ಕೊರೋನಾ ಭಾರೀ ಏರಿಕೆ: 84 ದಿನ ಬಳಿಕ ದೇಶದಲ್ಲಿ 4000ಕ್ಕೂ ಅಧಿಕ ಕೇಸ್‌

By Kannadaprabha NewsFirst Published Jun 4, 2022, 4:48 AM IST
Highlights

*  ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳಿಗೆ ಸೂಚನೆ
*  ಸೋಂಕಿಗೆ ಈಗಲೇ ತಡೆ ಒಡ್ಡಲು ನಿರ್ದೇಶನ
* ಸಕ್ರಿಯ ಕೇಸು 21,177ಕ್ಕೆ ಏರಿಕೆ
 

ನವದೆಹಲಿ(ಜೂ.04): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 4041 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಸುಮಾರು 84 ದಿನಗಳ ನಂತರ ದೇಶದಲ್ಲಿ 4000ಕ್ಕೂ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಸೋಂಕಿತರ ಸಂಖ್ಯೆಯು 21,177ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ 1,668 ಹೊಸ ಪ್ರಕರಣಗಳು ಸೇರಿಕೊಂಡಿವೆ.

ಇದೇ ವೇಳೆಯಲ್ಲಿ ಒಟ್ಟು 10 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 6, ದೆಹಲಿಯಲ್ಲಿ 2 ಹಾಗೂ ಮಹಾರಾಷ್ಟ್ರ ಹಾಗೂ ನಾಗಾಲ್ಯಾಂಡಿನಲ್ಲಿ ತಲಾ 1 ಸಾವು ವರದಿಯಾಗಿದೆ.
ದೈನಂದಿನ ಪಾಸಿಟಿವಿಟಿ ದರವು ಶೇ.0.95ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.73ಕ್ಕೆ ಏರಿಕೆಯಾಗಿದೆ. ಕೋವಿಡ್‌ ಚೇತರಿಕೆ ದರವು ಶೇ.98.74ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 193.83 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

Covid Crisis: ಕರ್ನಾಟಕದಲ್ಲಿ 259 ಕೇಸು: ಪಾಸಿಟಿವಿಟಿ ಶೇ.2.06ಕ್ಕೆ ಏರಿಕೆ!

ಟೆಸ್ಟಿಂಗ್‌ ಹೆಚ್ಚಿಸಿ: ಕರ್ನಾಟಕ ಸೇರಿ 5 ರಾಜ್ಯಕ್ಕೆ ಕೇಂದ್ರ ಪತ್ರ

ನವದೆಹಲಿ: 4ನೇ ಅಲೆ ಭೀತಿ ನಡುವೆಯೇ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಹೊಸ ಕೋವಿಡ್‌ ಕ್ಲಸ್ಟರ್‌ಗಳು ಉಗಮವಾಗಿ ಕೊರೋನಾ ಪ್ರಕರಣ ಮತ್ತು ಪಾಸಿಟಿವಿಟಿ ದರ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಶುಕ್ರವಾರ ಪತ್ರ ಬರೆದಿದ್ದಾರೆ. ಈ 5 ರಾಜ್ಯಗಳು ದೇಶದ ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚು ಪಾಲು ಹೊಂದಿವೆ. ಹೀಗಾಗಿ ಭೂಷಣ್‌ ಈ ರಾಜ್ಯಗಳಿಗೆ ಪತ್ರ ರವಾನಿಸಿದ್ದಾರೆ. ‘ನಿಮ್ಮ ರಾಜ್ಯಗಳಲ್ಲಿ ಕೋವಿಡ್‌ ನಿಗಾ ಕಾರ್ಯ ಚುರುಕುಗೊಳಿಸಬೇಕು. ಟೆಸ್ಟಿಂಗ್‌ ಹೆಚ್ಚಿಸಬೇಕು. ನಿಗದಿಪಡಿಸಿದ ಸ್ಯಾಂಪಲ್‌ಗಳ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸಬೇಕು’ ಎಂದು ಭೂಷಣ್‌ ಸೂಚಿಸಿದ್ದಾರೆ.

Covid Crisis: ದೇಶದಲ್ಲಿ ಕೊರೋನಾ ಭಾರೀ ಏರಿಕೆ: ಆತಂಕದಲ್ಲಿ ಜನತೆ..!

ಇದಲ್ಲದೆ, ‘ವಿಷಮಶೀತ ಜ್ವರ (ಐಎಲ್‌ಐ) ಹಾಗೂ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಮೇಲೆ ನಿಗಾ ಇಡಬೇಕು. ಇದರಿಂದ ಆರಂಭದಲ್ಲೇ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು ಕ್ಲಸ್ಟರ್‌:

ಕೇಂದ್ರ ಸರ್ಕಾರಕ್ಕೆ ರಾಜ್ಯಗಳು ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಮಾಹಿತಿ ನೀಡಿವೆ. ಇದರಲ್ಲಿ ಕೇರಳದ 11 ಜಿಲ್ಲೆಗಳು, ತಮಿಳುನಾಡಿನ 2 ಜಿಲ್ಲೆಗಳು, ಮಹಾರಾಷ್ಟ್ರದ 6 ಜಿಲ್ಲೆಗಳು, ತೆಲಂಗಾಣದ 1 ಜಿಲ್ಲೆ ಹಾಗೂ ಕರ್ನಾಟಕದ 1 ಜಿಲ್ಲೆ (ಬೆಂಗಳೂರು ನಗರ ಜಿಲ್ಲೆ) ಸೇರಿವೆ. ಈ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣ ಹಾಗೂ ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಹೊಸ ಕೋವಿಡ್‌ ಕ್ಲಸ್ಟರ್‌ಗಳಾಗಿ ಮಾರ್ಪಟ್ಟಿವೆ. ದೇಶದಲ್ಲಿ ಶುಕ್ರವಾರ 4 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.0.95ಕ್ಕೆ ಏರಿದೆ.
 

click me!