
ಅಯೋಧ್ಯೆ: ಅಯೋಧ್ಯೆಯ ಭವ್ಯ ರಾಮ ಮಂದಿರದ ಕಾಣಿಕೆ ಹುಂಡಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆ ತೀವ್ರ ಚುರುಕುಗೊಂಡಿದೆ. ಈ ಮಹಾ ಲೂಟಿ ಪ್ರಕರಣದ ಪ್ರಮುಖ ಆರೋಪಿಯಾದ ಅವಿನಾಶ್ ಶುಕ್ಲಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನಿಂದ ಸಾಲು ಸಾಲು ಆಘಾತಕಾರಿ ಸತ್ಯಗಳು ತನಿಖೆಯ ವೇಳೆ ಹೊರಬರುತ್ತಿವೆ. ದೇವಸ್ಥಾನದ ಪವಿತ್ರ ಹಣವನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಈ ಕಳ್ಳನ ಕರಾಳ ಮುಖ ಬಯಲಾಗುತ್ತಿದ್ದಂತೆ, ಇತ್ತೀಚೆಗೆ ಆತನ ಮದುವೆಯೂ ಮುರಿದು ಬಿದ್ದಿದೆ.
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಅವಿನಾಶ್ ಶುಕ್ಲಾ ಮಾಡಿರುವ ಖರ್ಚುಗಳ ಪಟ್ಟಿಯನ್ನು ಕಂಡು ಸ್ವತಃ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ರಾಮನ ಹುಂಡಿಯಿಂದ ಕಳ್ಳತನ ಮಾಡಿದ ಹಣದಲ್ಲಿ ಈತ ತನ್ನ ಗೆಳತಿಗೆ ಅತ್ಯಂತ ದುಬಾರಿ ಬೆಲೆಯ ಐಫೋನ್ (iPhone) ಮೊಬೈಲ್ ಹಾಗೂ ಬರೋಬ್ಬರಿ 2.5 ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ.
ತನಿಖೆಯ ವೇಳೆ ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅವಿನಾಶ್ ಶುಕ್ಲಾನಿಗೆ ರಾಮ ಮಂದಿರದ ಕಾಣಿಕೆ ಹುಂಡಿಯೇ ಒಂದು ಎಟಿಎಂ (ATM) ಯಂತ್ರದಂತಾಗಿತ್ತು. ತನಗೆ ಹಣದ ಅಗತ್ಯ ಬಿದ್ದಾಗಲೆಲ್ಲಾ ಈತ ಹುಂಡಿಗೆ ಕೈ ಹಾಕುತ್ತಿದ್ದ ಎನ್ನುವ ಕಹಿ ಸತ್ಯ ತನಿಖೆಯಲ್ಲಿ ಬಹಿರಂಗಗೊಂಡಿದೆ. ಕದ್ದ ಹಣದಿಂದ ತನ್ನ ಕುಟುಂಬಸ್ಥರಿಗೂ ಈತ ಲಕ್ಷ ಲಕ್ಷ ಹಣವನ್ನು ಹಂಚಿದ್ದಾನೆ.