
ಹೈದರಾಬಾದ್ (ಆ.26): ಆಂಧ್ರಪ್ರದೇಶದ ರಾಜಮಂಡ್ರಿ ಬಳಿ ಕಾರಿನಲ್ಲಿ ಬಂದು ಗೋದಾವರಿ ಸೇತುವೆಯಿಂದ ನದಿಗೆ ಜಿಗಿದು ಮಹಿಳೆ, ಆಕೆಯ ತಂದೆ-ತಾಯಿ ಪ್ರಾಣ ಕಳೆದುಕೊಂಡಿರುವ ಭೀಕರ ಘಟನೆಯ ಬೆನ್ನಲ್ಲೇ ಈ ಕೇಸ್ನ ಬೆಚ್ಚಿಬೀಳಿಸುವ ಸತ್ಯಾಂಶಗಳು ಹೊರಬಿದ್ದಿವೆ. ಕುಟುಂಬದ ಮೂವರ ಸಾವಿಗೆ ಹಾಗೂ ಮಹಿಳೆಯ ಪತಿಯ ನಿಗೂಢ ಸಾವಿಗೆ 'ಸಾಧಿಕ್ ಖಾನ್' ಎಂಬ ಶೂಟಿಂಗ್ ಕೋಚ್ ನೀಡಿದ ಮಾನಸಿಕ ಹಿಂಸೆ, ಆಸ್ತಿ ಕಬಳಿಸುವ ಸಂಚು ಮತ್ತು ಕೊಲೆ ಬೆದರಿಕೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಗಸ್ಟ್ 17ರ ತಡರಾತ್ರಿ ಕಾಕಿನಾಡದಿಂದ ಕೊವ್ವೂರು ಮಾರ್ಗವಾಗಿ ರಾಜಮಂಡ್ರಿಯ ರೋಡ್-ಕಮ್-ರೈಲ್ವೆ ಸೇತುವೆಗೆ ಕಾರಿನಲ್ಲಿ ಬಂದ ಕುಟುಂಬ ನದಿಗೆ ಜಿಗಿದಿದೆ. 34 ವರ್ಷದ ಕೊವ್ವೂರಿ ಸೌಜನ್ಯ, ಆಕೆಯ ತಂದೆ ಕೇಕಿನಾಡ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್ 61 ವರ್ಷದ ತಿಳ್ಳಪುಡಿ ನೂಕರಾಜು ಹಾಗೂ ತಾಯಿ 59 ವರ್ಷದ ತಿಳ್ಳಪುಡಿ ಮೀನಾ ಸಾವು ಕಂಡಿದ್ದಾರೆ.
ಸೌಜನ್ಯ ಅವರ 10 ವರ್ಷದ ಮಗ ರಿಯಾನ್ಶ್ ಕಾರ್ತಿಕೇಯ ರೆಡ್ಡಿ ಸೇತುವೆಯ ಕಬ್ಬಿಣದ ಗ್ರಿಲ್ನಲ್ಲಿ ಸಿಲುಕಿಕೊಂಡು ನಂತರ ನೀರಿಗೆ ಬಿದ್ದಿದ್ದಾನೆ. ರಾತ್ರಿ 11:40ಕ್ಕೆ '112' ಮೀನುಗಾರರಿಂದ ತುರ್ತು ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದರು. ಇಬ್ಬರು ಮೀನುಗಾರರು ಬಾಲಕನನ್ನು ಪವಾಡಸದೃಶವಾಗಿ ಜೀವಂತವಾಗಿ ರಕ್ಷಣೆ ಮಾಡಿದರೆ, ಉಳಿದ ಮೂವರ ಮೃತದೇಹಗಳು ಕೊಚ್ಚಿಹೋಗಿದ್ದು, ನಂತರ ಪತ್ತೆಯಾಗಿದ್ದವು.
ತನಿಖೆ ವೇಳೆ ಸಿಕ್ಕ ಡೆತ್ ನೋಟ್ಗಳು ಮತ್ತು ಎಂಜಿನಿಯರ್ಗಳ ವಾಟ್ಸಾಪ್ ಗ್ರೂಪ್ಗೆ ನೂಕರಾಜು ಕಳುಹಿಸಿದ್ದ ಸಂದೇಶಗಳು ಈ ಮಹಾ ಸಂಚನ್ನು ಬಯಲು ಮಾಡಿವೆ. ಸೌಜನ್ಯ ಅವರ ಪತಿ ಜಗದೀಶ್ ರೆಡ್ಡಿ ಕಳೆದ ಜುಲೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಶೂಟಿಂಗ್ ಕೋಚ್ ಸಾಧಿಕ್ ಖಾನ್ ಕೆಮಿಕಲ್ ವಿಷ ನೀಡಿ ತಮ್ಮ ಪತಿಯನ್ನು ಕೊಲೆ ಮಾಡಿದ್ದಾನೆ ಎಂದು ಸೌಜನ್ಯ ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ. ಪತಿಯ ಸಾವಿನ ನಂತರ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದ ಸಾಧಿಕ್ ಖಾನ್, ಇಡೀ ಕುಟುಂಬದ ಬ್ಯಾಂಕ್ ಖಾತೆ, ನಗದು ಹಾಗೂ ಆಭರಣಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ.
ಸಾದಿಕ್ ಖಾನ್ ಫೋನ್ನಲ್ಲಿ ಮಾತನಾಡುತ್ತಾ "ಇಡೀ ಆಸ್ತಿ ಸೌಜನ್ಯ ಹೆಸರಿಗೆ ವರ್ಗಾವಣೆಯಾದ ತಕ್ಷಣ, ಆಕೆಯನ್ನು ಮತ್ತು ಮಗನನ್ನು ಮಾರಿ ಆಸ್ತಿ ಕಬಳಿಸುತ್ತೇನೆ" ಎಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದಾಗಿ ತಾಯಿ ಮೀನಾ ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಸಾದಿಕ್ ಖಾನ್ ಅತ್ಯಂತ ಕ್ರೂರಿಯಾಗಿದ್ದು, ಸೌಜನ್ಯ ಹಾಗೂ ಮೊಮ್ಮಗನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಆತನ ಕ್ರೂರ ಮುಖ ನೋಡಲು ಸಾಧ್ಯವಾಗದೆ ಜೀವ ಕಳೆದುಕೊಳ್ಳುತ್ತಿದ್ದೇವೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.
ಘಟನೆ ಗಂಭೀರತೆ ಅರಿತ ಕಾಕಿನಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಬಿಂದು ಮಾಧವ್ ಅವರು ಅಡಿಷನಲ್ ಎಸ್ಪಿ ಡಾ. ಮಹಂತಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ಸಾದಿಕ್ ಖಾನ್ನನ್ನು ಉತ್ತರ ಪ್ರದೇಶದ ಮೀರತ್ನ ನೌಚಂಡಿ ಪೊಲೀಸ್ ಠಾಣೆ ಬಳಿ ಆಗಸ್ಟ್ 22ರ ಬೆಳಿಗ್ಗೆ 9 ಗಂಟೆಗೆ ವಿಶೇಷ ಪಡೆ ಬಂಧಿಸಿದೆ. ಮೀರತ್ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರಂಟ್ ಪಡೆದು ಆತನನ್ನು ಕಾಕಿನಾಡಕ್ಕೆ ಕರೆತರಲಾಗಿದ್ದು, ಮೊಬೈಲ್ ಕರೆಗಳ ವಿವರ, ಬ್ಯಾಂಕ್ ವಹಿವಾಟು, ಸಿಸಿಟಿವಿ ದೃಶ್ಯಾವಳಿ ಹಾಗೂ ಸೌಜನ್ಯ ಪತಿಯ ವೈದ್ಯಕೀಯ ವರದಿಗಳನ್ನು ಪೊಲೀಸರು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಪತಿ ಜಗದೀಶ್ ರೆಡ್ಡಿಗೆ ವಿಷವಿಕ್ಕಿ ಕೊಲೆ ಮಾಡಿರುವ ಆರೋಪ, ಹಣಕಾಸಿನ ವಂಚನೆ ಹಾಗೂ ಮತಾಂತರಕ್ಕೆ ಯತ್ನಿಸಲಾಗಿದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ