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅನ್ನು ಅದರ ಅಂತಿಮ ಹಂತಕ್ಕೆ ಮುನ್ನಡೆಸಿದೆ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: ವಾರ್ಷಿಕ 2.5 ಕೋಟಿ ಪ್ಯಾಕೇಜ್ನ ಉದ್ಯೋಗ ಪಡೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ
ಬಲೂಚಿಸ್ತಾನದ ರಕ್ಷಣಾ ಮತ್ತು ಸ್ವಾತಂತ್ರ್ಯ ಪಡೆಗಳ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸದಿದ್ದರೆ ಮತ್ತು ದೀರ್ಘಕಾಲದ ಮಾದರಿಗಳ ಪ್ರಕಾರ ಅವುಗಳನ್ನು ನಿರ್ಲಕ್ಷಿಸುವುದು ಮುಂದುವರಿದರೆ, ಚೀನಾ ಕೆಲವೇ ತಿಂಗಳುಗಳಲ್ಲಿ ಬಲೂಚಿಸ್ತಾನದಲ್ಲಿ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಬಹುದು ಎಂದು ಊಹಿಸಬಹುದಾಗಿದೆ. 60 ಮಿಲಿಯನ್ ಬಲೂಚಿಸ್ತಾನಿ ಜನರ ಇಚ್ಛೆಯಿಲ್ಲದೆ ಬಲೂಚಿಸ್ತಾನಿ ನೆಲದಲ್ಲಿ ಚೀನಾದ ಬೂಟುಗಳ ಉಪಸ್ಥಿತಿಯು ಭಾರತ ಮತ್ತು ಬಲೂಚಿಸ್ತಾನದ ಭವಿಷ್ಯಕ್ಕೆ ಊಹಿಸಲಾಗದ ಬೆದರಿಕೆ ಮತ್ತು ಸವಾಲನ್ನು ಒಡ್ಡುತ್ತದೆ ಎಂದು ಅವರು ಹೇಳಿದರು.
ಆಪರೇಷನ್ ಸಿಂದೂರ್ಗೆ ಶ್ಲಾಘನೆ
2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಭಯೋತ್ಪಾದನೆ ವಿರುದ್ಧ ತೆಗೆದುಕೊಂಡ ದಿಟ್ಟ ಮತ್ತು ದೃಢನಿಶ್ಚಯದ ಕ್ರಮಗಳನ್ನು ಅವರು ಬಲೂಚ್ ಅವರು ಶ್ಲಾಘಿಸಿದರು. ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನಾ ಕೇಂದ್ರಗಳನ್ನು ನಾಶಮಾಡಲು ಆಪರೇಷನ್ ಸಿಂಧೂರ್ ಮಾಡಿತ್ತು. ಈ ಕ್ರಮಗಳನ್ನು ಭಾರತದ ಅನುಕರಣೀಯ ಧೈರ್ಯ ಮತ್ತು ಪ್ರಾದೇಶಿಕ ಭದ್ರತೆ ಮತ್ತು ನ್ಯಾಯಕ್ಕೆ ದೃಢವಾದ ಬದ್ಧತೆಯ ಪ್ರದರ್ಶನ ಎಂದು ಮೀರ್ ಬಲೂಚ್ ಬಣ್ಣಿಸಿದ್ದಾರೆ.
ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಬಾಯ್ಫ್ರೆಂಡ್ನ ಮನೆಗೆ ಕರೆಸಿ ಪ್ರೈವೇಟ್ ಪಾರ್ಟ್ಗೆ ಕತ್ತರಿ ಹಾಕಿದ ಪ್ರೇಯಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ