ಅಮಿತ್‌ ಶಾ 3 ಸಂಧಾನ ಸೂತ್ರ: ಮಹಾರಾಷ್ಟ್ರಕ್ಕೆ ಕ್ಲಾಸ್‌ ತೆಗೆದುಕೊಂಡ ಕೆಂದ್ರ ಗೃಹ ಸಚಿವರು

By Kannadaprabha NewsFirst Published Dec 15, 2022, 7:49 AM IST
Highlights

ಅಮಿತ್‌ ಶಾ ಅವರ ಸಲಹೆಯನ್ನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೂ ಒಪ್ಪಿಕೊಂಡಿದ್ದು, ಗಡಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್‌ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.

ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರ (Maharashtra) ನಡುವೆ ಕಳೆದ ಕೆಲ ದಿನಗಳಿಂದ ಭುಗಿಲೆದ್ದಿರುವ ಗಡಿ ವಿವಾದ (Border Crisis) ಪರಿಹಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ನೇರ ಮಧ್ಯಪ್ರವೇಶ ಮಾಡಿದ್ದು, ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು (Chief MInisters) ದೆಹಲಿಗೆ ಕರೆಸಿಕೊಂಡು ಬುಧವಾರ ಅವರು ಗಡಿ ವಿಚಾರದಲ್ಲಿ ಸಂಯಮದ ಪಾಠ ಮಾಡಿದ್ದಾರೆ. ಸದ್ಯ ವಿವಾದ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ (Supreme Court) ಈ ಕುರಿತ ಭಿನ್ನಾಭಿಪ್ರಾಯ ತಾರಕಕ್ಕೇರದಂತೆ ನೋಡಿಕೊಳ್ಳಲು ಎರಡೂ ರಾಜ್ಯಗಳ ತಲಾ ಮೂವರು ಸಚಿವರನ್ನೊಳಗೊಂಡ ಆರು ಮಂದಿಯ ಸಮಿತಿಯೊಂದನ್ನು ರಚಿಸುವಂತೆ ಸಲಹೆ ನೀಡಿದ್ದಾರೆ. ಅಮಿತ್‌ ಶಾ ಅವರ ಸಲಹೆಯನ್ನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೂ ಒಪ್ಪಿಕೊಂಡಿದ್ದು, ಗಡಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್‌ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.

ಕರ್ನಾಟಕದ ಗಡಿಭಾಗದ 800ಕ್ಕೂ ಹೆಚ್ಚು ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸುತ್ತಾ ಬಂದಿರುವ ಮಹಾರಾಷ್ಟ್ರವು ಇತ್ತೀಚೆಗೆ ತನ್ನಿಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸಿಕೊಡುವ ಉದ್ಧಟತನ ಪ್ರದರ್ಶಿಸಿತ್ತು. ಇದರ ಬೆನ್ನಲ್ಲೇ ಎರಡೂ ರಾಜ್ಯಗಳಲ್ಲಿ ಗಡಿ ಸಂಘರ್ಷ ಭುಗಿಲೆದ್ದು ಕೆಲಕಾಲ ಉಭಯ ರಾಜ್ಯಗಳ ನಡುವೆ ಕೆಲ ಕಾಲ ಸಾರಿಗೆ ಬಸ್‌ಗಳ ಸಂಚಾರವನ್ನೂ ಬಂದ್‌ ಮಾಡಲಾಗಿತ್ತು. ಗಡಿ ವಿಚಾರವಾಗಿ ಎರಡೂ ರಾಜ್ಯಗಳಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ದೆಹಲಿಗೆ ಕರೆಸಿಕೊಂಡ ಅಮಿತ್‌ ಶಾ ಬುಧವಾರ ರಾತ್ರಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗಡಿ ವಿವಾದವನ್ನು ರಾಜಕೀಯ ಚರ್ಚಾ ವಿಚಾರವನ್ನಾಗಿ ಮಾಡಿಕೊಳ್ಳದೆ ಸಂಯಮ ಕಾಯ್ದುಕೊಳ್ಳಲು ತಾಕೀತು ಮಾಡಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರ ಬೆದರಿಕೆ; ಕರ್ನಾಟಕ ಸೇರಲ್ಲ ಎಂದ 10 ಮಹಾ ಗ್ರಾಮಗಳು!

3 ಸೂತ್ರಗಳೇನು?
1. ಎರಡೂ ರಾಜ್ಯದಲ್ಲಿ ತಲಾ ಮೂವರು ಸಚಿವರ ಸಮನ್ವಯ ಸಮಿತಿ ರಚನೆ
2. ಗಡಿ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ತಲಾ ಒಬ್ಬ ಐಪಿಎಸ್‌ ಅಧಿಕಾರಿ ನೇಮಕ
3. ಸುಪ್ರೀಂಕೋರ್ಟ್‌ ತೀರ್ಪು ಬರುವವರೆಗೂ ರಾಜಕೀಯ ಹೇಳಿಕೆ ನೀಡಬಾರದು

ಗಡಿ ವಿವಾದದಲ್ಲಿ ಶಾಂತಿ ಕಾಪಾಡಲು ಅಮಿತ್‌ ಶಾ ಅವರು ಉಭಯ ರಾಜ್ಯಗಳಿಗೆ ಮೂರು ಸಂಧಾನ ಸೂತ್ರ ಮುಂದಿಟ್ಟಿದ್ದಾರೆ. ಎರಡೂ ರಾಜ್ಯಗಳ ತಲಾ ಮೂವರು ಮಂತ್ರಿಗಳಿರುವ ಒಟ್ಟು ಆರು ಮಂದಿಯ ಸಮನ್ವಯ ಸಮಿತಿ ರಚಿಸಬೇಕು. ಇದೊಂದು ತಟಸ್ಥ ಸಮಿತಿ. ಈ ಸಮಿತಿ ಜತೆಗೆ ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಉಭಯ ರಾಜ್ಯಗಳು ತಲಾ ಒಬ್ಬೊಬ್ಬ ಐಪಿಎಸ್‌ ಅಧಿಕಾರಿಯನ್ನು ನೇಮಿಸಬೇಕು. ಗಡಿ ವಿವಾದವನ್ನು ರಾಜಕೀಯಕ್ಕೆ ಎಳೆತರುವುದನ್ನು ನಿಲ್ಲಿಸಬೇಕು ಎಂದು ಶಾ ಸೂಚಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ, ಶಿಂಧೆ ಜೊತೆಯಲ್ಲಿ ಶಾ ಸುದ್ದಿಗೋಷ್ಠಿ, ರಾಜಕೀಯ ಬೇಡ, ಕೋರ್ಟ್ ನಿರ್ಧಾರದ ಬಳಿಕ ಕ್ರಮ!

ಸದ್ಯ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಕೋರ್ಚ್‌ ಆದೇಶ ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಗಡಿ ವಿವಾದವನ್ನು ಎರಡೂ ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಬೇಕಿದೆ. ವಿವಾದದಿಂದಾಗಿ ಎರಡೂ ರಾಜ್ಯಗಳ ನಾಗರಿಕರಿಗೆ, ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗಬಾರದು. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ನಾಯಕರು ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಭೆ ನಂತರ ಅಮಿತ್‌ ಶಾ ಪ್ರತಿಕ್ರಿಯಿಸಿದರು.

ನಕಲಿ ಟ್ವಿಟ್ಟರ್‌ನಿಂದ ಸಮಸ್ಯೆ ಸೃಷ್ಟಿ: ನಕಲಿ ಟ್ವೀಟ್‌ಗಳಿಂದಾಗಿಯೇ ಗಡಿವಿವಾದ ಭುಗಿಲೆದ್ದಿದೆ ಎಂದು ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿ ನಕಲಿ ಟ್ವಿಟ್ಟರ್‌ ಖಾತೆಗಳಿಂದ ಟ್ವೀಚ್‌ ಮಾಡಲಾಗಿದೆ. ಪ್ರಮುಖ ನಾಯಕರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ವಿವಾತಾತ್ಮಕ ಟ್ವೀಟ್‌ಗಳನ್ನು ಮಾಡಲಾಗಿದೆ. ಇದರಿಂದ ಪರಿಸ್ಥಿತಿ ಗಂಭೀರವಾಗಿದೆ. ನಕಲಿ ಟ್ವಿಟ್ಟರ್‌ ಖಾತೆಗಳ ವಿರುದ್ಧ ದೂರು ಬಂದಿದ್ದು, ಈ ಸಂಬಂಧ ದೂರು ದಾಖಲು ಮಾಡಲಾಗುವುದು ಎಂದು ಶಾ ಅವರು ತಿಳಿಸಿದರು.

ಇದನ್ನೂ ಓದಿ: ತಾರಕಕ್ಕೇರಿದ ಗಡಿ ಸಮಸ್ಯೆ, ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ!

ಚರ್ಚೆ ನಿಲ್ಲಿಸಿ
ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಕೋರ್ಟ್‌ ಆದೇಶ ಬರುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ವಿವಾದವನ್ನು ಎರಡೂ ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಬೇಕಿದೆ.

ಮಹಾರಾಷ್ಟ್ರಕ್ಕೆ ಅಮಿತ್‌ ಶಾ ಕ್ಲಾಸ್‌
ಗಡಿ ವಿವಾದದ ಸಂಬಂಧ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರ ಸರ್ಕಾರದ ವರ್ತನೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಸಮನ್ವಯ ಸಚಿವರನ್ನು ಬೆಳಗಾವಿಗೆ ಕಳುಹಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಅಮಿತ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಹೀಗಾದರೆ ಅಲ್ಲಿನ ಕಾನೂನು ಸುವ್ಯವಸ್ಥೆ ಏನಾಗಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಸಿಎಂ ಬೊಮ್ಮಾಯಿ, ಶಿಂಧೆ ಜೊತೆಯಲ್ಲಿ ಶಾ ಸುದ್ದಿಗೋಷ್ಠಿ, ರಾಜಕೀಯ ಬೇಡ, ಕೋರ್ಟ್ ನಿರ್ಧಾರದ ಬಳಿಕ ಕ್ರಮ!

click me!