ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!

By BK AshwinFirst Published Dec 19, 2022, 8:37 PM IST
Highlights

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ.

ರಾಜಸ್ಥಾನದಲ್ಲಿ (Rajasthan) ಮುಂದಿನ ವರ್ಷ ವಿಧಾನಸಭೆ ಚುನಾವಣೆ (Legislative Assembly Elections) ನಡೆಯುತ್ತಿದ್ದು, ಈ ಹಿನ್ನೆಲೆ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ (Congress) ಸರ್ಕಾರ ಹಾಗೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Chief Minister Ashok Gehlot) ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆ ಬಡತನ ರೇಖೆಗಿಂತ ಕೆಳಗಿರುವ (Below Poverty Line) ಮತ್ತು ಉಜ್ವಲ ಯೋಜನೆಗೆ (Ujjwala Scheme) ಸೇರಿರುವ ಜನರಿಗೆ ರಾಜಸ್ಥಾನ ಸರ್ಕಾರ 500 ರೂ.ಗೆ  ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಮುಖ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ರಾಜಸ್ಥಾನ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ. ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ ಅವರು, ತಮ್ಮ ಸರ್ಕಾರವು ಈ ಕುಟುಂಬಗಳಿಗೆ ಅರ್ಧಕ್ಕಿಂತ ಕಡಿಮೆ ಬೆಲೆಗೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತದೆ ಎಂದು ಹೇಳಿದರು.

"ನಾನು ಮುಂದಿನ ತಿಂಗಳು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ... ಇದೀಗ, ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು. ಆದರೆ ಸಿಲಿಂಡರ್ ಖಾಲಿಯಾಗಿದೆ, ಏಕೆಂದರೆ (ಸಿಲಿಂಡರ್) ದರಗಳು ಈಗ ₹ 400 ಮತ್ತು ₹ 1,040 ರ ನಡುವೆ ಇದೆ’’ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಹೇಳಿದರು. ಬಡವರಿಗೆ ಮತ್ತು ಉಜ್ವಲ ಯೋಜನೆಯಡಿಯಲ್ಲಿ ತಲಾ ₹ 500 ರಂತೆ ನಾವು ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತೇವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದೂ ಅಶೋಕ್‌ ಗೆಹ್ಲೋಟ್ ತಿಳಿಸಿದ್ದಾರೆ.

ಇದನ್ನು ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಭುಗಿಲು: ಪೈಲೆಟ್ ಗೆಹ್ಲೋಟ್ ಮಧ್ಯೆ ಫೈಟ್

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ ಆಡಳಿತಕ್ಕಿಂತ ಹೆಚ್ಚಾಗಿ ಪಕ್ಷದ ಒಳಜಗಳವೇ ಕಣ್ಣಿಗೆ ರಾಚುತ್ತಿದೆ. ಈ ತಿಂಗಳ ಆರಂಭದಲ್ಲಿ ಅಂದರೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ರಾಜ್ಯವನ್ನು ತಲುಪುವ ಮೊದಲು 
ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಮತ್ತು ಅವರ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಹೊಸ ಘರ್ಷಣೆ ಉಂಟಾಗಿತ್ತು.

ಈ ಮಧ್ಯೆ, ಇಂದು ಅಲ್ವಾರ್‌ನಲ್ಲಿದ್ದ ರಾಹುಲ್‌ ಗಾಂಧಿ, ಅಶೋಕ್‌ ಗೆಹ್ಲೋಟ್ ಅವರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದರು. ಅಶೋಕ್‌ ಗೆಹ್ಲೋಟ್ ಅವರ ಸರ್ಕಾರ ತೆರೆದಿರುವ 1,700 ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿಶೇಷ ಉಲ್ಲೇಖವನ್ನೂ ರಾಹುಲ್‌ ಗಾಂಧಿ ಮಾಡಿದ್ದಾರೆ. 

ಇದನ್ನೂ ಓದಿ: ರಾಜಸ್ಥಾನ ಸಿಎಂಗೆ ಮುಖಭಂಗ: ಸಚಿನ್‌ ಪೈಲಟ್‌ ಪರ ಬ್ಯಾಟ್‌ ಬೀಸಿದ ಗೆಹ್ಲೋಟ್‌ ಸರ್ಕಾರದ ಸಚಿವ..!

ಇನ್ನೊಂದೆಡೆ, ಉಜ್ವಲ ಸ್ಕೀಂನಡಿ ನೋಂದಣಿಯಾಗಿರುವ ಬಡವರಿಗೆ ಸಿಲಿಂಡರ್‌ ದರ ಅರ್ಧಕ್ಕೆ ಇಳಿಕೆ ಮಾಡಿರುವ ಘೋಷಣೆಯನ್ನು ಅಶೋಕ್‌ ಗೆಹ್ಲೋಟ್ ಅವರು ಟೀಮ್ ಪೈಲಟ್‌ಗೆ ನೀಡಿದ ಸಂಕೇತವೆಂದು ಪರಿಗಣಿಸಲಾಗಿದೆ. ತಮ್ಮ ಸ್ಥಾನವು ಸುರಕ್ಷಿತವಾಗಿದೆ ಮತ್ತು ನಾನು ಮುಂದಿನ ವರ್ಷದ ಚುನಾವಣಾ ಬಜೆಟ್ ಅನ್ನು ಮಂಡಿಸುತ್ತೇನೆ ಮತ್ತು ನನ್ನ ಮುಂದಾಳತ್ವದಲ್ಲಿ ಮುನ್ನಡೆಸುತ್ತೇನೆ ಎಂಬ ಸಂಕೇತ ನೀಡಿದಂತಿದೆ. 

ಅಲ್ಲದೆ, ಸರ್ಕಾರದ ನಿರ್ಧಾರವು ಉಚಿತ ಮತ್ತು ಸಬ್ಸಿಡಿ ಕುರಿತ ಚರ್ಚೆಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಇದುವರೆಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ವಿರುದ್ಧ ಈ ವಿಚಾರವಾಗಿ ಹೆಚ್ಚು ಟೀಕೆ ಕೇಳಿ ಬರುತ್ತಿತ್ತು. ಈ ವಿಷಯವು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಆಗಸ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಈ ಬಗ್ಗೆ ಸರ್ವಪಕ್ಷ ಚರ್ಚೆ ನಡೆಸುವಂತೆ ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: ಗೆಹ್ಲೋಟ್ ಆಪ್ತ ಸಚಿವರ ವಜಾಗೆ ಪೈಲೆಟ್ ಬಣ ಆಗ್ರಹ, ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

click me!