UP Elections: ಚುನಾವಣಾ ಅಖಾಡದಲ್ಲಿ ಬಿರುಗಾಳಿ ಎಬ್ಬಿಸಿದ 'ಮದುವೆ' ಫೋಟೋ!

By Suvarna NewsFirst Published Dec 21, 2021, 2:19 PM IST
Highlights
  • ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಒಟ್ಟಿಗೆ ಕುಳಿತಿರುವ ಫೋಟೋ 
  • ಚುನಾವಣೆ ಘೋಷಿತ ಉತ್ತರಪ್ರದೇಶದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗ್ತಿದೆ ಈ ಒಂದು ಫೋಟೋ 
  • ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ತೆಗೆದ ಫೋಟೋ

ಲಖ್ನೋ(ಡಿ. 21): ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರೊಂದಿಗೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ (Mulayam Singh Yadav)ಜೊತೆಗೆ ಕುಳಿತಿರುವ ಫೋಟೋ ಒಂದು ಈಗ ಚುನಾವಣೆ ಸನ್ನೀಹಿತವಾಗಿರುವ ಉತ್ತರ ಪ್ರದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ.  ಮುಲಾಯಂ ಸಿಂಗ್ ಯಾದವ್ ಮತ್ತು ಮೋಹನ್ ಭಾಗವತ್ ಅವರು ಸೋಮವಾರ ದೆಹಲಿಯಲ್ಲಿ ನಡೆದ  ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ವಿವಾಹ ಆರತಕ್ಷತೆಯಲ್ಲಿ ಭೇಟಿಯಾಗಿದ್ದರು. 

ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಅವರ ಪುತ್ರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Akhilesh Yadav) ಅವರ ಸಹಾಯಕರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಎರಡು ದಿನಗಳ ನಂತರ ಮುಲಾಯಂ ಸಿಂಗ್‌ ಹಾಗೂ ಮೋಹನ್‌ ಭಾಗವತ್‌ ಜೊತೆಗಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿದ್ದು, ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. 

ಬಿಜೆಪಿ ಸರ್ಕಾರದ ಪರ ಮತ ಚಲಾಯಿಸಿದ ಮುಲಾಯಂ ಸಿಂಗ್!

ತಮ್ಮ ಹುಟ್ಟು ಹಬ್ಬದ ಹಿನ್ನೆಲೆ ಕೇಂದ್ರ ಸಚಿವ ಅರ್ಜುನ್ ಮೇಘವಾಲ್ (Arjun Meghwal) ಅವರು ಮೋಹನ್ ಭಾಗವತ್ ಅವರ ಆಶೀರ್ವಾದವನ್ನು ಬಯಸಿ ಒಂದು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ಈ ಫೋಟೋದಲ್ಲಿ ಮುಲಾಯಂ ಸಿಂಗ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರು ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ. ಈ ಫೋಟೋವನ್ನು ಪೋಸ್ಟ್‌ ಮಾಡಿದ ಒಂದು ಗಂಟೆಯ ಬಳಿಕ ಕಾಂಗ್ರೆಸ್ ಕೂಡ ಈ ಫೋಟೋವನ್ನು ಶೇರ್ ಮಾಡಿದ್ದು, ಹೊಸ ಎಸ್‌ಪಿ ಪದದಲ್ಲಿರುವ ಎಸ್‌ ಎಂದರೆ ಸಂಘವಾದಿ ಪಕ್ಷ ಎಂದು ಅರ್ಥವೇ ಎಂದು ಹಿಂದಿ ಭಾಷೆಯಲ್ಲಿ ಕೇಳುವ ಮೂಲಕ ಸಮಾಜವಾದಿ ಪಕ್ಷಕ್ಕೆ ಟ್ವಿಟ್ಟರ್‌ನಲ್ಲಿ ತಿವಿದಿದೆ. 

"नई सपा" में 'स' का मतलब 'संघवाद' है? pic.twitter.com/7qlUsDP9X9

— UP Congress (@INCUttarPradesh)

 

तस्वीर बहुत कुछ बोलती है। pic.twitter.com/LYyaIbUco6

— BJP Uttar Pradesh (@BJP4UP)

 

ನಂತರ ಉತ್ತರಪ್ರದೇಶ ಬಿಜೆಪಿ ನಿರ್ವಹಿಸುವ ಟ್ವಿಟ್ಟರ್‌ ಖಾತೆಯಿಂದಲೂ ಇದೇ ಫೋಟೋ ಪೋಸ್ಟ್‌ ಆಗಿದೆ.  ಕೇವಲ ಒಂದು ಚಿತ್ರ ತುಂಬಾ ವಿಚಾರಗಳನ್ನು ತಿಳಿಸುತ್ತದೆ ಎಂದು ಬಿಜೆಪಿ ಈ ಪೋಸ್ಟ್‌ನಲ್ಲಿ ಹೇಳಿದೆ.  ಇತ್ತ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi) ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ( NV Ramana) ಸೇರಿದಂತೆ ಅನೇಕ ದೊಡ್ಡ ಅತಿಥಿಗಳು ಕಾಣಿಸಿಕೊಂಡಿದ್ದರೂ, ಸಹ ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶ ಚುನಾವಣೆಯ ಕಾವು ಈಗಲೇ ಏರಿರುವುದರಿಂದ ಅಲ್ಲಿ ಹಲವು ಪಕ್ಷಗಳ ಪ್ರಚಾರ ಕೂಡ ಭರದಿಂದ ಸಾಗಿದ್ದು, ಈ ನಡುವೆ ಪರಸ್ಪರ ವೈರುಧ್ಯ ಸಿದ್ಧಾಂತಗಳನ್ನು ಹೊಂದಿರುವ ಈ ಉಭಯ ನಾಯಕರು ಜೊತೆಗಿರುವ ಫೋಟೋ ಸಂಚಲನಕ್ಕೆ ಕಾರಣವಾಗಿದೆ. 

ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಆರ್‌ಎಸ್‌ಎಸ್‌ ನಿಯಂತ್ರಣವಿಲ್ಲ: ಮೋಹನ್‌ ಭಾಗವತ್‌

ಇತ್ತ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರಿಂದ ಈ ಬಾರಿ ಕಠಿಣ ಸವಾಲು ಎದುರಾಗಿದೆ. ಎರಡು ಪಕ್ಷಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. 

click me!