
ಮುಂಬೈ (ಮಾ.21): ಮಹಿಳೆಯ ಮೇಲೆ ಅ*ತ್ಯಾಚಾ*ರ ಎಸಗಿದ ಆರೋಪದಡಿ ಜ್ಯೋತಿಷಿ ಬಾಬಾ ಅಶೋಕ್ ಖರಾತ್ ಬಂಧನವಾದ ಬೆನ್ನಲ್ಲೇ, 'ಗುಲಾಬಿ ಗ್ಯಾಂಗ್' ಅಧ್ಯಕ್ಷೆ ಸಂಗೀತಾ ತಿವಾರಿ ಆಕ್ರೋಶ ಹೊರಹಾಕಿದ್ದಾರೆ. ಖರಾತ್ ಬಳಿ ಸುಮಾರು 200 ರಿಂದ 250 ಅಶ್ಲೀಲ ವಿಡಿಯೋಗಳಿದ್ದು, ಇದರಲ್ಲಿ ದೊಡ್ಡ ದೊಡ್ಡ ರಾಜಕೀಯ ನಾಯಕರು ಭಾಗಿಯಾಗಿರುವ ಸುಳಿವು ನೀಡಿದ್ದಾರೆ. ಇದೇ ವೇಳೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೂಪಾಲಿ ಚಾಕಣಕರ್ ವಿರುದ್ಧವೂ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕ್ಯಾಪ್ಟನ್, ಸಂಖ್ಯಾಶಾಸ್ತ್ರಜ್ಞ ಮತ್ತು ಜ್ಯೋತಿಷಿ ಎಂಬ ಮುಖವಾಡ ಧರಿಸಿದ್ದ ಅಶೋಕ್ ಖರಾತ್ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಆತನ ಬಂಧನದ ನಂತರ ಒಂದೊಂದೇ ಕರಾಳ ಸತ್ಯಗಳು ಹೊರಬರುತ್ತಿವೆ. ಯಾರೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ಅಸಹ್ಯಕರ ಕೆಲಸಗಳನ್ನು ಈತ ಮಾಡುತ್ತಿದ್ದ ಎಂಬುದು ಬಯಲಾಗಿದೆ.
ಕಾಂಗ್ರೆಸ್ ನಾಯಕಿ, ಗುಲಾಬಿ ಗ್ಯಾಂಗ್ ಅಧ್ಯಕ್ಷೆ ಸಂಗೀತಾ ತಿವಾರಿ
ಈ ಹಗರಣದ ಬಗ್ಗೆ ಸ್ಥಳೀಯ ನ್ಯೂಸ್ ಚಾನೆಲ್ ಜೊತೆ ಮಾತನಾಡಿದ ಸಂಗೀತಾ ತಿವಾರಿ ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ: "ಅಶೋಕ್ ಖರಾತ್ ಮಾಡಿದ ಕೃತ್ಯಗಳು ಅತ್ಯಂತ ಭಯಾನಕವಾಗಿವೆ. ಈ ಪ್ರಕರಣದ ತನಿಖೆ ಅಂತ್ಯದವರೆಗೂ ತಲುಪುತ್ತದೆಯೇ ಎಂಬ ಸಂಶಯ ನನಗಿದೆ. ಏಕೆಂದರೆ ಇದರಲ್ಲಿ ಅನೇಕ ಪ್ರಭಾವಿ ನಾಯಕರು ಮತ್ತು ಖ್ಯಾತ ಉದ್ಯಮಿಗಳ ಹೆಸರುಗಳಿವೆ. ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಖರಾತ್ ಬಳಿ ಕೇವಲ 58 ವಿಡಿಯೋ ಕ್ಲಿಪ್ಗಳಿಲ್ಲ, ಬದಲಿಗೆ ಆ ಸಂಖ್ಯೆ 250ಕ್ಕೂ ಹೆಚ್ಚಿದೆ. ಇವುಗಳಲ್ಲಿ ಅಶ್ಲೀಲ ಚಿತ್ರಗಳು (Blue Films) ಮತ್ತು ಶಬ್ದಗಳಲ್ಲಿ ವಿವರಿಸಲು ಅಸಾಧ್ಯವಾದ ಅಸಹ್ಯಕರ ಸಂಗತಿಗಳಿವೆ. ಇದರಲ್ಲಿ 'ಯೋನಿ ಪೂಜೆ' ಮಾಡುವ ವಿಡಿಯೋಗಳೂ ಸೇರಿವೆ," ಎಂದು ತಿವಾರಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎನ್ಸಿಪಿ ನಾಯಕಿ ರೂಪಾಲಿ ಚಾಕಣಕರ್ ಅವರು ಖರಾತ್ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆದ ನಂತರ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರು ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಭೇಟಿ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಿವಾರಿ, "ಚಾಕಣಕರ್ ಕೇವಲ ರಾಜೀನಾಮೆ ನೀಡಿದ್ದಾರೆ, ಆದರೆ ಆ ರಾಜೀನಾಮೆಯಲ್ಲೂ ಅಹಂಕಾರ ಎದ್ದು ಕಾಣುತ್ತಿತ್ತು. ತಾನು ತಪ್ಪು ಮನುಷ್ಯನಿಗೆ ಸಾಥ್ ನೀಡಿದೆ ಎಂಬ ಯಾವುದೇ ಪಶ್ಚಾತ್ತಾಪ ಅವರ ಮುಖದಲ್ಲಿರಲಿಲ್ಲ," ಎಂದು ಕಿಡಿಕಾರಿದ್ದಾರೆ. ಮಹಾರಾಷ್ಟ್ರದ ಮಹಿಳೆಯರ ಜೀವನ ಮತ್ತು ಶರೀರದ ಜೊತೆ ಆಟವಾಡಿದ ವ್ಯಕ್ತಿಗೆ ಬೆಂಬಲ ನೀಡಿದ ಇವರನ್ನು ಪಕ್ಷವು ಕೂಡಲೇ ಉಚ್ಛಾಟಿಸಬೇಕು. ಸುನೇತ್ರಾ ಅವರಲ್ಲಿ ನಾನು ವಿನಂತಿಸುವುದೇನೆಂದರೆ, ಸಂಘಟನೆಯನ್ನು ಉಳಿಸಬೇಕಾದರೆ ಇಂತಹ ಕೊಳೆತ ಮನಸ್ಥಿತಿಯ ವ್ಯಕ್ತಿಗಳನ್ನು ದೂರವಿಡಿ," ಎಂದಿದ್ದಾರೆ.
"ಅತ್ಯಾಚಾರಿ ಖರಾತ್ ಜೊತೆಗಿನ ಈ ಹಗರಣದಲ್ಲಿ ಚಾಕಣಕರ್ ಪಾಲುದಾರರಾಗಿದ್ದಾರೆ. ಅವರ ಮೇಲೆ ಕಾನೂನುಬದ್ಧವಾಗಿ ಕೇಸ್ ದಾಖಲಿಸಿ ಶಿಕ್ಷೆ ನೀಡಬೇಕು. ಒಂದು ವೇಳೆ ಸರ್ಕಾರ ಈ ಕ್ರಮ ಕೈಗೊಳ್ಳದಿದ್ದರೆ ನಾವು ಮುಖ್ಯಮಂತ್ರಿಗಳ ಕಚೇರಿಗೆ (CMO) ಬೃಹತ್ ಮೋರ್ಚಾ ಮೂಲಕ ಮುತ್ತಿಗೆ ಹಾಕುತ್ತೇವೆ," ಎಂದು ಸಂಗೀತಾ ತಿವಾರಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ