ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!

By Web DeskFirst Published Nov 9, 2019, 1:04 PM IST
Highlights
  • ಭಾರತದ ಇತಿಹಾಸದಲ್ಲಿ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆ ಬಾಬರಿ ಮಸೀದಿ- ರಾಮಮಂದಿರ ವಿವಾದ
  • ರಾಮಜನ್ಮಭೂಮಿ ನ್ಯಾಸ ಪರವಾಗಿ ತೀರ್ಪಿತ್ತಿದ ಸುಪ್ರೀಂ ಕೋರ್ಟ್‌ ಪಂಚ ಪೀಠ 
  • ಸುನ್ನಿ ವಕ್ಫ್ ಬೋರ್ಡ್‌ಗೆ  5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ 

ಬೆಂಗಳೂರು (ನ.09): ಭಾರತದ ಇತಿಹಾಸದಲ್ಲಿ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆ ಬಾಬರಿ ಮಸೀದಿ- ರಾಮಮಂದಿರ ವಿವಾದ ಕೊನೆಗೂ ಬಗೆಹರಿದಿದೆ. ಸುಪ್ರೀಂ ಕೋರ್ಟ್‌ನ ಪಂಚ ಪೀಠವು 2.77 ಎಕರೆ ವಿವಾದಿತ ಭೂಮಿಯನ್ನು ರಾಮಜನ್ಮಭೂಮಿ ನ್ಯಾಸಕ್ಕೆ ಸೇರಿದ್ದು ಎಂದು ತೀರ್ಪಿತ್ತಿದೆ. ಮತ್ತೊಂದು ಅರ್ಜಿದಾರ ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ ಹೊರಡಿಸಿದೆ.

ನ.17ಕ್ಕೆ ನಿವೃತ್ತರಾಗಲಿರುವ ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ನೇತೃತ್ವದ ಈ ಪೀಠದಲ್ಲಿ ಒಬ್ಬರು ಕನ್ನಡಿಗರು. ಅವರೇ ಮಂಗಳೂರಿನವರೇ ಆದ ನ್ಯಾ. ಎಸ್. ಅಬ್ದುಲ್ ನಜೀರ್. 

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿಯ ಬೆಳುವಾಯಿ ಎಂಬಲ್ಲಿ 1958 ಜನವರಿ 5ರಂದು ಜನಿಸಿದರು. ಅವರ ತಂದೆ ಹೆಸರು ಫಕೀರ್ ಸಾಹೇಬ್.  

ಮೂಡಬಿದಿರೆಯ ಮಹಾವೀರ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಳಿಸಿದ ಅವರು, ಬಳಿಕ ಮಂಗಳೂರಿನ SDM ಕಾಲೇಜಿನಲ್ಲಿ  ಕಾನೂನಿನಲ್ಲಿ ಪದವಿ ಪಡೆದರು.

ಇದನ್ನೂ ಓದಿ | ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!...

1983ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ, ಅವರು 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು.  

ಕರ್ನಾಟಕ ಹೈ ಕೋರ್ಟಿನಲ್ಲಿ ಸುದೀರ್ಘ 14 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಇವರನ್ನು 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಯಿತು. 

ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸದೇ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿಗೆ ನೇಮಕವಾದವರು ಇವರು. 

ಇದನ್ನೂ ಓದಿ | ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!...

ASI ನೀಡಿದ ವರದಿಯಂತೆ ಬಾಬರಿ ಮಸೀದಿ ಕೆಳಗೆ ರಾಮ ಮಂದಿರದ ಕುರುಹುಗಳಿದ್ದವು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಸಿಜೆಐ ಮಿಶ್ರಾ ಅಯೋಧ್ಯಾ ಪ್ರಕರಣ ಇತ್ಯರ್ಥಕ್ಕೆ ನೇಮಿಸಿದ ಮೂರು ನ್ಯಾಯಧೀಶರ ಪೀಠದಲ್ಲಿಯೂ ಇವರಿದ್ದರು.

2017ರಲ್ಲಿ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ಅಲ್ಪಮತದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಆಧಾರ್ ಪ್ರೈವೇಸಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ  ಪೀಠದಲ್ಲಿ ಇವರಿದ್ದರು. 

click me!