ಅಯೋಧ್ಯೆ ತೀರ್ಪಿತ್ತ 5 ಜಡ್ಜ್ ಗಳ ಭದ್ರತೆ ಹೆಚ್ಚಿಸಿದ ಕೇಂದ್ರ

By Kannadaprabha NewsFirst Published Nov 11, 2019, 12:31 PM IST
Highlights

ಶತಮಾನಗಳ ಹಳೆಯ ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಭದ್ರತೆ ಯನ್ನು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನವದೆಹಲಿ (ನ. 11): ಶತಮಾನಗಳ ಹಳೆಯ ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಭದ್ರತೆಯನ್ನು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿಸಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಜೆಐ ರಂಜನ್ ಗೊಗೋಯ್, ನಿಯೋಜಿತ ಸಿಜೆಐ ಎಸ್.ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್.ಎ ನಜೀರ್ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಹೆಚ್ಚಿನ ತುಕಡಿ, ಬ್ಯಾರಿಕೇಡ್ ಹಾಗೂ ಬೆಂಗಾವಲು ವಾಹನ ಒದಗಿಸಲಾಗಿದೆ. ಈ ಹಿಂದೆ ಹೌಸ್ ಗಾರ್ಡ್ ಹಾಗೂ ಸಮಾನ್ಯ ಭದ್ರತೆ ಮಾತ್ರ ನೀಡಲಾಗುತ್ತಿತ್ತು.

 ಸುಮಾರು 70 ವರ್ಷಗಳ ಇತಿಹಾಸವಿರುವ ಈ ಅಯೋಧ್ಯಾ-ಬಾಬ್ರಿ ಮಸೀದಿ ಹಾಗೂ ರಾಮ ಮಂದಿರ ವಿವಾದದ ವಿಚಾರಣೆ ನಡೆಸಿ,  ಅಂತಿಮ ತೀರ್ಪು ನೀಡಿದ ನ್ಯಾಯಾಧೀಶರ ಪರಿಚಯ ಇಲ್ಲಿದೆ.

1.ಸಿಜೆಐ ರಂಜನ್ ಗೋಗಯ್:


ಅಲಹಾಬಾದ್ ಅಯೋಧ್ಯೆಯ ವಿವಾದಿತ ಭೂಮಿಯನ್ನು ಮೂವರಿಗೆ ಸಮನಾಗಿ ಹಂಚಿ ತೀರ್ಪು ನೀಡಿದ ನಂತರ ಆಗಿನ ಸಿಜೆಐ ದೀಪಕ್ ಮಿಶ್ರಾ ಅವರು ಅಗತ್ಯ ದಾಖಲೆಗಳ ಅನುವಾದ ತ್ವರಿತವಾಗಿ ಆಗದ್ದಕ್ಕೆ ನಿರಾಶರಾಗಿದ್ದರು. ಅಲ್ಲದೇ ಪ್ರಕರಣದ ವಿಚಾರಣೆ ದೊಡ್ಡ ಪೀಠದಲ್ಲಿ ವಿಚಾರಣೆ ನಡೆಯಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅಕ್ಟೋಬರ್ 3, 2018ರಂದು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲು ಅಯೋಧ್ಯಾ ವಿವಾಧವನ್ನು ತ್ವರಿತವಾಗಿ ಬಗೆ ಹರಿಸಲು ಹಿಂದೇಟು ಹಾಕಿದ್ದರು. 

ಅಯೋಧ್ಯೆ ರಾಮನಿಗೆ ಸೇರಿದ್ದು: ಮಹಾತೀರ್ಪಿದು

ಪಂಜಾಬ್, ಹರಿಯಾಣಾ ಹೈ ಕೋರ್ಟ್ ಮುಖ್ಯ ನ್ಯಾಯಧೀಶರಾಗಿದ್ದ ನ್ಯಾ.ಗೋಗಯಿ ಸಿಜೆಐ ಆಗಿ ಬಡ್ತಿ ಪಡೆದಿದ್ದು, ಅವರು ನವೆಂಬರ್ 17ರಂದು ನಿವೃತ್ತರಾಗುತ್ತಿದ್ದಾರೆ. ಇದರೊಳಗೆ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಬೇಕಾಗಿದೆ. ಇವರ ಅವಧಿಯಲ್ಲಿ ಈ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲೂ ಆರ್ಟ್ ಆಫ್ ಲೀವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಸಮಿತಿಯೊಂದನ್ನೂ ರಚಿಸಲಾಯಿತು. ಆಗಸ್ಟ್ 6ಕ್ಕೆ ವಿಚಾರಣೆ ಆರಂಭಿಸಲಾಯಿತು. 

ವಿವಾದ ಇರುವುದೇ 2.77 ಎಕರೆ ಜಾಗಕ್ಕೆ

ಆರಂಭದಲ್ಲಿ ಇವರ ವಿರುದ್ಧ ಕೋರ್ಟ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಕೇಳಿ ಬಂದಿತ್ತು. ಆದರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಂತರಿಕ ಸಮಿತಿ ನಡೆಸಿದ ತನಿಖೆ ಇವರಿಗೆ ಕ್ಲೀನ್ ಚಿಟ್ ನೀಡಿತು.

2.ನ್ಯಾ ಎಸ್.ಎ.ಬೊಬ್ಜೆ


ಕೆಲವು ದಿನಗಳ ಕಾಲ ಮಧ್ಯ ಪ್ರದೇಶದ ಮುಖ್ಯ ನ್ಯಾಯಧೀಶರಾಗಿ ಕಾರ್ಯ ನಿರ್ವಹಿಸಿದ ನ್ಯಾ.ಬೊಬ್ಡೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಏಪ್ರಿಲ್ 12, 2013ರಂದು ನೇಮಿಸಲಾಯಿತು. ಇದೇ ನ.18ಕ್ಕೆ ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

ಆಧಾರ್‌ ಸಂಖ್ಯೆಗೆ ಸಂಬಂಧಿಸಿದಂತೆ ನ್ಯಾ.ಚೆಲಮೇಶ್ವರ್ ಅವರೊಂದಿಗೆ ವಿಚಾರಣೆ ನಡೆಸಿ, ತೀರ್ಪು ನೀಡಿದ ಪೀಠದಲ್ಲಿ ಇವರೂ ಇದ್ದರು. ಪ್ರೈವೇಸಿ ಹಾಗೂ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ ಒಮ್ಮತದ ತೀರ್ಪು ನೀಡಿದ ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ ಇವರೂ ಒಬ್ಬರಾಗಿದ್ದರು. ಅಲ್ಲದೇ ದಿಲ್ಲಿಯಲ್ಲಿ ಪರಿಸರ ಮಾಲಿನ್ಯದ ಕಾರಣದಿಂದ ಪಟಾಕಿ ಮಾರಾಟವನ್ನು ನಿಷೇಧಿಸಿ ತೀರ್ಪು ನೀಡಿದ ಮೂವರು ನ್ಯಾಯಾಧೀಶರ ಪೀಠದಲ್ಲಿ ಇವರಿದ್ದರು. ಸಿಐಜೆ ಗೋಗಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಾಗ ನಡೆದ ಆಂತರಿಕ ತನಿಖೆಯಲ್ಲಿ ಇವರಿದ್ದರು. 

ತೀರ್ಪು ಏನೇ ಬಂದರೂ ಹೀಗ್ ಮಾಡಿ

3. ನ್ಯಾ.ಚಂದ್ರಚೂಡ್


ಸಿಜೆಐ ಆಗಲು ಅರ್ಹತೆ ಇದ್ದ ಹಿರಿಯರ ಸಾಲಿನಲ್ಲಿ ನ್ಯಾ.ಚಂದ್ರಚೂಡ್ ಸಹ ಇದ್ದಾರೆ. ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದಲ್ಲಿ 2022ರಿಂದ 2024ರ ತನಕ ಸುದೀರ್ಘ ಅವಧಿಯಲ್ಲಿ ಸಿಜೆಐ ಆಗಿ ಮುಂದುವರಿಯಲಿದ್ದಾರೆ. 

ಐತಿಹಾಸಿಕ ದೃಷ್ಟಿಕೋನಕ್ಕಿಂತಲೂ ತಾಂತ್ರಿಕ ಕಾನೂನು ವಿಚಾರಗಳನ್ನು ಅಯೋಧ್ಯೆ ಪ್ರಕರಣದ ವಿಚಾರಣೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ . ಆದರೆ, ಸುನ್ನಿ ವಕ್ಫ್ ಬೋರ್ಡ್ ಪರ ವಾದಿಸುತ್ತಿದ್ದ ವಕೀಲರಿಗೆ ಎಎಸ್‌ಐ ನೀಡಿದ ವರದಿಯಲ್ಲಿ ಉಲ್ಲೇಖಿಸಿದಂತೆ ಬಾಬ್ರಿ ಮಸೀದಿ ಕೆಳಗೆ ರಾಮ ಮಂದಿರದ ಕುರುಹುಗಳಿದ್ದವು ಎಂಬ ವಿಷಯವಾಗಿ ಹಲವು ಖಠಿಣ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಿವರು. 

ಇವರ ತಂದೆ ನ್ಯಾ.ವೈವಿ ಚಂದ್ರಚೂಡ್ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು. ವೈಯಕ್ತಿಕ ಸ್ವಾತಂತ್ರ್ಯ, ಘನತೆ ಹಾಗೂ ಸ್ವಾಯತ್ತತೆ ವಿಚಾರವಾಗಿ ಗಟ್ಟಿ ನಿಲವು ಪ್ರಕಟಿಸಿದ ನ್ಯಾಯಾಧೀಶರಲ್ಲಿ ಇವರು ಪ್ರಮುಖರು. 

ಭೀಮಾ ಕೋರೆಗಾವ್ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿ ಇವರಿದ್ದರು. 

4.ನ್ಯಾ.ಅಶೋಕ್ ಭೂಷಣ್


ಅಯೋಧ್ಯೆ ಪ್ರಕರಣದ ಅರ್ಜಿ ಸಲ್ಲಿಕೆಯಾದ ಅಲಹಾಬಾದ್‌ ಹೈ ಕೋರ್ಟಿನಲ್ಲಿಯೇ 1979 ರಿಂದ 2001ರವರೆಗೆ ವಕೀಲಿ ವೃತ್ತಿ ಆರಂಭಿಸಿದವರು ನ್ಯಾ.ಭೂಷಣ್. ಕೇರಳ ಹೈ ಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಇವರು 2015ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ಅಯೋಧ್ಯೆ ವಿವಾದ ತೀರ್ಪು ನೀಡಲು ಐವರು ನ್ಯಾಯಾಧೀಶರ ಪೀಠವನ್ನು ಆರಂಭಿಸಿದಾಗ ಮೊದಲು ನ್ಯಾ.ಯುಯು ಲಲಿತ್ ಹಾಗೂ ನ್ಯಾ.ಎನ್‌ವಿ ರಾಮನ್ ಅವರನ್ನು ಸೇರಿಸಲಾಗಿತ್ತು. ಆದರೆ, ನ್ಯಾ.ಲಲಿತ್ ಈ ಪ್ರಕರಣದ ವಿಚಾರಣೆ ನಡೆಸಲು ಕೆಲವು ಕಾರಣಗಳಿಂದ ನಿರಾಕರಿಸಿದ್ದರಿಂದ, ನ್ಯಾ.ಭೂಷಣ್ ಅವರನ್ನು ನೇಮಿಸಲಾಯಿತು. 

ಆಧಾರ್‌ನ ಸಾಂವಿಧಾನಿಕ  ಮಾನ್ಯತೆ ಹಾಗೂ ದಿಲ್ಲಿ Vs ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ಇವರಿದ್ದರು. 

5.ನ್ಯಾ.ಅಬ್ದುಲ್ ನಜೀರ್


ಕರ್ನಾಟಕ ಹೈ ಕೋರ್ಟಿನಲ್ಲಿ ಸುದೀರ್ಘ 14 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಇವರನ್ನು 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಯಿತು. ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸದೇ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿಗೆ ನೇಮಕವಾದವರು ಇವರು. 

ASI ನೀಡಿದ ವರದಿಯಂತೆ ಬಾಬರಿ ಮಸೀದಿ ಕೆಳಗೆ ರಾಮ ಮಂದಿರದ ಕುರುಹುಗಳಿದ್ದವು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಸಿಜೆಐ ಮಿಶ್ರಾ ಅಯೋಧ್ಯಾ ಪ್ರಕರಣ ಇತ್ಯರ್ಥಕ್ಕೆ ನೇಮಿಸಿದ ಮೂರು ನ್ಯಾಯಧೀಶರ ಪೀಠದಲ್ಲಿಯೂ ಇವರಿದ್ದರು.

2017ರಲ್ಲಿ ತ್ರಿಬಲ್ ತಲಾಖ್‌ಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ಅಲ್ಪಮತದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಆಧಾರ್ ಪ್ರೈವೇಸಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ  ಪೀಠದಲ್ಲಿ ಇವರಿದ್ದರು. 

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು. ಅದರಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ, ಅಖಾರ, ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು, ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠ ನ.9ರಂದು ಅಂತಿಮ ತೀರ್ಪು ಪ್ರಕಟಿಸಲಿದೆ. 

 

click me!