
ಚೆನ್ನೈ: ಪ್ರಾಚೀನ ತಮಿಳು ನಾಗರಿಕತೆ ಮತ್ತು ಅದರ ಜಾಗತಿಕ ಸಂಪರ್ಕವನ್ನು ದೃಢಪಡಿಸುವ ಅತ್ಯಂತ ಮಹತ್ವದ ಪುರಾತತ್ವ ಸಾಕ್ಷ್ಯ ಇದೀಗ ಬೆಳಕಿಗೆ ಬಂದಿದೆ. ಈಜಿಪ್ಟ್ ನ ಪ್ರಸಿದ್ಧ ವ್ಯಾಲಿ ಆಫ್ ದಿ ಕಿಂಗ್ಸ್ ಪ್ರದೇಶದಲ್ಲಿ, ಸುಮಾರು 2,000 ವರ್ಷಗಳಷ್ಟು ಹಳೆಯದಾದ ತಮಿಳು–ಬ್ರಾಹ್ಮಿ ಶಾಸನಗಳು ಪತ್ತೆಯಾಗಿವೆ. ಈ ಶಾಸನಗಳ ಪತ್ತೆಯಿಂದ, ಪ್ರಾಚೀನ ಕಾಲದಲ್ಲೇ ತಮಿಳು ವ್ಯಾಪಾರಿಗಳು ಹಾಗೂ ಪ್ರವಾಸಿಗರು ಈಜಿಪ್ಟ್ನಂತಹ ದೂರದ ದೇಶಗಳಿಗೆ ತೆರಳಿ ವ್ಯಾಪಾರ, ಸಂಶೋಧನೆ ಹಾಗೂ ಸಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರು ಎಂಬ ಮಹತ್ವದ ವಿಚಾರ ದೃಢಪಟ್ಟಿದೆ.
ಈ ಐತಿಹಾಸಿಕ ಅನ್ವೇಷಣೆಯನ್ನು ಸ್ವಿಜರ್ಲೆಂಡ್ನ ಖ್ಯಾತ ಶಾಸನಶಾಸ್ತ್ರ ವಿದ್ವಾಂಸರಾದ ಪ್ರೊ. ಇಂಗೋ ಸ್ಟ್ರಾಚ್ ಅವರು ಚೆನ್ನೈನಲ್ಲಿ ಬುಧವಾರ ನಡೆದ ತಮಿಳು ಶಾಸನಶಾಸ್ತ್ರದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದರು. ತಮ್ಮ ಸಂಶೋಧನಾ ಪ್ರಬಂಧದಲ್ಲಿ ಮಾತನಾಡಿದ ಅವರು, “ಈಜಿಪ್ಟ್ನ ರಾಜವಂಶೀಯ ಸಮಾಧಿಗಳ ನಡುವೆ ಇರುವ ರಾಮೆಸ್ಸೆಸ್–6 ಸಮಾಧಿ ಪ್ರದೇಶದಲ್ಲಿ ಒಟ್ಟು 6 ತಮಿಳು–ಬ್ರಾಹ್ಮಿ ಶಾಸನಗಳು ಹಾಗೂ ಸುಮಾರು 30 ಪ್ರಾಕೃತ ಭಾಷೆಯ ಶಾಸನಗಳು ಪತ್ತೆಯಾಗಿವೆ,” ಎಂದು ವಿವರಿಸಿದರು.
ಶಾಸನಗಳಲ್ಲಿ ಕಂಡುಬಂದ ವಿಶಿಷ್ಟ ಹೆಸರಿನ ಬಗ್ಗೆ ಮಾಹಿತಿ ನೀಡಿದ ಪ್ರೊ. ಸ್ಟ್ರಾಚ್, ‘ಚಿಕೈ ಕೊರ್ರನ್’ ಎಂಬ ಹೆಸರು ಕನಿಷ್ಠ 8 ವಿಭಿನ್ನ ಸ್ಥಳಗಳಲ್ಲಿ ಉಲ್ಲೇಖವಾಗಿದೆ. ತಮಿಳಿನಲ್ಲಿ ‘ಚಿಕೈ’ ಎಂದರೆ ಕಿರೀಟ, ‘ಕೊರ್ರನ್’ ಎಂದರೆ ನಾಯಕ ಎಂಬ ಅರ್ಥ ನೀಡುತ್ತದೆ,” ಎಂದು ವಿವರಿಸಿದರು. ಒಂದು ಪ್ರಮುಖ ಶಾಸನದಲ್ಲಿ, ‘ಚಿಕೈ ಕೊರ್ರನ್ ವರ ಕಂತ’ ಎಂದು ಬರೆಯಲಾಗಿದ್ದು, ಇದರ ಅರ್ಥ ‘ಚಿಕೈ ಕೊರ್ರನ್ ಇಲ್ಲಿ ಬಂದು ನೋಡಿದ’ ಎಂದು ಆಗುತ್ತದೆ ಎಂದು ಅವರು ವಿವರಿಸಿದರು.
ಈ ಶಾಸನಗಳ ಪತ್ತೆ, ಕ್ರಿ.ಪೂ. ಮತ್ತು ಕ್ರಿ.ಶ. ಆರಂಭಿಕ ಶತಮಾನಗಳಲ್ಲಿಯೇ ಭಾರತೀಯರು ವಿಶೇಷವಾಗಿ ತಮಿಳು ಪ್ರದೇಶದವರು ಸಮುದ್ರ ಮಾರ್ಗದ ಮೂಲಕ ಈಜಿಪ್ಟ್, ರೋಮ್ ಮತ್ತು ಪಶ್ಚಿಮ ಏಷ್ಯಾ ದೇಶಗಳಿಗೆ ವ್ಯಾಪಾರ, ಪ್ರವಾಸ ಹಾಗೂ ಸಂಸ್ಕೃತಿಕ ವಿನಿಮಯಕ್ಕಾಗಿ ತೆರಳುತ್ತಿದ್ದರು ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. “ಇದು ಕೇವಲ ವ್ಯಾಪಾರ ಸಂಬಂಧವಲ್ಲ, ತಮಿಳು ಸಂಸ್ಕೃತಿಯ ಜಾಗತಿಕ ಹಾಜರಾತಿಯೂ ಹೌದು,” ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಈ ಪತ್ತೆ, ತಮಿಳು ನಾಗರಿಕತೆ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿರದೆ, ಅಂತಾರಾಷ್ಟ್ರೀಯ ವ್ಯಾಪ್ತಿ ಮತ್ತು ಪ್ರಭಾವ ಹೊಂದಿದ್ದ ಪ್ರಾಚೀನ ಸಂಸ್ಕೃತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶಾಸನಶಾಸ್ತ್ರ, ಪುರಾತತ್ವ ಮತ್ತು ಇತಿಹಾಸ ಕ್ಷೇತ್ರಗಳಿಗೆ ಇದು ಅತ್ಯಂತ ಮಹತ್ವದ ಸಂಶೋಧನಾ ಸಾಧನೆಯಾಗಿದ್ದು, ಮುಂದಿನ ಅಧ್ಯಯನಗಳಿಗೆ ಹೊಸ ದಿಕ್ಕು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ