ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

Published : Feb 02, 2024, 08:26 AM IST
ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ಸಾರಾಂಶ

ಪ್ರತಿವರ್ಷ ದೇಶದಲ್ಲಿ 80 ಸಾವಿರಕ್ಕೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ (ಸರ್ವಿಕಲ್‌ ಕ್ಯಾನ್ಸರ್‌)ಗೆ ಬಲಿಯಾಗುತ್ತಿದ್ದು, ಇದರ ತಡೆಗೆ 9 ರಿಂದ 14 ವರ್ಷದೊಳಗಿನ ಬಾಲಕಿಯರು ಲಸಿಕೆ ಹಾಕಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಉತ್ತೇಜಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2024-25ನೇ ಸಾಲಿನ ಬಜೆಟ್‌ ಮಂಡನೆ ವೇಳೆ ತಿಳಿಸಿದರು.

ನವದೆಹಲಿ: ಗರ್ಭಕಂಠದ ಕ್ಯಾನ್ಸರ್‌ (ಸರ್ವಿಕಲ್‌ ಕ್ಯಾನ್ಸರ್‌) ತಡೆಗೆ 9 ರಿಂದ 14 ವರ್ಷದೊಳಗಿನ ಬಾಲಕಿಯರು ಲಸಿಕೆ ಹಾಕಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಉತ್ತೇಜಿಸಲಿದೆ ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ 2024-25ನೇ ಸಾಲಿನ ಬಜೆಟ್‌ ಮಂಡನೆ ವೇಳೆ ತಿಳಿಸಿದರು. ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್‌ ಪ್ರಕರಣಗಳ ಮೇಲೆ ಕೇಂದ್ರ ಸರ್ಕಾರವೂ ಕಣ್ಣಿಟ್ಟಿದ್ದು, ಎಲ್ಲಾ ರಾಜ್ಯ ಹಾಗೂ ವಿವಿಧ ಆರೋಗ್ಯ ಇಲಾಖೆಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ತಿಂಗಳು ತಿಳಿಸಿತ್ತು.

ಕಾಯಿಲೆಯ ಅಪಾಯ, ಹ್ಯೂಮನ್‌ ಪ್ಯಾಪಿಲೋಮಾವೈರಸ್‌ ವ್ಯಾಕ್ಸಿನ್‌(ಎಚ್‌ಪಿವಿ) ಲಸಿಕೆಯ ಒಂದು ಡೋಸ್‌ನ ಪರಿಣಾಮಕಾರಿತ್ವ, ಸಿಕ್ಕಿಂ ಸರ್ಕಾರವು ಅಲ್ಲಿನ ಮಹಿಳೆಯರಿಗೆ ಈ ಲಸಿಕೆಯನ್ನು ನೀಡಿ ಅದರಿಂದ ಆಗಿರುವ ಪ್ರಯೋಜನದ ವರದಿಯನ್ನು ಆಧರಿಸಿ, 2022ರ ಜೂನ್‌ನಲ್ಲಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಒಂದು ಡೋಸ್‌ ಎಚ್‌ಪಿವಿ ಲಸಿಕೆಯನ್ನು ನೀಡಲು ಶಿಫಾರಸು ಮಾಡಿದೆ ಎಂದು ಈ ವರ್ಷ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.

ಗರ್ಭಕೋಶದ ಬಾಯಿ ಕ್ಯಾನ್ಸರ್ ತಡೆಗೆ ಲಸಿಕೆ ಅಭಿಯಾನ

ಸದ್ಯ ಸೀರಂ ಇನ್ಸ್‌ಸ್ಟಿಟ್ಯೂಟ್‌ನ ಭಾರತದಲ್ಲೇ ತಯಾರಾಗುವ CERVAVAC ಹೆಸರಿನ ಲಸಿಕೆಯು ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 2000 ರು.ನಂತೆ ಲಭ್ಯವಿದೆ. ಇನ್ನು, ಅಮೆರಿಕ ಹಾಗೂ ಕೆನಡಾ ಮೂಲಗಳ ಸಂಸ್ಥೆಗಳ Gardasil 4 ಎನ್ನುವ ಲಸಿಕೆ ಪ್ರತಿ ಡೋಸ್‌ಗೆ 3927 ರು.ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 80000 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಈ ಪೈಕಿ 35000 ಮಂದಿ ಸಾವನ್ನಪ್ಪುತ್ತಿದ್ದಾರೆ. ವಿಶ್ವದ ಶೇ.16ರಷ್ಟು ಮಹಿಳೆಯರು ಭಾರತದಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಪತ್ತೆಯಾಗುತ್ತಿರುವ ಗರ್ಭಕಂಠ ಕ್ಯಾನ್ಸರ್‌ ಪ್ರಕರಣಗಳ ಪೈಕಿ ನಾಲ್ಕನೇ ಒಂದು ಭಾಗದಷ್ಟು ಪ್ರಕರಣಗಳು ಭಾರತದಲ್ಲೇ ಕಂಡು ಬರುತ್ತಿದ್ದು, ವಿಶ್ವದಲ್ಲಿ ಈ ಕಾಯಿಲೆಯಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಗಳ ಪೈಕಿ ಮೂರನೇ ಒಂದು ಭಾಗ, ಭಾರತದಲ್ಲೇ ಆಗುತ್ತಿದೆ.

ವಿಶ್ವ ಸುಂದರಿ ಸ್ಪರ್ಧಿಯನ್ನೂ ಬಿಡಲಿಲ್ಲ ಗರ್ಭಕಂಠದ ಕ್ಯಾನ್ಸರ್‌: 26ಕ್ಕೆ ಬದುಕಿಗೆ ಗುಡ್‌ಬೈ ಹೇಳಿದ ಶೇರಿಕಾ ಡಿ

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಲಸಿಕೆ ಪಡೆಯಲು ಉತ್ತೇಜಿಸುವುದಾಗಿ ಘೋಷಿಸಿರುವುದನ್ನು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅಡಾರ್‌ ಪೂನಾವಾಲ ಸ್ವಾಗತಿಸಿದ್ದು, ‘ಕೇಂದ್ರದ ಈ ಘೋಷಣೆಯನ್ನು ಸ್ವಾಗತಿಸುತ್ತೇನೆ. ಎಚ್‌ಪಿವಿ ತಡೆಯಲು ಎಲ್ಲರೂ ಪಣತೊಡೋಣ. ಎಲ್ಲರಿಗೂ ಸುಲಭವಾಗಿ ಲಸಿಕೆ ಸಿಗಲು ಶ್ರಮಿಸೋಣ’ ಎಂದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

National News Live: ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ - ಭೂಮಿಗೆ ಮರಳಿದ ಆರ್ಟೆಮಿಸ್ 2 ಗಗನಯಾತ್ರಿಗಳು; ನಾಸಾದ ಚಂದ್ರಯಾನ ದಿಗ್ವಿಜಯ!
West bengal assembly election 2026 ಬಂಗಾಳ ಚುನಾವಣೆಗೆ ಕರ್ನಾಟಕ ರೀತಿ ಬಿಜೆಪಿಯಿಂದ ಗ್ಯಾರೆಂಟಿ ಭರವಸೆ!