*ನನಗೆ ಬುಲೆಟ್ ಹಾರಿಸಿದವರ ಮೇಳೆ ಬ್ಯಾಲೆಟ್ ಮೂಲಕ ಉತ್ತರ
*ಕಠಿಣ ಯುಎಪಿಎ ಅಡಿ ಕೇಸು ದಾಖಲಿಸಲು ಸಂಸದನ ಆಗ್ರಹ
*ಒವೈಸಿ ‘ಧರ್ಮದ್ವೇಷದ ಮಾತಿನಿಂದ’ ನೋವಾಗಿ ದಾಳಿ: ಆರೋಪಿ
ನವದೆಹಲಿ (ಫೆ. 05): ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಅವರಿಗೆ ಕೇಂದ್ರ ಸರ್ಕಾರ ಝಡ್ ಕ್ಯಾಟಗರಿ (Z Security) ಭದ್ರತೆ ಒದಗಿಸಿದ್ದು, ಸಿಆರ್ಪಿಎಫ್ ಕಮಾಂಡೋಗಳು 24 ಗಂಟೆಯೂ ರಕ್ಷಣೆ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಕೇಂದ್ರ ಸರ್ಕಾರ ತಮಗೆ ನೀಡಿದ ಝಡ್ ಕ್ಯಾಟಗರಿ ಭದ್ರತೆಯನ್ನು ಓವೈಸಿ ಅವರು ತಿರಸ್ಕರಿಸಿದ್ದಾರೆ.
ಸರ್ಕಾರ ಭದ್ರತೆ ಒದಗಿಸುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಶುಕ್ರವಾರ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಅವರು, ‘ನನಗೆ ಝಡ್ ಭದ್ರತೆ ಬೇಕಾಗಿಲ್ಲ. ಆದರೆ ನನ್ನ ಮೇಲೆ ದಾಳಿಗೆ ಯತ್ನಿಸಿದವರು ಬುಲೆಟ್ ಮೇಲೆ ನಂಬಿಕೆ ಇರಿಸಿದ್ದಾರೆ. ಅವರಿಗೆ ಬ್ಯಾಲೆಟ್ ಮೂಲಕ ಉತ್ತರಪ್ರದೇಶ ಜನರು ಉತ್ತರಿಸಲಿದ್ದಾರೆ. ತೀವ್ರವಾದಿ ಮತ್ತು ದ್ವೇಷ ಹರಡುತ್ತಿರುವವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಕೇಸ್ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ: UP Elections 2022: ಉತ್ತರಪ್ರದೇಶದಲ್ಲಿ ಹಿಂದುತ್ವಕ್ಕೆ ಜೈ ಎಂದ ಓವೈಸಿ : 4 ಹಿಂದೂ ಅಭ್ಯರ್ಥಿಗಳಿಗೆ ಟಿಕೇಟ್!
ಗುರುವಾರ ಉತ್ತರ ಪ್ರದೇಶದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಾಪುರ ಟೋಲ್ ಪ್ಲಾಜಾ ಬಳಿ ಓವೈಸಿ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆ ಬಗ್ಗೆ ವರದಿ ಪಡೆದು ಪರಿಶೀಲಿಸಿದ ಕೇಂದ್ರ ಸರ್ಕಾರ ಝಡ್ ಕೆಟಗರಿ ಭದ್ರತೆ ಒದಗಿಸಲು ನಿರ್ಧರಿಸಿದೆ. 16-20 ಶಸ್ತ್ರ ಸಜ್ಜಿತ ಕಮಾಂಡೋಗಳು ರಾತ್ರಿಹಗಲು ಭದ್ರತೆ ನೀಡಲಿದ್ದಾರೆ. ಅಲ್ಲದೆ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಬೆಂಗಾವಲು ಮತ್ತು ಪೈಲಟ್ ವಾಹನವನ್ನು ನೀಡಲಾಗುತ್ತದೆ ಎಂದು ಮೂಲಗಳು ಹೇಳಿದ್ದವು. ಝಡ್ ಎಂಬುದು ಜೀವ ಬೆದರಿಕೆ ಹೊಂದಿರುವ ವ್ಯಕ್ತಿ ನೀಡಲಾಗುವ ಅತ್ಯುನ್ನತ ಭದ್ರತೆಯಾಗಿದೆ.
ಒವೈಸಿ ‘ಧರ್ಮದ್ವೇಷದ ಮಾತಿನಿಂದ’ ನೋವಾಗಿ ದಾಳಿ: ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು,‘ಓವೈಸಿ ಒಂದು ಧರ್ಮದ ವಿರುದ್ಧ ಮಾತನಾಡಿದ್ದು ನೋವುಂಟು ಮಾಡಿತ್ತು. ಹಾಗಾಗಿ ದಾಳಿ ನಡೆಸಿದೆವು’ ಎಂದು ಹೇಳಿದ್ದಾರೆ
ಆರೋಪಿಗಳ ಪೈಕಿ ಓರ್ವ ನೋಯ್ಡಾ ನಿವಾಸಿ ಸಚಿನ್ ವಿರುದ್ಧ ಈ ಹಿಂದೆಯೇ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿತ್ತು. ಈತ ಕಾನೂನು ಪದವಿ ಓದಿದ್ದಾಗಿ ತಿಳಿಸಿದ್ದಾನೆ. ಅಲ್ಲದೆ ಫೇಸ್ಬುಕ್ನಲ್ಲಿ ಹಿಂದೂ ಬಲಪಂಥೀಯ ಕಾರ್ಯಕರ್ತ ಎಂದು ಬರೆದುಕೊಂಡಿದ್ದಾನೆ. ಇನ್ನೋರ್ವ ಸಹರಾಂಪುರದ ಸುಭಾಮ್. ಈತನ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ.ಪೊಲೀಸರು ಆರೋಪಿಗಳಿಂದ ದೇಶೀ ಬಂದೂಕು ವಶಪಡಿಸಿಕೊಂಡಿದ್ದು, ಇದರ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೋದಿ ವಿರುದ್ಧ ಅಸಾದುದ್ದೀನ್ ವಾಗ್ದಾಳಿ: ಮುಸ್ಲಿಂ ಸಹೋದರಿಯರನ್ನು ಸಹೋದರಿಯರಂತೆ ಪರಿಗಣಿಸುವುದಿಲ್ಲ!
ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ: ದೇಶ ಮತ್ತು ರಾಜ್ಯದಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವವರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೌನ ವಹಿಸುತ್ತಿರುವುದನ್ನು ಖಂಡಿಸಿ ಎಐಎಂಐಎಂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಐಎಂಐಎಂ ಪಕ್ಷದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿವೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೊಲೆ, ದೌರ್ಜನ್ಯ ಹಾಗೂ ಕೋಮು ದ್ವೇಷ ಪ್ರಚೋದಿಸುವ ಘಟನೆಗಳು ನಿರಂತರ ನಡೆಯುತ್ತಿವೆ. ಆದರೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಆದ್ದರಿಂದ ಕೋಮು ದ್ವೇಷ ಪ್ರಚೋದಿಸುವ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Women Marriage Age: '18ನೇ ವಯಸ್ಸಿಗೆ ಪ್ರಧಾನಿ ಆಯ್ಕೆ ಮಾಡಬಹುದು, ಆದರೆ ಮದುವೆಯಾಗಬಾರದು'
ಉತ್ತರ ಪ್ರದೇಶದ ನೇಹರ್ಸಿ ಟೋಲ್ಗೇಟ್ ಬಳಿ ನಾಲ್ಕು ಜನ ದುಷ್ಕರ್ಮಿಗಳು ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಮೇಲೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆದಿದೆ. ಈ ಪ್ರಕರಣದ ಇಬ್ಬರು ಆರೋಪಿಗಳ ಬಂಧನವಾಗಿದ್ದು, ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ಬ್ಯಾರಿಸ್ಟರ್ ಅಸಾವುದ್ದೀನ ಓವೈಸಿ ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ವಿಜಯ ಎಂ. ಗುಂಟ್ರಾಳ್, ಇಮ್ತಿಯಾಜ್ ಬಿಳಿಪಸಾರ, ರಘು ಬಳ್ಳಾರಿ, ರೋಹಿತ ಕನಮಕ್ಕಲ, ಅಮೀದ ಬೇಪಾರಿ, ಹಾಶಮ ಮಕಾನದಾರ, ಫೈಯಾಜ್ ವಡ್ಡೋ, ಇಜಾಜ್ ಮಿರ್ಜಿ, ಮಂಜುನಾಥ ನಾಗನೂರ, ವೆಂಕಟೇಶ ಪಾಲವಾಯಿ, ಕೃಷ್ಣಾ ಬಳ್ಳಾರಿ, ಬಾಲಾಜಿ ಯಮನಾಳ, ನಾಗರಾಜ ದೊಡ್ಡಮನಿ ಸೇರಿದಂತೆ ಇತರರು ಇದ್ದರು.