Corona Spike: ದೇಶದಲ್ಲಿ 22775 ಕೇಸು, 406 ಸಾವು, ಹೆಚ್ಚಿದ ಆತಂಕ

By Kannadaprabha NewsFirst Published Jan 2, 2022, 3:00 AM IST
Highlights
  • ಸೋಂಕು 86 ದಿನಗಳ ಗರಿಷ್ಠ 2 ದಿನದಲ್ಲಿ 3 ಪಟ್ಟು ಕೇಸು ಏರಿಕೆ
  • ತಿಂಗಳ ಬಳಿಕ ಲಕ್ಷ ದಾಟಿದ ಸಕ್ರಿಯ ಕೇಸು

ನವದೆಹಲಿ(ಜ.02): ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 22,775 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು 86 ದಿನಗಳ ಗರಿಷ್ಠ ದೈನಂದಿನ ಪ್ರಕರಣಗಳ ಸಂಖ್ಯೆಯಾಗಿದೆ. ಶುಕ್ರವಾರಕ್ಕಿಂತ 6011 ಪ್ರಕರಣಗಳು ಹೆಚ್ಚು ದಾಖಲಾಗಿವೆ. ಇದೇ ಅವಧಿಯಲ್ಲಿ 406 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.48 ಕೋಟಿಗೆ ಮತ್ತು ಒಟ್ಟು ಸಾವು 4.81 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣ 1.04 ಲಕ್ಷ ದಾಟಿದೆ. ಇದರೊಂದಿಗೆ ತಿಂಗಳ ನಂತರ ಸಕ್ರಿಯ ಕೇಸು ಲಕ್ಷದ ಗಡಿ ದಾಟಿದಂತಾಗಿದೆ. ದೈನಂದಿನ ಪಾಸಿಟಿವಿಟಿ ದರವೂ 2.05ರಷ್ಟುದಾಖಲಾಗಿದೆ. ಅಲ್ಲದೇ ಕೇವಲ 2 ದಿನದಲ್ಲಿ ದೈನಂದಿನ ಪ್ರಕರಣಗಳ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಗುರುವಾರ 9195 ಕೇಸು ದಾಖಲಾಗಿದ್ದರೆ, ಶನಿವಾರ ಅದು 3 ಪಟ್ಟು ಹೆಚ್ಚಾಗಿದೆ.

ಶುಕ್ರವಾರ ಬೆಳಗ್ಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 16,764 ಹೊಸ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಕಳೆದ 64 ದಿನಗಳಲ್ಲಿ ದಾಖಲಾದ ದೈನಂದಿನ ಗರಿಷ್ಠ ಸೋಂಕಿನ ಸಂಖ್ಯೆ ಇದಾಗಿದೆ. ಇದೇ ವೇಳೆ 220 ಮಂದಿ ಈ ವ್ಯಾಧಿಗೆ ಬಲಿಯಾಗಿದ್ದಾರೆ. ಅಲ್ಲದೆ, ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ 91,361ಕ್ಕೆ ಜಿಗಿದಿದೆ.

ಈ ನಡುವೆ ಹೊಸ ಸೋಂಕಿನ ಸಂಖ್ಯೆಯಲ್ಲಿ 309 ಹೊಸ ಒಮಿಕ್ರೋನ್‌ ಕೇಸ್‌ಗಳು ಸೇರಿಕೊಂಡಿದ್ದು, ಇದು ಒಂದು ದಿನದಲ್ಲಿ ದಾಖಲಾದ ಅತೀ ಗರಿಷ್ಠ. ಇದರೊಂದಿಗೆ ದೇಶದಲ್ಲಿ ಒಮಿಕ್ರೋನ್‌ಗೆ ತುತ್ತಾದವರ ಸಂಖ್ಯೆ 1270ಕ್ಕೆ ಜಿಗಿದಿದೆ. ದೇಶದ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರೋನ್‌ ವ್ಯಾಪಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತಿಹೆಚ್ಚು(450), ದೆಹಲಿ (320), ಕೇರಳ (109), ಗುಜರಾತ್‌ನಲ್ಲಿ 97 ಒಮಿಕ್ರೋನ್‌ ಕೇಸ್‌ಗಳು ದಾಖಲಾಗಿವೆ. ಈವರೆಗೆ 144.54 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಬೆಂಗಳೂರಲ್ಲೂ ಹೆಚ್ಚಿದ ಕೊರೋನಾ

ನಗರದಲ್ಲಿ ಆರು ತಿಂಗಳ ನಂತರ ಗರಿಷ್ಠ ಸೋಂಕಿತ ಪ್ರಕರಣಗಳು (Covid 19 Cases) ಪತ್ತೆಯಾಗಿದ್ದು, ಶುಕ್ರವಾರ 353 ಪುರುಷರು, 303 ಮಹಿಳೆಯರು ಸೇರಿದಂತೆ 656 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ ಐವರು ಮೃತರಾಗಿದ್ದು, 211 ಮಂದಿ ಚೇತರಿಸಿಕೊಂಡಿದ್ದಾರೆ. ಜುಲೈ 1ರಂದು 676 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿತ್ತು. ಜು.7ರಂದು 611 ಪ್ರಕರಣ ಪತ್ತೆಯಾಗಿದ್ದು, ಈ ಆರು ತಿಂಗಳಲ್ಲಿನ ದಾಖಲಾಗಿದ್ದ ಅತ್ಯಧಿಕ ಸೋಂಕಿತ ಪ್ರಕರಣವಾಗಿದ್ದವು. ಇದಾದ ನಂತರ ಇಳಿಕೆಯಾಗಿದ್ದ ಪ್ರಕರಣಗಳ ಸಂಖ್ಯೆ ಶುಕ್ರವಾರ ಏರಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ.74 ದಾಖಲಾಗಿದೆ. ಈವರೆಗೆ 0.56ರಷ್ಟಿತ್ತು.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,63,618ಕ್ಕೆ ಏರಿಕೆಯಾಗಿದೆ. 211 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,39,931ಕ್ಕೆ ಏರಿಕೆಯಾಗಿದೆ. ಐವರ ಸಾವಿನಿಂದ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 16,400ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,286ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 18, ದೊಡ್ಡನೆಕ್ಕುಂದಿ 8, ಅರಕೆರೆ, ಎಚ್‌ಎಸ್‌ಆರ್‌ ಲೇಔಟ್‌ ತಲಾ 7, ಹಗದೂರು, ವರ್ತೂರು ವಾರ್ಡ್‌ಗಳಲ್ಲಿ ತಲಾ 6 ಮತ್ತು ಶಾಂತಲ ನಗರ, ಕೋರಮಂಗಲ, ಬೇಗೂರು ಮತ್ತು ಬ್ಯಾಟರಾಯನಪುರ ವಾರ್ಡ್‌ನಲ್ಲಿ ತಲಾ 5 ಪ್ರಕರಣಗಳು ಪತ್ತೆಯಾಗುತ್ತಿವೆ.

click me!