
ನವದೆಹಲಿ (ಆ.8):ಸದನದಲ್ಲಿ ಮಂಡಿಸಿದ ಪ್ರಸ್ತಾವನೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ನಕಲಿ ಸಹಿಗಳನ್ನು ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ದೆಹಲಿ ಸೇವೆಗಳ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಅಂದರೆ ಆಗಸ್ಟ್ 7 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆಪ್ ಸಂಸದ ಚಡ್ಡಾ ಅವರು ದೆಹಲಿ ಸೇವಾ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದರು. ಈ ಕುರಿತು ಸೋಮವಾರ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು, ಈ ಪ್ರಸ್ತಾವನೆಯನ್ನು ಮಂಡಿಸುವಾಗ ಚಡ್ಡಾ ಅವರು 5 ಸಂಸದರ ನಕಲಿ ಸಹಿಯನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ರಾಘವ್ ಚಡ್ಡಾ ಆರೋಪಗಳನ್ನು ತಳ್ಳಿಹಾಕಿದ್ದು, ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಗೆ ಸಹಿ ಅಗತ್ಯವಿಲ್ಲ. ಈ ಪ್ರಸ್ತಾವನೆಗೆ ಸಹಿ ಇರಬೇಕು ಎನ್ನುವ ಯಾವುದೇ ನಿಯಮವಿಲ್ಲ ಎಂದಿದ್ದಾರೆ.
ಈ ಪ್ರಸ್ತಾವನೆಗೆ ತಾವು ಸಹಿ ಹಾಕಿಲ್ಲ ಎಂದು ಇಬ್ಬರು ಸದಸ್ಯರು ಸದನದಲ್ಲಿಯೇ ಹೇಳುತ್ತಿದ್ದಾರೆ. ಇವರ ಹೇಳಿಕೆಯನ್ನು ದಾಖಲಿಸಿಕೊಂಡು ರಾಜ್ಯಸಭಾ ಕಾರ್ಯಾಲಯ ತನಿಖೆ ನಡೆಸಬೇಕು ಎಂದಿದ್ದಾರೆ. ಈ ಕುರಿತು ಉಪಸಭಾಪತಿ ಹರಿವಂಶ್ ಮಾತನಾಡಿದ್ದು ಈಗಾಗಲೇ ನಾಲ್ವರು ಸದಸ್ಯರು ನನಗೆ ದೂರು ನೀಡಿದ್ದಾರೆ. ಈ ಕುರಿತಾಗಿ ಮಂಗಳವಾರ ದೂರು ಬಂದಿದೆ. ದೆಹಲಿ ಸೇವಾ ಮಸೂದೆಯಲ್ಲಿ ಮಂಡಿಸಲಾದ ನಿರ್ಣಯದಲ್ಲಿ 5 ಸಂಸದರ ಹೆಸರನ್ನು ಹಾಕಲಾಗಿದೆ. ಇವರಲ್ಲಿ ನರ್ಹಾನಿ ಅಮೀನ್ (ಬಿಜೆಪಿ), ಸುಧಾಂಶು ತ್ರಿವೇದಿ (ಬಿಜೆಪಿ), ಫಾಂಗ್ನೋನ್ ಕೊನ್ಯಾಕ್ (ಬಿಜೆಪಿ), ಸಸ್ಮಿತ್ ಪಾತ್ರ (ಬಿಜು ಜನತಾ ದಳ) ಮತ್ತು ಕೆ. ತಂಬಿದುರೈ (ಎಐಎಡಿಎಂಕೆ) ಸೇರಿದ್ದಾರೆ. ಮೂಲಗಳ ಪ್ರಕಾರ, ಈ ಐವರು ರಾಘವ್ ಚಡ್ಡಾ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆಯ ಪ್ರತ್ಯೇಕ ನೋಟಿಸ್ ನೀಡಿದ್ದಾರೆ.
ವಿಶೇಷಾಧಿಕಾರದ ಉಲ್ಲಂಘನೆ ಎಂದರೇನು: ಸಂಸತ್ತಿನ ಸದಸ್ಯರ ಹೆಸರನ್ನು ಅವರ ಒಪ್ಪಿಗೆಯಿಲ್ಲದೆ ತೆಗೆದುಕೊಳ್ಳುವುದು ಸಂಸತ್ತಿನ ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ. ಇದಕ್ಕಾಗಿ ಸಂಸದರು ವಿಶೇಷಾಧಿಕಾರದ ಉಲ್ಲಂಘನೆಯ ನೋಟಿಸ್ ನೀಡಬಹುದು. ಇದನ್ನು ಸಂಸತ್ತಿನ ಯಾವುದೇ ಸದಸ್ಯರು ಬೇಕಾದರೂ ನೀಡಬಹುದು. ಸದನದಲ್ಲಿ ಸುಳ್ಳು ಸಂಗತಿಗಳನ್ನು ಮಂಡಿಸಲಾಗಿದೆ ಎಂದು ಸಂಸದರು ಭಾವಿಸಿದಾಗ, ಆ ಸದಸ್ಯರು ಸದನದಲ್ಲಿ ವಿಶೇಷ ಹಕ್ಕುಗಳ ಉಲ್ಲಂಘನೆಯನ್ನು ಮಂಡಿಸುತ್ತಾರೆ.
ಬಿಜು ಜನತಾ ದಳದ ಸಸ್ಮಿತ್ ಪಾತ್ರಾ, 'ನಾನು ವಿಶೇಷಾಧಿಕಾರದ ಪ್ರಸ್ತಾವನೆಗೆ ನೋಟಿಸ್ ನೀಡಿದ್ದೇನೆ. ದಿಲ್ಲಿ ಸೇವೆಗಳ (ತಿದ್ದುಪಡಿ) ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ಪ್ರಸ್ತಾವನೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ರಾಘವ್ ಚಡ್ಡಾ ನನ್ನ ಹೆಸರನ್ನು ಅನುಮತಿಯಿಲ್ಲದೇ ಸೇರಿಸಿದ್ದಾರೆ. ಪ್ರಸ್ತಾವನೆ ಮಂಡನೆಯಲ್ಲಿ ಐದರಿಂದ ಆರು ಸಂಸದರ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆಯಾಗಬೇಕೆಂದು ನಾನು ಬಯಸುತ್ತೇನೆ. ವಿಶೇಷಾಧಿಕಾರ ಸಮಿತಿಯು ಈ ವಿಷಯವನ್ನು ಪರಿಶೀಲಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಬಿಜೆಡಿ ಬೆಂಬಲಿಸಿತ್ತು. ಇದಲ್ಲದೆ, ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷವೂ ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಿದವು.
ಮದುವೆಗೆ ಮುನ್ನವೇ ಶುರುವಾಯ್ತಾ ಅಪಶಕುನ? ಆಪ್ ಸಂಸದ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ!
ಏನಿದು ಪ್ರಕರಣ?: ದೆಹಲಿ ಸೇವೆಗಳ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆ ರಾಜ್ಯಸಭೆಯಲ್ಲಿ ಪೂರ್ಣಗೊಂಡಾಗ ಉಪಸಭಾಪತಿ ಹರಿವಂಶ್ ವಿರೋಧ ಪಕ್ಷದ ಸದಸ್ಯರು ತಂದ ತಿದ್ದುಪಡಿಯನ್ನು ಅಂಗೀಕರಿಸಲು ಮುಂದಾದರು. ಇದಾದ ನಂತರ ಆಪ್ ಸಂಸದ ರಾಘವ್ ಚಡ್ಡಾ ಅವರ ಪ್ರಸ್ತಾವನೆ ಬಂದಿತ್ತು. ಅವರು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲು ಪ್ರಸ್ತಾಪಿಸಿದರು. ಅದರಲ್ಲಿ ಸಮಿತಿಯ ಸದಸ್ಯರ ಹೆಸರೂ ಕೂಡ ಇದ್ದವು.
ಚಾರ್ಟರ್ಡ್ ಅಕೌಂಟೆಂಟ್ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ನೆಟ್ ವರ್ತ್ ಎಷ್ಟು?
ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಅಮಿತ್ ಶಾ, ಇಬ್ಬರು ಸದಸ್ಯರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಪ್ರಸ್ತಾಪದಲ್ಲಿ ಸೇರಿಸಲಾಗಿದೆ ಎಂದು ಹೇಳಿದರು. ಪ್ರಸ್ತಾವನೆಯಲ್ಲಿ ಆ ಸದಸ್ಯರ ಸಹಿಯೂ ಇಲ್ಲ. ಇದು ತನಿಖೆಯ ವಿಷಯವಾಗಿದೆ ಎಂದು ಶಾ ಹೇಳಿದ್ದಾರೆ. ಈಗ ಇದು ಕೇವಲ ದೆಹಲಿಯ ಮೋಸದ ವಿಷಯವಲ್ಲ, ಆದರೆ ಸದನದ ಒಳಗಿನ ವಂಚನೆಯ ವಿಷಯವಾಗಿದೆ. ಇದು ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ. ಈ ವಿಷಯವನ್ನು ವಿಶೇಷಾಧಿಕಾರಗಳ ಸಮಿತಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ