ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು?

By Kannadaprabha NewsFirst Published May 18, 2020, 8:21 AM IST
Highlights

ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು ಸಂಭವ| 12 ಕೋಟಿ ಜನರು ಬಡತನ ಕೂಪಕ್ಕೆ: ವರದಿ

ನವದೆಹಲಿ(ಮೇ.18): ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಅಂದಾಜು 13.5 ಕೋಟಿ ಜನ ಉದ್ಯೋಗ ಕಳೆದುಕೊಳ್ಳುವ ಮತ್ತು 12 ಕೋಟಿ ಜನ ಬಡತನದ ಕೂಪಕ್ಕೆ ತಳ್ಳುವ ಸಂಭವವಿದೆ. ಈ ಬೆಳವಣಿಗೆ ದೇಶದಲ್ಲಿ ಗ್ರಾಹಕ ಆದಾಯ, ವೆಚ್ಚ ಮತ್ತು ಉಳಿತಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವರದಿಯೊಂದು ಎಚ್ಚರಿಸಿದೆ.

ಅಮೆರಿಕ ಮೂಲದ ಅಂತಾರಾಷ್ಟ್ರೀಯ ಮ್ಯಾನೇಜ್‌ಮೆಂಟ್‌ ಸಲಹಾ ಸಂಸ್ಥೆ ‘ಆರ್ಥರ್‌ ಡಿ ಲಿಟ್ಟಲ್‌’ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಅನ್ವಯ, ಕೊರೋನಾ ಬಿಕ್ಕಟ್ಟು ಉದ್ಯೋಗ ನಷ್ಟ, ಬಡತನ ಹೆಚ್ಚಳ ಮತ್ತು ತಲಾದಾಯ ಕುಸಿತದ ಮೂಲಕ ದುರ್ಬಲ ವರ್ಗದವರನ್ನು ತೀವ್ರವಾಗಿ ಕಾಡಲಿದೆ. ಇದು ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.35ಕ್ಕೆ ಏರುವ ಮೂಲಕ 13.6 ಕೋಟಿ ಜನ ನಿರುದ್ಯೋಗಿಗಳಾಗಲಿದ್ದು, ಒಟ್ಟು ನಿರುದ್ಯೋಗಿಗಳ ಪ್ರಮಾಣ 17.4 ಕೋಟಿಗೆ ತಲುಪಲಿದೆ. ಬಡತನ ನಿರ್ಮೂಲನೆ ಯೋಜನೆಗೆ ಪೆಟ್ಟು ಬೀಳಲಿದ್ದು, ಹೊಸದಾಗಿ 12 ಕೋಟಿ ಜನ ಬಡತನಕ್ಕೆ ನೂಕಲ್ಪಡಲಿದ್ದಾರೆ ಎಂದು ವರದಿ ಹೇಳಿದೆ.

ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಸೇವೆ ಸಲ್ಲಿಸುವವರಿಗೆ ಬಿಗ್ ಆಫರ್ ನೀಡಿದ ಆನಂದ್ ಮಹೀಂದ್ರ !

ಈ ಬಿಕ್ಕಟ್ಟಿನಿಂದ ಹೊರಬರಲು ಅತ್ಯಂತ ದುರ್ಬಲ ವರ್ಗದವರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಕ್ಷಣೆ, ಗ್ರಾಮೀಣ ಆರ್ಥಿಕತೆಗೆ ಮರುಚಾಲನೆ, ಹೆಚ್ಚು ಅಪಾಯ ಎದುರಿಸುತ್ತಿರುವ ವಲಯಕ್ಕೆ ನೇರ ನೆರವು, ಮೇಕ್‌ ಇನ್‌ ಇಂಡಿಯಾ 2 ಜಾರಿ, ಕಾರ್ಮಿಕ ನೀತಿಯಲ್ಲಿ ಸುಧಾರಣೆ, ಬ್ಯಾಂಕಿಂಗ್‌ ಮತ್ತು ಹಣಕಾಸು ಮಾರುಕಟ್ಟೆವಲಯದಲ್ಲಿ ಸುಧಾರಣೆ ಆಗಬೇಕಿದೆ ಎಂದು ವರದಿ ಸಲಹೆ ನೀಡಿದೆ.

ಇದೇ ವೇಳೆ ಕೊರೋನಾ ಬಿಕ್ಕಟ್ಟು ನಿರ್ವಹಣೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಘೋಷಿಸಿದ ಕ್ರಮಗಳನ್ನು ವರದಿ ಶ್ಲಾಘಿಸಿದೆ. ಸ್ವಾವಲಂಬನೆ ಮಂತ್ರ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಸಾಧಿಸಲು ಉತ್ತಮ ಹೆಜ್ಜೆ. ಆದರೆ ಈ ವಿಷಯದಲ್ಲಿ ಸರ್ಕಾರ ಮತ್ತು ಆರ್‌ಬಿಐ ಇನ್ನಷ್ಟುಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.

click me!