
ಸಂಭಲ್ (ಉ.ಪ್ರ.): ಕಳೆದ ವಾರವಷ್ಟೇ ಸಂಭಲ್ನ ವಿವಾದಿತ ಶಾಹಿ ಈದ್ಗಾ ಮಸೀದಿ ಸನಿಹದಲ್ಲಿ ಒತ್ತುವರಿ ತೆರವು ಕಾರ್ಯದ ವೇಳೆ ಪತ್ತೆ ಆಗಿದ್ದ ಸಂಭಲ್ನ ಭಸ್ಮ ಶಂಕರ ದೇವಾಲಯದ ಬಾವಿಯಲ್ಲಿ ಹಾನಿಯಾದ 3 ವಿಗ್ರಹಗಳು ಸೋಮವಾರ ಕಂಡುಬಂದಿವೆ.
ಹಿಂದೂ-ಮುಸ್ಲಿಂ ಗಲಭೆ ಕಾರಣ 1978ರಲ್ಲಿ ಮುಚ್ಚಲಾಗಿದ್ದ ಈ ದೇವಸ್ಥಾನ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಈ ಪತ್ತೆಯಾಗಿದ್ದು, ಡಿ.13ರಂದು ಅದನ್ನು ತೆರೆಯಲಾಗಿತ್ತು ಹಾಗೂ ಪೂಜೆಯನ್ನೂ ಶುರು ಮಾಡಲಾಗಿತ್ತು. ಹನುಮಂತ ಹಾಗೂ ಶಿವಲಿಂಗದ ವಿಕ್ರಹಗಳಿರುವ ಈ ದೇಗುಲದ ಬಳಿಯೇ ಬಾವಿಯೊಂದಿದ್ದು, ಅದನ್ನು 10ರಿಂ 12 ಅಡಿ ಆಳದ ವರೆಗೆ ಅಗೆದಾಗ ತಲೆ ಮುರಿದಿದ್ದ ಪಾರ್ವತಿಯ ಮೂರ್ತಿ ಲಭಿಸಿದೆ. ಅಂತೆಯೇ ಗಣೇಶ ಹಾಗೂ ಲಕ್ಷ್ಮೀ ದೇವಿಯ ವಿಗ್ರಹಗಳೂ ದೊರಕಿವೆ. ಈ ಕುರಿತು ಮಾತನಾಡಿರುವ ಸಂಭಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ, ‘ಈ ವಿಗ್ರಹಗಳು ಬಾವಿ ಒಳಗೆ ಹೇಗೆ ಹೋದವು ಎಂಬುದು ತಿಳಿದಿಲ್ಲ. ತನಿಖೆಯಿಂದ ಇದು ಬಹಿರಂಗವಾಗಲಿದೆ’ ಎಂದರು.
ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಕೇಳಿದಾಗ, ‘ಮೊದಲು ಅದರ ಪ್ರಾಚೀನತೆಯನ್ನು ಧೃಡಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು. ದೇವಾಲಯ ಹಾಗೂ ಬಾವಿಯ ಕಾರ್ಬನ್ ಡೇಟಿಂಗ್ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಜಿಲ್ಲಾಧಿಕಾರ ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ