
ನವದೆಹಲಿ(ಜೂ.18): ಕೋವಿಡ್ ಪ್ರಕರಣಗಳ ಸಂಖ್ಯೆ ಗುರುವಾರಕ್ಕಿಂತ ಶುಕ್ರವಾರ ಮತ್ತಷ್ಟು ಏರಿಕೆ ಕಂಡಿದ್ದು, ಒಂದೇ ದಿನ 12,847 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 63,063ಕ್ಕೆ ಏರಿದೆ. 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಸೋಂಕು ದಿನೇ ದಿನೇ ಏರತೊಡಗಿದ್ದು, ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. 7985 ಮಂದಿ ಮಾತ್ರ ಗುಣಮುಖರಾದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 4,848ರಷ್ಟುಏರಿ, 63 ಸಾವಿರದ ಗಡಿ ದಾಟಿದೆ. ಗುರುವಾರವಷ್ಟೇ 12,213 ಪ್ರಕರಣ ದಾಖಲಾಗಿದ್ದವು. ಅದು 111 ದಿನದ ಗರಿಷ್ಠವಾಗಿತ್ತು.
ಕೊರೋನಾ ಕಾಟ: ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್
ಈ ನಡುವೆ, ಪರೀಕ್ಷಾ ಪ್ರಮಾಣ ಹೆಚ್ಚಿದ್ದು, 5.19 ಲಕ್ಷ ಪರೀಕ್ಷೆ ನಡೆಸಲಾಗಿದೆ. ಸೋಂಕಿನ ಏರಿಳಿತದ ಮಾಪನವಾದ ಪಾಸಿಟಿವಿಟಿ ದರ ಗುರುವಾರದ ಶೇ.2.35ರಿಂದ ಶುಕ್ರವಾರ ಶೇ.2.47ಕ್ಕೆ ಏರಿದೆ. ವಾರದ ಪಾಸಿಟಿವಿಟಿ ದರ ಶೇ.2.41ರಷ್ಟಿದೆ. ಚೇತರಿಕೆ ದರ ಶೇ.98.64ರಷ್ಟು ದಾಖಲಾಗಿದೆ.
ಶುಕ್ರವಾರದ 14 ಸಾವುಗಳಲ್ಲಿ 8 ಸಾವು ಕೇರಳದಲ್ಲೇ ದಾಖಲಾಗಿವೆ. ಉಳಿದಂತೆ ಮಹಾರಾಷ್ಟ್ರದ 3, ದಿಲ್ಲಿಯ 2 ಹಾಗೂ ಕರ್ನಾಟಕದ 1- ಇದರಲ್ಲಿ ಸೇರಿವೆ. ಸಾವಿನ ದರ ಶೇ.1.21 ಇದೆ. ಈ ನಡುವೆ, 195.84 ಕೋಟಿ ಡೋಸ್ ಕೊರೋನಾ ಲಸಿಕೆಗಳನ್ನು ಈವರೆಗೆ ವಿತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ