
ಜಲ್ಪೈಗುರಿ (ಏ.08): ಭ್ರಷ್ಟರು ಮತ್ತು ಹಿಂಸಾಕೋರರು ರಾಜ್ಯದಲ್ಲಿ ಮುಕ್ತವಾಗಿ ಇರಲು ಟಿಎಂಸಿ ಬಯಸುತ್ತದೆ. ಹೀಗಾಗಿಯೇ ಇಂಥ ಪ್ರಕರಣಗಳ ತನಿಖೆ ನಡೆಸುವ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ಸಂದೇಶ್ಖಾಲಿಯಲ್ಲಿ ಇ.ಡಿ. ಅಧಿಕಾರಿಗಳ ಮೇಲೆ ಮತ್ತು ಶನಿವಾರ ಮೇದಿನಿಪುರದಲ್ಲಿ ಎನ್ಐಎ ಅಧಿಕಾರಿಗಳ ಮೇಲೆ ಟಿಎಂಸಿ ನಾಯಕರಿಂದ ದಾಳಿ ನಡೆದ ಬೆನ್ನಲ್ಲೇ ಮೋದಿ ಈ ಆರೋಪ ಮಾಡಿದ್ದಾರೆ.
ಭಾನುವಾರ ಇಲ್ಲಿ ನಡೆದ ಬಿಜೆಪಿಯ ಬೃಹತ್ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಮೋದಿ, ‘ಟಿಎಂಸಿ ಕಾನೂನು ಮತ್ತು ದೇಶದ ಸಂವಿಧಾನಕ್ಕೆ ಅಗೌರವ ತೋರುತ್ತಿದೆ. ಪಶ್ಚಿಮ ಬಂಗಾಳದಲ್ಲೀಗ ಟಿಎಂಸಿಯ ಸಿಂಡಿಕೇಟ್ ರಾಜ್ ನಡೆಯುತ್ತಿದೆ. ಹೀಗಾಗಿ ಹಲವು ಸಂದರ್ಭದಲ್ಲಿ ನ್ಯಾಯಾಲಯಗಳೇ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಮೋದಿ ಕುಟುಕಿದರು. ಇದೇ ವೇಳೆ ಇತ್ತೀಚೆಗೆ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ ಮೋದಿ, ‘ಈ ಪ್ರಕರಣದಲ್ಲಿ ಭಾಗಿಯಾದವರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯುವಂತೆ ಮಾಡುತ್ತೇವೆ’ ಎಂದು ನೊಂದವರಿಗೆ ಅಭಯ ನೀಡಿದರು.
ಭ್ರಷ್ಟರ ರಕ್ಷಣೆಗಾಗಿ ಕಾಂಗ್ರೆಸ್ ರ್ಯಾಲಿ: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಲುವಾಗ ಅಲ್ಲ ಬದಲಾಗಿ ಭ್ರಷ್ಟರನ್ನು ಉಳಿಸಲೆಂದೇ ತರಾತುರಿಯಲ್ಲಿ ರ್ಯಾಲಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಇಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಪಕ್ಷದ ಲೂಟಿ ಅಂಗಡಿ ಮುಚ್ಚಿರುವುದರಿಂದಲೇ ವಿರೋಧ ಪಕ್ಷ ಅಂತಕದಲ್ಲಿದೆ. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಿಂದ ಕೂಡಿದ್ದು, ಅದೊಂದು ಭ್ರಷ್ಟ ಪಕ್ಷವಾಗಿದೆ. ಯಾವೆಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆಯೋ ಅಲ್ಲಿ ಅಭಿವೃದ್ಧಿ ಕುಂಠತವಾಗಿದೆ.
ಕಾಂಗ್ರೆಸ್ ಗೆದ್ದರೆ ಸಂಪತ್ತಿನ ಸಮಾನ ಹಂಚಿಕೆಗೆ ಸಮೀಕ್ಷೆ: ರಾಹುಲ್ ಗಾಂಧಿ ಭರವಸೆ
ಬಡವರು, ದೀನ ದಲಿತರು, ಯುವಕರ ಬಗ್ಗೆ ಎಂದಿಗೂ ಚಿಂತಿಸದ ಕಾಂಗ್ರೆಸ್ ಜನರಿಂದ ಅದೆಷ್ಟೋ ಹಣವನ್ನು ಲೂಟಿ ಮಾಡಿದೆ’ ಎಂದು ಟೀಕಿಸಿದರು. ಇದೇ ವೇಳೆ ತಾವು ಮೂರನೇ ಬಾರಿ ಪ್ರಧಾನಿಯಾಗುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ‘ಮೊದಲ 100 ದಿನನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ. ಅದರಲ್ಲಿ ಯಾವೊಬ್ಬ ಭ್ರಷ್ಟರನ್ನು ಬಿಡುವುದಿಲ್ಲ. ಭ್ರಷ್ಟರಿಗೆಲ್ಲರಿಗೂ ಶಿಕ್ಷೆ ಕೊಡಿಸುವುದೇ ನಮ್ಮ ಗುರಿ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ