
ಉತ್ತರ ಪ್ರದೇಶ: ಕಾರ್ಮಿಕನ ಮುಖದ ಮೇಲೆ ಮೂತ್ರ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಧ್ಯಾಹ್ನ ಊಟವಾದ ನಂತರ ಕಾರ್ಮಿಕ ಸ್ವಲ್ಪ ಕಾಲ ವಿಶ್ರಾಂತಿಗಾಗಿ ಮಲಗಿದ್ದು ನಿದ್ದೆಗೆ ಜಾರಿದ್ದಾನೆ. ಆದರೆ ಆತನನ್ನು ಹೆಸರಿಂದ ಕರೆದೋ ಅಥವಾ ಜೋರಾಗಿ ಕೂಗಿ ಏಳಿಸುವ ಬದಲು ಆರೋಪಿ ಆತನ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿದ್ದು ಅಮಾನವೀಯವಾಗಿ ವರ್ತಿಸಿದ್ದಾನೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಪೊಲೀಸರು ಮುಖದ ಮೇಲೆ ಮೂತ್ರ ಮಾಡಿದ ಕಿಡಿಗೇಡಿ ಆರೋಪಿಯನ್ನು ಬಂಧಿಸಿದ್ದಾರೆ.
ಹಿಂದಿ ಭಾಷೆಯ ನ್ಯೂಸ್ ಪೋರ್ಟಲ್ ಒಂದರ ವರದಿಯ ಪ್ರಕಾರ ಆರೋಪಿ ಮೂತ್ರ ವಿಸರ್ಜನೆ ಮಾಡಿದ್ದು, ಮಾತ್ರವಲ್ಲದೇ ಕಾರ್ಮಿಕನ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ
ಲಕ್ನೊದ ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂಡಿಯಾ ಖೇಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತನನ್ನು ರಾಜ್ಕುಮಾರ್ ರಾವತ್ ಎಂದು ಗುರುತಿಸಲಾಗಿದೆ. ಇವರು ಒಬ್ಬ ಕಾರ್ಮಿಕನಾಗಿದ್ದು, ತಮ್ಮ ಕುಟುಂಬದೊಂದಿಗೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಹೆಚ್ಚಾಗಿ ನಿರ್ಮಾಣ ಸಾಮಗ್ರಿಗಳನ್ನು ಲೋಡ್ ಮಾಡುವ ಮತ್ತು ಇಳಿಸುವ ದೈಹಿಕ ಶ್ರಮ ಬೇಡುವ ಕೆಲಸವನ್ನೇ ಅವರು ಹೆಚ್ಚಾಗಿ ಮಾಡುತ್ತಿದ್ದರು.
ಘಟನೆ ನಡೆದ ದಿನ ರಾಜ್ಕುಮಾರ್ ಮಧ್ಯಾಹ್ನದ ಊಟ ಮುಗಿಸಿದ ನಂತರ ನೆಲದ ಮೇಲೆ ಕೆಲ ಕಾಲ ವಿಶ್ರಾಂತಿಗಾಗಿ ಮಲಗಿದ್ದು, ಅಲ್ಲೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಆರೋಪಿ ಸಂಜಯ್ ಕುಮಾರ್ , ಕಾರ್ಮಿಕ ರಾಜ್ಕುಮಾರ್ ಅವರನ್ನು ಎಬ್ಬಿಸುವಂತೆ ಹೇಳಿದ್ದಾನೆ. ಆದರೆ ಗಾಢ ನಿದ್ದೆಗೆ ಜಾರಿದ ರಾಜ್ಕುಮಾರ್ ಮೇಲೆದ್ದಿಲ್ಲ, ಇದರಿಂದ ಸಿಟ್ಟಿಗೆದ್ದ ಸಂಜಯ್ ಕುಮಾರ್ ಆತನ ಮುಖದ ಮೇಲೆ ಸಿಟ್ಟಿನಿಂದ ಮೂತ್ರ ಮಾಡಿದ್ದಾನೆ ಎಂದು ವರದಿ ಆಗಿದೆ.
Watch: ಹೆಂಡ್ತಿ ಜೊತೆ ಓಡಿ ಹೋಗಿದ್ದ ಯುವಕನ ಹಿಡಿದು ಮಲ-ಮೂತ್ರ ತಿನ್ನಿಸಿದ ಪತಿ!
ಅಲ್ಲದೇ ಈ ದೃಶ್ಯವನ್ನು ಆರೋಪಿ ಸಂಜಯ್ ಕುಮಾರೇ ರೆಕಾರ್ಡ್ ಮಾಡಿದ್ದು, ಬಳಿಕ ವೀಡಿಯೋವನ್ನು ಇತರರೊಂದಿಗೆ ಹಂಚಿಕೊಂಡಿದ್ದಾನೆ. ಜೂನ್ 2 ರಂದು ಅಂದರೆ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ರಾಜ್ಕುಮಾರ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಲಕ್ನೋ ಪಶ್ಚಿಮ ವಲಯದ ಡಿಸಿಪಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ರಾಜ್ಕುಮಾರ್ ರಾವತ್ ಮತ್ತು ಸಂಜಯ್ ಮೌರ್ಯ ಇಬ್ಬರೂ ಪರಸ್ಪರ ಪರಿಚಿತರಾಗಿದ್ದು, ಇಬ್ಬರೂ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮದ್ಯ ಸೇವಿಸಿ ಸ್ಥಳದಲ್ಲಿ ಮಲಗಿದ್ದರು. ನಂತರ ಮೌರ್ಯ ರಾವತ್ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಮಾಹಿತಿಯನ್ನು ರಾವತ್ ಪತ್ನಿ ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಮೌರ್ಯನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ