ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!

By Kannadaprabha NewsFirst Published Jan 25, 2020, 12:42 PM IST
Highlights

ಭಾರತಕ್ಕೂ ಕೊರೋನಾ ವೈರಸ್‌ ಭೀತಿ| ಕೇರಳದಲ್ಲಿ 7 ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ, 73 ಜನರ ಮೇಲೆ ಕಣ್ಗಾವಲು| ಬೆಂಗಳೂರು, ಹೈದರಾಬಾದ್‌, ಮುಂಬೈನಲ್ಲಿ ದಾಖಲಾದವರಿಗೆ ಸೋಂಕಿಲ್ಲ

ಮುಂಬೈ/ಕೊಚ್ಚಿ[ಜ.25]: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್‌ ಇದೀಗ ಭಾರತದಲ್ಲೂ ಆತಂಕ ಸೃಷ್ಟಿಸುತ್ತಿದೆ. ಚೀನಾದಿಂದ ಆಗಮಿಸಿರುವ ಮುಂಬೈನ ಇಬ್ಬರಿಗೆ ವೈರಾಣು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಕಳೆದ ಕೆಲವು ದಿನಗಳಿಂದ ಚೀನಾದಿಂದ ಕೇರಳಕ್ಕೆ ಆಗಮಿಸಿದ 80 ಜನರಿಗೆ ಸೋಂಕು ತಗಲಿರಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಚೀನಾದಿಂದ ಮರಳಿದ ಕೇರಳದ 80 ಜನರ ಪೈಕಿ 7 ಮಂದಿಗೆ ಕೊರೋನಾ ವೈರಸ್‌ನ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ಕೆರತ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 73 ಜನರಲ್ಲಿ ರೋಗ ಲಕ್ಷಣಗಳು ಕಂಡು ಬರದೇ ಇದ್ದರೂ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.

ಮುಂಬೈನಲ್ಲಿ ಇಬ್ಬರಿಗೆ ಸೋಂಕು ಶಂಕೆ:

ಮುಂಬೈನಲ್ಲಿ ಇಬ್ಬರಿಗೆ ಕೊರೋನಾ ವೈರಾಣು ತಗುಲಿದೆ ಎಂದು ಸಂದೇಹಿಸಲಾಗಿದೆ. ಚೀನಾದಿಂದ ಮರಳಿದ ಈ ಇಬ್ಬರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಅವರ ಮೇಲೆ ನಿಗಾ ಇಡಲಾಗಿದೆ.

ಮಾರಕ ಕೊರೋನಾ ವೈರಸ್‌ಗೆ ಚೀನಾ ತಲ್ಲಣ! ಮತ್ತಷ್ಟು ಬಲಿ

‘ಜನವರಿ 19ರಿಂದ ಶುಕ್ರವಾರದವರೆಗೆ ವಿದೇಶಗಳಿಂದ ಆಗಮಿಸಿದ 1789 ಪ್ರಯಾಣಿಕರನ್ನು ಛತ್ರಪತಿ ಶಿವಾಜಿ ಮಹಾರಾಜ್‌ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಇವರ ಪೈಕಿ ಚೀನಾ ಪ್ರವಾಸಕ್ಕೆ ತೆರಳಿ ಮರಳಿಬಂದ ಇಬ್ಬರಿಗೆ ಕರೋನಾ ವೈರಸ್‌ ಅಂಟಿರುವ ಶಂಕೆ ಉಂಟಾಗಿದೆ. ಈ ಕಾರಣ ಇವರನ್ನು ಕಸ್ತೂರ್ಬಾ ಆಸ್ಪತ್ರೆಗೆ ಮುಂಜಾಗ್ರತಾ ಕ್ರಮವಾಗಿ ದಾಖಲಿಸಿ ತಪಾಸಣೆ ನಡೆಸಲಾಗುತ್ತಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಈ ವೈರಾಣು ಶಂಕಿತರ ತಪಾಸಣೆಗೆಂದೇ ಪ್ರತ್ಯೇಕ ವಾರ್ಡ್‌ ಸೃಷ್ಟಿಸಲಾಗಿದೆ.

‘ಈ ಇಬ್ಬರಿಗೂ ಸ್ವಲ್ಪ ಕೆಮ್ಮು ಹಾಗೂ ನೆಗಡಿ ಇದೆ. ಇಬ್ಬರ ಆರೋಗ್ಯ ತಪಾಸಣೆ ಮುಂದುವರಿದಿದೆ. ಈವರೆಗೂ ಇವರಲ್ಲಿ ಕೊರೋನಾ ವೈರಸ್‌ ಇರುವುದು ಪತ್ತೆಯಾಗಿಲ್ಲ’ ಎಂದು ಆರೋಗ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಗಣರಾಜ್ಯೋತ್ಸವ ಸಂಭ್ರಮಾಚರಣೆ ರದ್ದುಗೊಳಿಸಿದ ಚೀನಾದ ಭಾರತೀಯ ರಾಯಭಾರ ಕಚೇರಿ!

click me!